ಅತ್ಯಾಚಾರ ಎಸೆಗಿ ಜೈಲು ಸೇರಿದ ಪ್ರಾಂಶುಪಾಲ: ಶಾಲೆಗೆ ಬೀಗ, 140 ಮಕ್ಕಳ ಭವಿಷ್ಯ ಅತಂತ್ರ
ಬೆಂಗಳೂರು, ಆಗಸ್ಟ್ 17: ಜ್ಞಾನ ದೇಗುಲದಲ್ಲೇ ಪೈಶಾಚಿಕ ಕೃತ್ಯ ಎಸೆಗಿದ ಕಾಮುಕನ ಶಾಲೆಗೆ ಸದ್ಯ ಬೀಗ ಜಡಿಯಲಾಗಿದೆ. ಶಾಲೆಯಲ್ಲಿ ಓದುತ್ತಿದ್ದ ಒಂದಲ್ಲ ಎರಡಲ್ಲ 140 ಮಕ್ಕಳ ಭವಿಷ್ಯ ಅತಂತ್ರವಾಗಿ ಹೋಗಿದೆ. ಬೆಂಗಳೂರು ನಗರದ ವರ್ತೂರಿನಲ್ಲಿ ಇರುವ ಖಾಸಗಿ ಶಾಲೆ ಬಂದ್ ಮಾಡಲು ಬಿಇಓ ಆದೇಶ ಹೊರಡಿಸಿದ್ದಾರೆ.
10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕ ಪ್ರಾಂಶುಪಾಲ ಪ್ರಕರಣ ಸಂಬಂಧಿಸಿ ಬಿಇಓ ಆದೇಶದ ಮೇರೆಗೆ ಶಾಲೆ ಬಂದ್ ಮಾಡಲಾಗಿದೆ. ಕೋರಮಂಗಲದಲ್ಲಿ ಈ ಶಾಲೆ ಕಟ್ಟಲು ಅನುಮತಿ ಪಡೆದುಕೊಂಡಿದ್ದ ಆರೋಪಿ ಆದರೆ, ಅನಧಿಕೃತವಾಗಿ ಬೆಂಗಳೂರಿನ ವರ್ತೂರು ಸಮೀಪ ಶಾಲೆ ನಿರ್ಮಾಣ ಮಾಡಿಕೊಂಡಿದ್ದ ಎನ್ನಲಾಗಿದೆ.

ಅನಧಿಕೃತವಾಗಿ ಶಾಲೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಇದರಿಂದ 140ಕ್ಕೂ ಹೆಚ್ಚಿನ ಮಕ್ಕಳ ಮುಂದಿನ ಶಿಕ್ಷಣದ ಭವಿಷ್ಯ ಅತಂತ್ರವಾಗಿ ಹೋಗಿದೆ.
ಶಿಕ್ಷಣ ಇಲಾಖೆ ಸದ್ಯ ಬೇರೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಲು ವ್ಯವಸ್ಥೆ ಮಾಡಿದೆ. ಆದರೆ ಶೈಕ್ಷಣಿಕ ವರ್ಷ ಆರಂಭವಾದ ಮಧ್ಯ ವರ್ಷದಲ್ಲಿ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸುವದರಿಂದ ಏನಾಗುತ್ತೋ ಎನ್ನುವ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ.
ಘಟನೆಯ ಹಿನ್ನೆಲೆ ಏನು..?
ಇನ್ನು ಈ ಘಟನೆ ಏನು ಎಂದು ನೋಡುವುದಾದರೆ, ಬೆಂಗಳೂರು ನಗರದ ಖಾಸಗಿ ಶಾಲೆಯಲ್ಲಿ 10 ವರ್ಷದ ಬಾಲಕಿಯ ಮೇಲೆ ಶಾಲೆಯ 65 ವರ್ಷದ ಪ್ರಾಂಶುಪಾಲ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿ ಶಾಲಾ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ನರ ದೌರ್ಬಲ್ಯ ಖಾಯಿಲೆಯಿಂದ ಬಳಲುತ್ತಿದ್ದಳು. ಆಗಸ್ಟ್ 3ರ ಬೆಳಗ್ಗೆ 8.30ಕ್ಕೆ ಬಾಲಕಿ ಶಾಲೆಗೆ ತೆರಳಿದ್ದಾಳೆ. 11.30ಕ್ಕೆ ಶಾಲೆಯಿಂದ ತನ್ನ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಐಸ್ಕ್ರೀಂ ಕೊಟ್ಟು ಕಳುಹಿಸಿದ್ದ. ಮಧ್ಯಾಹ್ನ 3.30ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದ ಬಾಲಕಿ, ತಾಯಿಗೆ ಹೊಟ್ಟೆ ನೋವು ಎಂದು ಹೇಳಿದ್ದಳು. ಸ್ನಾನ ಮಾಡಿಸಿ ಕರೆತರುವಾಗ ರಕ್ತದ ಕಲೆಗಳು ಕಂಡುಬಂದಿದೆ. ಇದೇ ವಿಚಾರವಾಗಿ ಮಗುವನ್ನು ತಾಯಿ ಕೇಳಿದಾಗ ನಡೆದ ಘಟನೆ ಬಗ್ಗೆ ಬಾಲಕಿ ವಿವರಿಸಿದ್ದಾಳೆ ಎನ್ನಲಾಗಿದೆ.
ಈ ಘಟನೆ ಸಂಬಂಧ ಬಾಲಕಿ ತಾಯಿ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಒಡೆತನದ ಖಾಸಗಿ ಶಾಲೆಗೆ ಬೀಗ ಜಡಿಯಲಾಗಿದೆ. ಮುಂದೆ ಮಕ್ಕಳ ಕತೆ ಏನು ಎನ್ನುವುದನ್ನು ಕಾದು ನೋಡಬೇಕೀದೆ.












Click it and Unblock the Notifications