ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆ
ಬೆಂಗಳೂರು, ಜೂನ್ 29: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ, ಸೌಕರ್ಯ, ದರ ಪಟ್ಟಿ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ವಿಧಾನಸಭೆಯಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವ ಸಭೆ ನಡೆಯಿತು. ಅಂತಿಮವಾಗಿ ಸರ್ಕಾರದ ಬೇಡಿಕೆಗಳಿಗೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸಮ್ಮತಿಸಿದ್ದಾರೆ.
Recommended Video
ಪ್ರಮುಖವಾಗಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕು ಎಂದು ಬೇಡಿಕೆಯಿಡಲಾಗಿತ್ತು. ಆದರೆ, ಇದಕ್ಕೆ ಕಷ್ಟ ಎಂದು ಹೇಳುತ್ತಿದ್ದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸಿಎಂ, ಸಚಿವರ ಮಾತುಕತೆ ಬಳಿಕ ಒಪ್ಪಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ 'ನಾಳೆ ತೀರ್ಮಾನ ಹೇಳುತ್ತೇವೆ' ಎಂದು ಆಸ್ಪತ್ರೆ ಮುಖ್ಯಸ್ಥರು ಸಮಯ ಕೇಳಿದರಾದರೂ, ಸರ್ಕಾರಕ್ಕೆ ಅದಕ್ಕೆ ಒಪ್ಪಲಿಲ್ಲ. ಈಗಲೇ, ಇಲ್ಲೇ ನಿರ್ಧರಿಸಿ ನಿರ್ಧಾರ ಹೇಳಿ ಎಂದು ಗಡುವು ನೀಡಿತ್ತು. ಈ ಹಿನ್ನೆಲೆ ಇಂದಿನ ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಮುಂದೆ ಓದಿ....

ಕೊವಿಡ್ ಚಿಕಿತ್ಸೆ ಸಾಮರ್ಥ್ಯ ಇಲ್ಲ ಎಂದ ಖಾಸಗಿ ಆಸ್ಪತ್ರೆಗಳು
ನಾಳೆಯೊಳಗೆ 2500 ಬೆಡ್ ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆ ಗೆ ಮೀಸಲಿಡಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಖಾಸತಿ ಆಸ್ಪತ್ರೆಗಳ ಮುಖ್ಯಸ್ಥರು, ''ನಮ್ಮಲ್ಲೂ ಸಮಸ್ಯೆಗಳಿವೆ, ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯ ಇಲ್ಲ'' ಎಂದು ವ್ಯವಸ್ಥಾಪಕರು ಸರ್ಕಾರಕ್ಕೆ ತಿಳಿಸಿದರು. ''ಸಮಸ್ಯೆಗಳು ಇದ್ದೇ ಇದೆ, ಅದರೆ ನಾಳೆಯೊಳಗೆ ನಮಗೆ ಎರಡೂವರೆ ಸಾವಿರ ಬೆಡ್ ಸಿಗಲೇಬೇಕು, ಸಮಸ್ಯೆಗಳನ್ನು ಪರಿಹಾರ ಮಾಡೋಣ, ನಿಮ್ಮ ನಿರ್ಧಾರ ಈಗಲೇ ಸರ್ಕಾರಕ್ಕೆ ತಿಳಿಸಬೇಕು'' ಎಂದು ಸಭೆಯಲ್ಲಿ ಹೇಳಿದ ಸಿಎಂ ಪಟ್ಟು ಹಿಡಿದರು.

ಕೊವಿಡ್-ನಾನ್ ಕೊವಿಡ್ ಎಂದು ವಿಂಗಡಿಸಿ
''ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ ಮತ್ತು ನಾನ್ ಕೊವಿಡ್ ಎಂದು ನಿಗದಿಪಡಿಸಿ ಎಂದು ಸರ್ಕಾರ ಹೇಳಿತ್ತು. ಆದರೆ, ಒಂದೇ ಆಸ್ಪತ್ರೆಯಲ್ಲಿ ಕೊವಿಡ್ ಮತ್ತು ನಾನು ಕೊವಿಡ್ ಚಿಕಿತ್ಸೆ ಕಷ್ಟ ಎಂದು ಖಾಸಗಿ ಆಸ್ಪತ್ರೆಗಳು ಹೇಳಿದವು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಾಕೆ ಆಗಲ್ಲ, ನಾವು ಈಗ ವಿಕ್ಟೋರಿಯಾ, ಬೌರಿಂಗ್ ನಲ್ಲಿ ಚಿಕಿತ್ಸೆ ನೀಡುತ್ತಿಲ್ಲವೇ' ಎಂದು ಸಮರ್ಥಿಸಿಕೊಂಡಿತ್ತು.

