ಕನ್ನಡ ಕಾರ್ಯಕರ್ತರ ಬಂಧನ : ಜೈನರು ಕೊಟ್ಟ ದೂರಿನಲ್ಲಿ ಏನಿದೆ?
ಬೆಂಗಳೂರು, ಆಗಸ್ಟ್ 19 : ಜೈನ ಪ್ರಾರ್ಥನಾ ಮಂದಿರದ ಬಳಿ ಗದ್ದಲ ಎಬ್ಬಿಸಿದ ಕಾರಣಕ್ಕಾಗಿ ಕನ್ನಡಪರ ಹೋರಾಟಗಾರರ ಬಂಧನವಾಗಿದೆ. ಜೈನ ಸಮುದಾಯದವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಶುಕ್ರವಾರ ಸಂಜೆ ಪ್ರಾರ್ಥನಾ ಮಂದಿರದ ಮುಂಭಾಗವಿದ್ದ ಹಿಂದಿ ಬ್ಯಾನರ್ ನೋಡಿ ಕೆಲವರು ಗದ್ದಲ ಮಾಡಿದ್ದಾರೆ. ಬಲವಂತದಿಂದ ಅದನ್ನು ತೆರವು ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾನರ್ ತೆರವು ಮಾಡುವಾಗ ನಮ್ಮ ಧರ್ಮ ಗುರುಗಳ ಫೋಟೋಗಳಿಗೆ ಹಾನಿ ಮಾಡಲಾಗಿದೆ. ಬ್ಯಾನರ್ ತೆರವು ಮಾಡುವಾದ ಅದನ್ನು ವಿಡಿಯೋ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ವಿಡಿಯೋದ ಪ್ರತಿಯನ್ನು ಲಗತ್ತಿಸಲಾಗಿದೆ.

ಕರ್ಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ದೂರಿನ ಆಧಾರದ ಮೇಲೆ ಭಾನುವಾರ 6 ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ.
"ಶನಿವಾರ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ 5 ರಿಂದ ಜನರ ಗುಂಪು ಜೈನರ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿದ್ದ ಬ್ಯಾನರ್ ತೆರವು ಮಾಡಿದ್ದಾರೆ. ಬ್ಯಾನರ್ನಲ್ಲಿ ಮುಂದಿನ ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದ ವಿವರ ಹಿಂದಿಯಲ್ಲಿ ಮುದ್ರಿತವಾಗಿತ್ತು. ದೂರಿನ ಅನ್ವಯ ಪ್ರಕರಣ ದಾಖಲಾಗಿದೆ" ಎಂದು ಪೂರ್ವ ವಲಯ ಡಿಸಿಪಿ ಹೇಳಿದ್ದಾರೆ.












Click it and Unblock the Notifications