ರಾಷ್ಟ್ರ ನಾಯಕರ ಚಿತ್ರಗಳ ಮೇಲೆ ಮೂತ್ರ ವಿಸರ್ಜನೆ: ಭಾರಿ ಟೀಕೆ
ಬೆಂಗಳೂರು, ಜನವರಿ 17: ಉದ್ಯಾನ ನಗರಿಯಾದ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶವಾಗಿರುವ ಜಯನಗರದಲ್ಲಿ ಸಾರ್ವಜನಿಕರು ಗೋಡೆಯಲ್ಲಿ ಬರೆದಿರುವ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ನಿತ್ಯ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ಫೋಟೊಗಳು ಹಾಗೂ ವಿಡಿಯೋಗಳನ್ನು ಹಾಕುವ ಮೂಲಕ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರವಿಕೃಷ್ಣಾರೆಡ್ಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ದೇಶಾದ್ಯಂತ ಸ್ವಚ್ಛಭಾರತ ಅಭಿಯಾನ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಪಕ ಮನವಿ ಮಾಡುತ್ತಿದ್ದರೂ, ಬಿಜೆಪಿ ಶಾಸಕ ವಿಜಯ್ ಕುಮಾರ್ ಸ್ವಕ್ಷೇತ್ರವಾದ ಜಯನಗರದಲ್ಲಿ ನಿತ್ಯವೂ ಸ್ವಾತಂತ್ರ್ಯ ಹೋರಾಟಗಾರರ ಗೋಡೆ ಬರಹಗಳ ಮೇಲೆ ನಿತ್ಯ ಮೂತ್ರ ವಿಸರ್ಜನೆ ಕುರಿತು ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲಕೃಷ್ಣ ಗೋಖಲೆ, ಚಂದ್ರಶೇಖರ್ ಆಜಾದ್ ರಂತಹವರ ಗೋಡೆ ಚಿತ್ರಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಈ ಕುರಿತು ರವಿಕೃಷ್ಣಾ ರೆಡ್ಡಿ ನಿರಂತರ ಅಭಿಯಾನ ನಡೆಸಿದರು.

ಮೊದಲು ಸಾರ್ವಜನಿಕರು ಗೋಡೆಗಳಿಗೆ ಬರಹಗಳಿಗೆ ಚಿತ್ರಗಳಿಗೆ ಮೂತ್ರ ವಿಸರ್ಜನೆ ಮಾಡುವ ಫೋಟೋಗಳನ್ನು ತೆಗೆದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಅವರು, ನಂತರ ಆ ಪ್ರದೇಶದಲ್ಲೇ ನಿಂತು ಮೂರು ನಿಮಿಷಗಳ ವಿಡೀಯೋಗಳನ್ನು ಚಿತ್ರೀಕರಿಸಿ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಿದ್ದಾರೆ.

ಫೋಟೊ ಹಾಗೂ ವಿಡಿಯೋ ಅಪ್ ಲೋಡ್ ಮಾಡಿದ ನಂತರ ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಯಿಸಿದ್ದಾರೆ. ಸ್ಥಳೀಯ ಶೌಚಾಲಯಗಳ ಕೊರತೆ ಇದೆ. ಜಯನಗರದ ಬಿಎಂಎಸ್ ಕಾಲೇಜು, ಶಾಸಕ ವಿಜಯಕುಮಾರ್ ಕಚೇರಿ ಕೂಗಳತೆಯಲ್ಲಿಯೂ ಸಹ ಅವ್ಯವಸ್ಥೆ ಇದೆ ಎಂದು ರವಿಕೃಷ್ಣಾ ರೆಡ್ಡಿ, ಸ್ಥಳದಲ್ಲಿರುವ ಸಮಸ್ಯೆಯ ತೀವ್ರತೆಯನ್ನು ವಿವರಿಸಿದ್ದಾರೆ.












Click it and Unblock the Notifications