ಸರ್ಕಾರದ ಬೇಡಿಕೆಗೆ ಒಪ್ಪಿದ ಖಾಸಗಿ ಆಸ್ಪತ್ರೆಗಳು
ಅಂತಿಮವಾಗಿ ಸರ್ಕಾರದ ಬೇಡಿಕೆಗೆ ಮಣಿದ ಖಾಸಗಿ ವ್ಯವಸ್ಥಾಪಕರು, ''ಸರ್ಕಾರದ ಬೇಡಿಕೆಯಂತೆ ಈ ಒಂದು ವಾರದಲ್ಲಿ 1500 ಸಾವಿರ ಬೆಡ್ ಗಳನ್ನ ನೀಡುತ್ತೇವೆ. ಮಿಕ್ಕ 1000 ಬೆಡ್ ಗಳನ್ನ ನಂತರ ನೀಡುತ್ತೇವೆ'' ಎಂದಿದ್ದಾರೆ. ಇದಕ್ಕೆ ಸರ್ಕಾರ ಸಹ ಸಮ್ಮತಿ ನೀಡಿದೆ. ಜೊತೆಗೆ ನಾನ್ ಕೊವಿಡ್ ರೋಗಿಗಳಿಗೆ ಹೋಟೆಲ್ ಗಳಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಖಾಸಗಿ ಅಸ್ಪತ್ರೆ ಮಾಲೀಕರು ತಿಳಿಸಿದ್ದಾರೆ. ಜೊತೆಗೆ ಹೋಟೆಲ್ ಲ್ಲಿನ ನಾನ್ ಕೊವಿಡ್ ರೋಗಿಗಳಿಗೆ ಪೋಲಿಸ್ ಸೆಕ್ಯೂರಿಟಿ ನೀಡಬೇಕು ಎಂದು ಬೇಡಿಕೆಯಿಟ್ಟಿದೆ. ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಹ ನೀಡಲಾಗಿದೆ.

ಆರ್ ಅಶೋಕ್ ಸುದ್ದಿಗೋಷ್ಠಿ
ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಆರ್ ಅಶೋಕ್ ''ನಮ್ಮ ಅವಶ್ಯಕತೆ ಇದ್ದ 50ರಷ್ಟು ಬೆಡ್ ಗಳನ್ನ ನೀಡುವಂತೆ ತಿಳಿಸಿದ್ವಿ. ಅದರಂತೆ ಇಂದು ಸಭೆ ನಡೆಯಿತು. ಮೊದಲು ಅವರು ಸಲ್ಪ ಸಲ್ಪ ಸಮಯವಕಾಶ ಕೇಳಿದ್ರು. ಅದ್ರೆ ಅದು ಇಂದೇ ಅಗ್ಬೇಕು ಅಂತ ಪಟ್ಟು ಹಿಡಿದಿದ್ವಿ. ಹೀಗಾಗಿ ಸರ್ಕಾರ ಕೇಳಿದ 50ರಷ್ಟು ಬೆಡ್ ಗೆ ಖಾಸಗಿ ಅಸ್ಪತ್ರೆಗಳು ಒಪ್ಪಿವೆ. ನಾಳೆಯೇ 750 ಬೆಡ್ ನೀಡುವುದಾಗಿ ತಿಳಿಸಿವೆ'' ಎಂದು ಹೇಳಿದರು.

ಕೊರೊನಾ ನಿಯಂತ್ರಿಸಲು ಪ್ರಯತ್ನ
''ಕಷ್ಟದ ಸಂದರ್ಭದಲ್ಲಿ ಸರ್ಕಾರ ದೊಡ್ಡ ಹೋರಾಟ ಪ್ರಾರಂಭ ಮಾಡಿದೆ. ಬೇರೆ ರಾಜ್ಯಗಳ ಸರ್ಕಾರಗಳು ಕೈ ಚೆಲ್ಲಿ ಕುಳಿತಿವೆ. ಆದರೆ ನಮ್ಮ ಸರ್ಕಾರ ಕೊವಿಡ್ ನಿಯಂತ್ರಣಕ್ಕಾಗಿ ಪ್ರಯತ್ನ ಮಾಡ್ತಿದೆ. ಬೆಂಗಳೂರಲ್ಲಿ ಕೊರೊನಾ ತಡೆಗೆ ಕ್ರಮ ವಹಿಸಲಾಗಿದೆ. ಎಲ್ಲಾ ರೀತಿಯ ಕ್ರಮಗಳನ್ನು ಮಾಡಲಾಗ್ತಿದೆ. ಸಂಜೆ ರವಿಶಂಕರ್ ಆಶ್ರಮಕ್ಕೆ ಭೇಟಿ ನೀಡುತ್ತೇನೆ'' ಎಂದು ಆರ್ ಅಶೋಕ್ ಹೇಳಿದರು.

ಇದಕ್ಕೆ ಒಂದು ಸಮಿತಿ ರಚನೆ
''ಎಸ್ ಆರ್ ವಿಶ್ವನಾಥ ನೇತೃತ್ವದಲ್ಲಿ ಲ್ಲಿ ಐದು ಜನರ ಸಮಿತಿ ರಚನೆಯಾಗಲಿದೆ. ಸರ್ಕಾರದಿಂದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಆಸ್ಪತ್ರೆ ಕಡೆಯಿಂದ ರವೀಂದ್ರ ಹಾಗೂ ನಾಗೇಂದ್ರ ಸ್ವಾಮಿ ಈ ತಂಡದಲ್ಲಿ ಇರಲಿದ್ದಾರೆ. ಕಾಲ ಕಾಲಕ್ಕೆ ಸಭೆ, ಅಗತ್ಯ ಕ್ರಮ ವಹಿಸುವ ಬಗ್ಗೆ ಸಮಿತಿ ತೀರ್ಮಾನ ಮಾಡಲಿದೆ. ಯಾವುದೇ ರೋಗಿಯೂ ಪರದಾಡಬಾರದು. ಪಾಸಿಟಿವ್ ಆದವರು 8 ಗಂಟೆ ಒಳಗೆ ಕೊವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಬೇಕು'' ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.












Click it and Unblock the Notifications