Breaking: ಪ್ರವೀಣ್ ಕೊಲೆ ಪ್ರಕರಣ: ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಆರೋಪಿಗಳ ವಶಕ್ಕೆ
ಬೆಂಗಳೂರು, ಆಗಸ್ಟ್ 01: ಬಿಜೆಪಿ ಯುವ ಮುಖಂಡ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಲಾಗುತ್ತಿದೆ. ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯ ಮೂಲದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ತನಿಖೆಯನ್ನು ಮಾಡಲಾಗುತ್ತಿದೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರ್ ಕೆ ಬೇಕರಿಯಲ್ಲಿ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡ್ತಿದ್ದ ಆರೋಪಿಗಳಾದ ಇರ್ಫಾನ್ ಮತ್ತು ಅಲ್ತಾಫ್ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಆರೋಪಿಗಳು ಮೂಲತಃ ಸುಳ್ಯದವರಾಗಿದ್ದು ಸಾಕಷ್ಟು ವರ್ಷದಿಂದ ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ಆದರೆ ಪ್ರವೀಣ್ ಹತ್ಯೆಯ ದಿನ ಬೆಳ್ಳಾರೆಯಲ್ಲಿಯೇ ಈ ಇಬ್ಬರು ಆರೋಪಿಗಳು ಇದ್ದರು ಎಂಬುದು ನಂಬರ್ ಮತ್ತು ಟವರ್ ಲೋಕೇಷನ್ ಆಧಾರದಲ್ಲಿ ತಿಳಿದು ಬಂದಿದೆ. ಮಗಳೂರು ಪೊಲೀಸರು ವಶಕ್ಕೆ ಪಡೆದಿರುವ ಶಫೀಕ್ ಮತ್ತು ಝಾಕೀರ್ ಜೊತೆಯಲ್ಲಿಯೇ ಇರ್ಫಾನ್ ಮತ್ತು ಅಲ್ತಾಫ್ ಇದ್ದರು ಎನ್ನಲಾಗುತ್ತಿದೆ.

ಪ್ರವೀಣ್ ನೆಟ್ಟಾರು ಹತ್ಯೆಯಾದ ಬಳಿಕ ಇರ್ಫಾನ್ ಮತ್ತು ಅಲ್ತಾಫ್ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಇರ್ಫಾನ್ ಮತ್ತು ಅಲ್ತಾಫ್ ಏನಾದರೂ ಪಾತ್ರ ವಹಿಸಿದ್ದರೇ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವರು ಆ ದಿನ ಸುಳ್ಯಕ್ಕೆ ಹೋಗಿದ್ದೇಕೆ. ಶಂಕಿತ ಆರೋಪಗಳ ಜೊತೆ ಇದ್ದಿದ್ದೇಕೆ ಅನ್ನೋ ಅನುಮಾನಗಳು ಉಂಟಾಗಿವೆ. ಇದಕ್ಕಾಗಿಯೇ ಟವರ್ ಲೋಕೇಶನ್ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರವಾದ ತನಿಖೆಯನ್ನು ನಡೆಸುತ್ತಿದ್ದು, ಪ್ರವೀಣ್ ನೆಟ್ಟಾರು ಕೊಲೆಗೆ ನಿಖರವಾದ ಕಾರಣ ಮತ್ತು ಆರೋಪಿಗಳು ಯಾರು ಎಂಬುದು ತಿಳಿಯಬೇಕಿದೆ.












Click it and Unblock the Notifications