ಪೆರಿಫೆರಲ್ ರಸ್ತೆ: ದಶಕದ ಬಳಿಕ ಕಡತದ ಧೂಳು ಝಾಡಿಸಿದ ಸರ್ಕಾರ
ಬೆಂಗಳೂರು, ಆಗಸ್ಟ್ 6:ದಶಕಗಳ ಬಳಿಕ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಮರುಜೀವ ನೀಡಿದ್ದು, ಎಲಿವೇಟೆಡ್ ರಸ್ತೆ ಮಾದರಿಯಲ್ಲೇ ನಿರ್ಮಿಸಲು ನಿರ್ಧರಿಸಲಾಗಿದೆ.
ಈ ಯೋಜನೆಯು ಕೆಲವು ಆರ್ಥಿಕ ಕಾರಣಗಳಿಗಾಗಿ ಹಿಂದೇಟು ಹಾಕಿತ್ತು, ಇದರಿಂದಾಗಿ ರೈತರಿಗೆ ಪರಿಹಾರ ನೀಡಲು ಕೂಡ ಸಾಧ್ಯವಾಗಿರಲಿಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ ಅನೇಕ ಕಸರತ್ತುಗಳನ್ನು ನಡೆಸಿದ ನಂತರ ಯೋಜನಾ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಎಲಿವೇಟೆಡ್ ರಸ್ತೆಗೆ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಸರ್ಕಾರ ಇದಕ್ಕೆ ಒಪ್ಪಗೆ ನೀಡುವ ಸಾಧ್ಯತೆ ಇದೆ.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್ ರಿಂಗ್ ರಸ್ತೆ!
2007ರಲ್ಲಿ ಪಿಆರ್ಆರ್ ಯೋಜನೆಗೆ ಸರ್ಕಾರದಿಂದ ಸಮ್ಮತಿ ದೊರೆತಿತ್ತು. 65 ಕಿ.ಮೀ ಉದ್ದದ ರಸ್ತೆಗೆ 2011ರಲ್ಲಿ ಭೂಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಬಿಡಿಎ ಜಮೀನನ್ನು ಸ್ವಾಧೀನಕ್ಕೆ ಪಡೆಯದ ಕಾರಣ ತಾಂತ್ರಿಕವಾಗಿ ರೈತರಲ್ಲೇ ಉಳಿದಿದೆ.
2016ರಲ್ಲಿ ಪಿಆರ್ಆರ್ ಯೋಜನೆಯನ್ನು ಎನ್ಎಚ್ಎಐ ತನ್ನ ತೆಕ್ಕೆಗೆ ತೆಗೆದುಕೊಳ್ಳುವಂತೆ ಸರ್ಕಾರ ಕೇಂದ್ರಕ್ಕೆ ಸಲಹೆ ನೀಡಿತ್ತು. ಭೂಸ್ವಾಧೀನ ವೆಚ್ಚವನ್ನು ರಾಜ್ಯ ಭರಿಸಿದರೆ ಮಾತ್ರ ಯೋಜನೆ ಕೈಗೆತ್ತಿಕೊಳ್ಳಬಹುದೆಂದು ತಿಳಿಸಿತ್ತು.
2012ರಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದ್ದ ಸಂದರ್ಭದಲ್ಲಿ 100 ಕಿ.ಮೀ ಅಗಲದ ರಸ್ತೆಗೆ 11,950 ಕೋಟಿ ರೂ ವೆಚ್ಚವಾಗುವುದೆಂದು ಅಂದಾಜಿಸಲಾಗಿತ್ತು. ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ವೆಚ್ಚದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ.
ಕಾಂಗ್ರೆಸ್ ಸರ್ಕಾರ ಪ್ರಬಲ ಲಾಬಿ ನಡೆಸದ ಕಾರಣ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ವೇಳೆ ಪಿಆರ್ಆರ್ಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.