ಬೆಂಗಳೂರು: ಸ್ಯಾಟ್ಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಜೂ.21ರಂದು ಪ್ರಧಾನಿ ಚಾಲನೆ
ಬೆಂಗಳೂರು, ಜೂನ್ 12: ಸ್ಯಾಟ್ಲೈಟ್ ಟೌನ್ ರಿಂಗ್ ರೋಡ್ ಪ್ರಧಾನಮಂತ್ರಿಗಳು ಜೂನ್ 21 ರಂದು ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿನಗರ ಆರ್ಚ್ ಬಳಿ ಗ್ರೇಡ್ ಸಪರೇಟರ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಹೊಸಕೇರಹಳ್ಳಿ ಮತ್ತು ಕೆಂಚೇನಹಳ್ಳಿ ಕೆರೆಗಳಲ್ಲಿ ಒಳಚರಂಡಿ ತ್ಯಾಜ್ಯ ನೀರನ್ನು ತಿರುಗಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಪೆರಿಫೆರಲ್ ರಿಂಗ್ ರೋಡ್, ಸಬ್ ಅರ್ಬನ್ ರೈಲು ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಪ್ರತಿ ವಾರ್ಡಿಗೆ ಒಂದು 'ನಮ್ಮ ಕ್ಲಿನಿಕ್' ಸ್ಥಾಪನೆ, ಬೆಂಗಳೂರಿನ ಶಾಲೆಗಳ ಸಮಗ್ರ ಅಭಿವೃದ್ಧಿ, ನಗರದ ಆರೋಗ್ಯ ಸೇವೆಗಳಿಗೆ ವಿಶೇಷ ಇಲಾಖೆ ರೂಪಿಸಿ ನಿರ್ವಹಿಸಲು ಯೋಜನೆ, ಕೆರೆ, ಉದ್ಯಾನವನ, ಕೊಳಚೆಪ್ರದೇಶದ ಜನರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಉತ್ತರಹಳ್ಳಿಯಿಂದ ದಕ್ಷಿಣದವರೆಗೂ ಸಂಪರ್ಕ ಕಲ್ಪಿಸುವ ರಾಜರಾಜೇಶ್ವರಿ ನಗರಬೃಹತ್ ಪ್ರಮಾಣದಲ್ಲಿ ಬೆಳೆದು ಅತ್ಯಂತ ಪ್ರತಿಷ್ಠಿತ ಬಡಾವಣೆ ಎನಿಸಿದೆ. ನಿಗದಿತ ಸಮಯದಲ್ಲಿ, ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು. ನಮ್ಮೆಲ್ಲರ ಯೋಜನೆಗೆ ಮೀರಿ ಬೆಂಗಳೂರು ಬೆಳೆಯುತ್ತಿದೆ. ಅದಕ್ಕಾಗಿ ರಸ್ತೆಗಳ ಬಗ್ಗೆ ಸಂಚಾರದ ಬಗ್ಗೆ ವಿಶೇಷ ಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ
ಆರ್.ಆರ್ ನಗರ ಬಹಳ ಪ್ರಮುಖವಾದ, ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ಜಂಕ್ಷನ್. ಕೆಂಗೇರಿಯಿಂದ ಬೆಂಗಳೂರಿನ ಟೌನ್ ಹಾಲ್ ವರೆಗೆ ಸಂಚಾರ ದÀಟ್ಟಣೆ ಇದೆ. ಗ್ರೇಡ್ ಸಪರೇಟರ್ ಕೆಲಸದಿಂದ ಕೇವಲ ಆರ್.ಆರ್ ನಗರಕ್ಕೆ ಮಾತ್ರವಲ್ಲದೇ ಬೆಂಗಳೂರಿನ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಡುವ ಕೆಲಸವನ್ನು ಮಾಡಲಾಗಿದೆ. ಬೆಂಗಳೂರು- ಮೈಸೂರು ರಸ್ತೆ ಎಂಟು ಪಥದ ತಸ್ತೆಯನ್ನಾಗಿ ಮಾಡುವ ಕಾಮಗಾರಿ 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಜಂಕ್ಷನ್ ಮುಗಿದರೆ ಬೆಂಗಳೂರಿನ ಒಳಗೆ ಪ್ರವೇಶ ಮಾಡಿದರೆ ನೇರವಾಗಿ ಟೌನ್ ಹಾಲ್ವರೆಗೆ ಯಾವುದೇ ಆತಂಕವಿಲ್ಲದೇ ಹೋಗಬಹುದಾಗಿದೆ. ಅತಿ ಉದ್ದನೆಯ ಸಿಗ್ನಲ್ ಫ್ರೀ ಕಾರಿಡಾರ್ ಆಗಲಿದೆ. ಅತ್ಯುತ್ತಮವಾಗಿ ಯೋಜಿತವಾದ ಕಾರ್ಯಕ್ರಮವಾಗಿದೆ ಎಂದರು.
Recommended Video
ಈ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು.