ಟ್ರಾಫಿಕ್ ಸುನಾಮಿಗೆ ಸಿಲುಕಿ ಪರದಾಡಿದ ಬೊಮ್ಮನಹಳ್ಳಿ ಜನ
ಬೆಂಗಳೂರು: ಬೊಮ್ಮನಹಳ್ಳಿ ಜನ ಇಂದು ಹೈರಾಣಾಗಿ ಹೋದರು. 1 ಕಿಲೋ ಮೀಟರ್ ತೆರಳಲು 2-3 ಗಂಟೆ ರಸ್ತೆಯಲ್ಲೇ ಪರದಾಡಿದರು. ಅರೆರೆ ಏನಾಯ್ತು ಅಂದ್ರಾ? ಆಗಿದ್ದು ಇಷ್ಟೇ ಬೊಮ್ಮನಹಳ್ಳಿ (Bommanahalli) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಉಮಾಪತಿ ಶ್ರೀನಿವಾಸ್ (Umapathy) ನಾಮಪತ್ರ ಸಲ್ಲಿಸಿದರು, ಈ ವೇಳೆ ಪೊಲೀಸರ ಎಡವಟ್ಟಿನಿಂದ ಭರ್ಜರಿ ಟ್ರಾಫಿಕ್ ಉಂಟಾಗಿತ್ತು.
ಮೊದಲೇ ಇದ್ದ ಮಾಹಿತಿ ಪ್ರಕಾರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇಂದು ನಾಮಪತ್ರ ಸಲ್ಲಿಸುವುದು ಪಕ್ಕಾ ಆಗಿತ್ತು. ಹೀಗಾಗಿ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿ ಸುತ್ತಮುತ್ತ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಕೂಡ ಎದುರಾಗಲಿದೆ ಎನ್ನಲಾಗಿತ್ತು. ಇಷ್ಟೆಲ್ಲಾ ಗೊತ್ತಿದ್ರೂ ಬೆಂಗಳೂರು ಸಂಚಾರಿ ಪೊಲೀಸರು ಮಾಡಿದ ಎಡವಟ್ಟು ಒಂದೆರಡಲ್ಲ. ಇದರ ಪರಿಣಾಮವನ್ನ ಎದುರಿಸಿದ್ದು ಮಾತ್ರ ಸಾಮಾನ್ಯ ಜನರು. ರಸ್ತೆಯಲ್ಲಿ ಸುಡು ಬಿಸಿಲಿನ ನಡುವೆ ಜನ ಅಕ್ಷರಶಃ ನರಕ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

2-3 ಗಂಟೆ ಕಾಲ ಪರದಾಟ!
ಬೆಗೂರು ಮೂಲಕ ಬೊಮ್ಮನಹಳ್ಳಿ ಸಂಪರ್ಕಿಸುವ ರಸ್ತೆ, ದೇವರ ಚಿಕ್ಕನಹಳ್ಳಿಯಿಂದ ಬೊಮ್ಮನಹಳ್ಳಿಗೆ ಲಿಂಕ್ ಮಾಡುವ ರಸ್ತೆಯಲ್ಲಿ ಅಕ್ಷರಶಃ ನರಕ ನಿರ್ಮಾಣವಾಗಿತ್ತು. ಸಾಮಾನ್ಯ ದಿನಗಳಲ್ಲೇ ಈ ರಸ್ತೆಗಳಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇರುತ್ತೆ. ಅದರಲ್ಲೂ ನಾಮಿನೇಷನ್ ಫೈಲಿಂಗ್ ಅಂದ್ರೆ ಕೇಳಬೇಕಾ? ಜನಸಾಗರ ಹರಿದು ಬಂದಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸೂಕ್ತ ಬದಲಿ ದಾರಿ ಕಲ್ಪಿಸದ ಸಂಚಾರಿ ಪೊಲಿಸರು ಎಡವಟ್ಟು ಮಾಡಿದ್ದರು. ಪರಿಣಾಮ ಜನರು ರಣಬಿಸಿಲಿನ ಬೇಗೆಯಲ್ಲೇ ರಸ್ತೆ ನಡುವೆ 2-3 ಗಂಟೆ ಕಾಲ ಪರದಾಡಿದರು.
