ಬೆಂಗಳೂರಿನ ಹೋಟೆಲ್ಗಳಲ್ಲಿ ಸದ್ಯಕ್ಕೆ ಹೋಟೆಲ್ ಊಟ-ತಿಂಡಿ ದರ ಏರಿಕೆ ಇಲ್ಲ: ಪಿಸಿ ರಾವ್ ಸ್ಪಷ್ಟನೆ
ಬೆಂಗಳೂರು, ನವೆಂಬರ್ 24: ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಹೋಟೆಲ್ಗಳಲ್ಲಿನ ಊಟ, ತಿಂಡಿ, ಟೀ, ಕಾಫಿಗಳು ದುಬಾರಿ ಆಗುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಎರಡು ಸಭೆ ನಡೆಸಿದ ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಸದ್ಯಕ್ಕೆ ದರಿ ಏರಿಕೆ ಮಾಡದಿರಲು ತೀರ್ಮಾನಿಸಿದೆ.
ಹಾಲಿನ ದರ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಾಗುತ್ತಲೇ ಇವೆ. ಅಡುಗೆ ಸಿಲಿಂಡರ್ಗೆ ಹಣದಲ್ಲಿ ನೀಡುತ್ತಿದ್ದ ಮರುಪಾವತಿ (ಸಬ್ಸಿಡಿ) ಸಹ ಸ್ಥಗಿತಗೊಂಡು ಸಾಕಷ್ಟು ದಿನಗಳಾಗಿವೆ. ಪರಿಸ್ಥಿತಿ ಹೀಗಿರುವಾಗ ಹೋಟೆಲ್ ತಿಂಡಿ, ತಿನಿಸು, ಟೀ, ಕಾಫಿ ದರ ಏರಿಕೆಯ ಮಾತುಗಳು ಕೇಳಿಬಂದಿದ್ದವು.
ಈ ಸಂಬಂಧ ಗುರುವಾರ ಒನ್ಇಂಡಿಯಾಗೆ ಪ್ರತಿಕ್ರಿಯಿಸಿರುವ ಸಂಘ ಅಧ್ಯಕ್ಷ ಪಿ.ಸಿ.ರಾವ್ ಅವರು, ನವೆಂಬರ್ 18 ಹಾಗೂ ನವೆಂಬರ್ 23ರಂದು ಎಲ್ಲ ವಿಧದ ಹೋಟೆಗಳ ಮಾಲೀಕರು ಸಭೆ ನಡೆಸಲಾಗಿದೆ. ಕೊರೋನಾ ನಂತರ ಚೇತರಿಸಿಕೊಳ್ಳುತ್ತಿರುವ ಉದ್ಯಮ ಮುಂದುವರಿಸುವುದು, ದಿಢೀರ್ ದರ ಏರಿಕೆ ಮಾಡಿದರೆ ಗ್ರಾಹಕರು ಕಡಿಮೆಯಾಗಿ ನಷ್ಟ ಸಂಭವಿಸಬಹುದು, ಸದ್ಯಕ್ಕೆ ದರ ಏರಿಕೆ ಅಗತ್ಯವಿದೆಯೇ ಎಂದೆಲ್ಲ ಚರ್ಚೆ ಮಾಡಲಾಗಿದೆ.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸದ್ಯಕ್ಕೆ ಬೆಂಗಳೂರಿನ ಹೋಟೆಲ್ಗಳಲ್ಲಿ ಊಟ, ತಿಂಡಿ, ತಿನಿಸು, ಟೀ, ಕಾಫಿ ದರ ಏರಿಕೆ ಮಾಡುವುದಿಲ್ಲ ಎಂದು ಪಿ.ಸಿ.ರಾವ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹೋಟೆಲ್ ಊಟ, ತಿಂಡಿ ಅವಲಂಬಿಸಿದ್ದ ಲಕ್ಷಾಂತರ ಗ್ರಾಹಕರ ದರ ಏರಿಕೆಯ ಆತಂಕ ದೂರುವಾಗಿದೆ.
ಹೋಟೆಲ್ನಲ್ಲಿ ದರ ಏರಿಕೆಯ ನಾಮಫಲಕ!
ಎರಡು ಸಭೆ ನಡೆಸಿರುವ ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಿದೆ. ಇತ್ತ ಚಾಮರಾಜಪೇಟೆಯ ಬೈಟು ಕಾಫಿ ಹೋಟೆಲ್ ಮುಂದೆ ದರ ಏರಿಕೆ ಆಗಲಿದೆ ಎಂದು ನಾಮಫಲಕ ಹಾಕಿರುವುದು ಅಚ್ಚರಿ ಮೂಡಿಸಿದೆ.
ಈ ಹೋಟೆಲ್ ಮುಂದೆ 'ತುಪ್ಪ, ಬೆಣ್ಣೆ, ಕಾಫಿ ಪುಡಿ ಇತ್ಯಾದಿ ವಸ್ತುಗಳು ದುಬಾರಿ ಆಗಿರುವುದರಿಂದ ದಿನಾಂಕ 24/11/2022 ರಿಂದ ಕಾಫಿ ಮತ್ತು ದೋಸೆ ದರದಲ್ಲಿ ಬದಲಾವಣೆ ಆಗಲಿದೆ. ಗ್ರಾಹಕರು ದಯಮಾಡಿ ಸಹಕರಿಸಬೇಕು ಎಂದು ಕೇಳಿಕೊಳ್ಳುತ್ತೇವೆ' ಎಂದು ನಾಮಫಲಕ ಹಾಕಲಾಗಿದೆ. ಅನೇಕ ಗ್ರಾಹಕರು ಇದನ್ನು ನಿಜವೆಂದು ನಂಬಿ ಹೆಚ್ಚಿನ ಹಣ ಕೊಡುತ್ತಿದ್ದಾರೆ. ಈ ಬಗ್ಗೆ ಸಂಘ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications