ದೀಪಾವಳಿ ರಜೆ ಖಾಸಗಿ ಬಸ್ ಪ್ರಯಾಣ ದುಬಾರಿ
ಬೆಂಗಳೂರು, ಅ, 30 : ಸಾಲು-ಸಾಲು ರಜೆಯ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ಆದ್ದರಿಂದ ಊರಿಗೆ ತೆರಳಲಿರುವ ಜನರು ದೊಡ್ಡ ಮೊತ್ತವನ್ನೇ ಸುರಿಯಬೇಕಾಗುತ್ತದೆ. ಹೆಚ್ಚು ಹಣ ನೀಡಿದರೂ ಟಿಕೆಟ್ ದೊರೆಯುವುದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಾಂತ್ಯದಲ್ಲಿ ನ.1 ರಿಂದ 4 ರವರೆಗೆ ರಾಜ್ಯೋತ್ಸವ, ಶನಿವಾರ, ಭಾನುವಾರ, ದೀಪಾವಳಿ ಬಲಿಪಾಡ್ಯಮಿ ಸೇರಿದಂತೆ ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳ ಮಟ್ಟಿಗೆ ಬೆಂಗಳೂರು ಖಾಲಿ ಆಗಲಿದೆ. ಆದ್ದರಿಂದ, ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಹೆಚ್ಚಿಸಿದ್ದು, ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಯಿಂದ 1000 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಸಲಾಗಿದೆ. ಆದರೂ, ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಖಾಸಗಿ ಬಸ್ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಮಾಲೀಕರು ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ.
ಎಷ್ಟು ಹೆಚ್ಚಾಗಿದೆ : ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಮಾನ್ಯವಾಗಿ 500 ರೂ. ಆದರೆ, ಸದ್ಯ ಖಾಸಗಿ ಬಸ್ ಗಳಲ್ಲಿ 1,500 ರೂ. ದರ ನಿಗದಿಗೊಳಿಸಲಾಗಿದೆ. ಹೈದರಾಬಾದ್ಗೆ ಸಾಮಾನ್ಯ ದಿನಗಳಲ್ಲಿ 1,000 ರೂ. ಆದರೆ, ಸದ್ಯ 3000 ರೂ. ನೀಡಬೇಕಾಗಿದೆ. ಚೆನ್ನೈಗೆ 1,200 ರಿಂದ 1,500 ರೂ.ಗೆ ಏರಿಕೆ ಮಾಡಲಾಗಿದೆ.
ಕೆಎಸ್ಆರ್ಟಿಸಿಯಲ್ಲೂ ಹೆಚ್ಚಳ : ಕೆಎಸ್ಆರ್ ಟಿಸಿ ಹಬ್ಬದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 1000 ಬಸ್ ವ್ಯವಸ್ಥೆ ಕಲ್ಪಿಸಿದೆ. ಆದರೂ, ಅವುಗಳೂ ಶೇ.80ರಷ್ಟು ತುಂಬಿವೆ. ಕೆಎಸ್ಆರ್ಟಿಸಿ ಬೇರೆ-ಬೇರೆ ನಿಗಮಗಳಿಂದ ಹೆಚ್ಚುವರಿ ಬಸ್ಗಳ ನಿಯೋಜನೆ ಮಾಡಿದೆ. ಹೆಚ್ಚುವರಿ ಬಸ್ಗಳಿಗೆ ಸಾಮಾನ್ಯ ದರಕ್ಕಿಂತ ಶೇ.20ರಷ್ಟು ಪ್ರಯಾಣದರ ಹೆಚ್ಚು ನಿಗದಿಗೊಳಿಸಲಾಗಿದೆ. (ಕೆಎಸ್ಆರ್ ಟಿಸಿ ವಿಶೇಷ ಬಸ್ ಸೌಲಭ್ಯ)











Click it and Unblock the Notifications