ಕಾಂಗ್ರೆಸ್ ಭರ್ಜರಿ ರೋಡ್ ಶೋ
ಬಿಜೆಪಿ ವಿರುದ್ಧ ಬೊಮ್ಮನಹಳ್ಳಿಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸಿದ್ದು, ಈ ಅಖಾಡಕ್ಕೆ ಬೆಂಗಳೂರಿನ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ಎಂಟ್ರಿ ಆಗಿದೆ. ಸತತ 3 ಬಾರಿ ಬಿಜೆಪಿ ಬೊಮ್ಮನಹಳ್ಳಿಯಲ್ಲಿ ಗೆದ್ದಿದೆ. ಸತೀಶ್ ರೆಡ್ಡಿ ಇಲ್ಲಿಂದಲೇ ಸತತ 3 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇದೀಗ ಮಾಜಿ ಸಚಿವ ಹಾಗೂ ಬೊಮ್ಮನಹಳ್ಳಿ ಪಕ್ಕದ ಕ್ಷೇತ್ರ ಅಂದರೆ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅಖಾಡ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ ವೇಳೆ ಖುದ್ದು ರಾಮಲಿಂಗಾ ರೆಡ್ಡಿ ಹಾಜರಿದ್ದರು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದ್ದ ಸತೀಶ್ ರೆಡ್ಡಿ 62,993 ಮತ ಪಡೆದಿದ್ದರು. ಅವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ 49,353 ಮತ ಪಡೆದಿದ್ದರು. 2013ರಲ್ಲಿ ಸ್ಪರ್ಧಿಸಿದ್ದ ಸತೀಶ್ ರೆಡ್ಡಿ 86,552 ಮತಗಳನ್ನು ಪಡೆದರೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ನಾಗಭೂಷಣ್ ರೆಡ್ಡಿ 60,700 ಮತ ಪಡೆದು ದೊಡ್ಡ ಅಂತರದ ಸೋಲು ಕಂಡಿದ್ದರು. ಹೀಗೆ ಸತತ 2ನೇ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದ್ದರು ಶಾಸಕ ಸತೀಶ್ ರೆಡ್ಡಿ.
ಸತೀಶ್ ರೆಡ್ಡಿ ಭರ್ಜರಿ ಪ್ರಚಾರ
ಅಂದಹಾಗೆ ಬಿಜೆಪಿ ಮೊದಲ ಪಟ್ಟಿಯಲ್ಲೇ ಶಾಸಕ ಸತೀಶ್ ರೆಡ್ಡಿ ಹೆಸರು ಫೈನಲ್ ಆದ ಹಿನ್ನೆಲೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಮತ್ತೊಂದ್ಕಡೆ ಟಿಕೆಟ್ ಕನ್ಫರ್ಮ್ ಆಗುವ ಮೊದಲಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಕೂಡ ಪ್ರಚಾರ ಆರಂಭಿಸಿದ್ದರು. ಇಷ್ಟೆಲ್ಲದರ ನಡುವೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅವರು ಅಖಾಡಕ್ಕೆ ಧುಮುಕಿರುವುದು ಕಾಂಗ್ರೆಸ್ ಬಲ ಹೆಚ್ಚಿಸಿದೆ. ಜಿದ್ದಾಜಿದ್ದಿನ ಕಣವಾಗಿ ಮಾರ್ಪಡುತ್ತಿರುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ, ಮೊಟ್ಟಮೊದಲ ಬಾರಿ ಕೇಸರಿ ಬಾವುಟ ಹಾರಿಸುವ ನಿರೀಕ್ಷೆ ಸ್ಥಳೀಯ ಕಾಂಗ್ರೆಸ್ ಮುಖಂಡರದ್ದು.

ಸಿನಿಮಾ ತಾರೆಯರ ಎಂಟ್ರಿ?
ಈಗಾಗಲೇ ನಟ ದರ್ಶನ್ ಕೆಲವೇ ತಿಂಗಳ ಅಂತರದಲ್ಲಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಶಾಸಕ ಸತೀಶ್ ರೆಡ್ಡಿ ಪರ ಪರೋಕ್ಷವಾಗಿ ಮತಯಾಚನೆ ಮಾಡಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪರವಾಗಿ ಮತ್ತಷ್ಟು ಸಿನಿಮಾ ತಾರೆಯರು ಪ್ರಚಾರ ನಡೆಸುವ ಸಾಧ್ಯತೆ ಇದೆ. ಹೀಗೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿ ನಿರೀಕ್ಷೆ ಮಾಡಬಹುದು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications