Prajwal Revanna Pendrive case: ಪ್ರಪಂಚದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಇದು..ದಿಕ್ಕು ತಪ್ಪಿಸೋ ಕೆಲ್ಸ ಮಾಡ್ಬೇಡಿ
ಬೆಂಗಳೂರು, ಮೇ, 08: ಹಾಸನ ಸಂದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಈ ಬಗ್ಗೆ ಆಕ್ರೋಶಗಳು ಕೂಡ ವ್ಯಕ್ತವಾಗುತ್ತಿದೆ. ಇನ್ನು ಸಚಿವ ಕೃಷ್ಣಬೈರೇಗೌಡ ಅವರು ಪ್ರತಿಕ್ರಿಯಿಸಿ ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ, ಮಾನ, ಶೀಲಹರಣ, ಮನೆ ಹಾಳು ಮಾಡಿರುವ ಪ್ರಕರಣ ಇದಾಗಿದೆ ಎಂದರು.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ರಕ್ಷಿಸಲು ಹುನ್ನಾರ ನಡೆಯುತ್ತಿದೆ. ಆದ್ದರಿಂದಲೆ, ಪ್ರಕರಣದ ಮೂಲವನ್ನು ಬಿಟ್ಟು ಇದೀಗ ಪೆನ್ಡ್ರೈವ್ ಬಿಡುಗಡೆ ಮಾಡಿದ ಬಗ್ಗೆ ಚರ್ಚಿಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ. ಅನೇಕರು ಊರು ಬಿಟ್ಟು ಹೋಗಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮಾನ ಕಾಪಾಡುವುದು ಬಿಟ್ಟು ಪ್ರಕರಣದ ಹಾದಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದರು.
ಇಲ್ಲಿ ತಪ್ಪು ಮಾಡಿದವರಿಗೆ, ಮಾನ ಹಾನಿ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಮಾನ, ಮನೆ, ಮಾಂಗಲ್ಯ ದೋಚಿದ್ದು ಅಪರಾಧ ಅಲ್ಲ, ಇದರ ವಿರುದ್ದ ಮಾತನಾಡಿದ್ದು ಅಪರಾಧವಾಗಿದೆ. ಮೂಲ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಸಂತ್ರಸ್ಥರ ಮಾನ ಹರಣವಾಗಿದೆ. ಜೊತೆಗೆ ನ್ಯಾಯ ಹರಣ ಮಾಡಲಾಗುತ್ತಿದೆ ಎಂದರು.
ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಇದೀಗ ಬೇರೆಯದ್ದೇ ವಿಚಾರ ಚರ್ಚೆ ಆಗುತ್ತಿದೆ. ಪ್ರಕರಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಪೆನ್ಡ್ರೈವ್ ಕೊಟ್ಟು ಒಂದು ವರ್ಷದ ಮೇಲಾಗಿದೆ.
ಆ ವಕೀಲ ಮೊದಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದರೆ, ಹಾದಿಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಮುಚ್ಚಿದ ಲಕೋಟೆಯಲ್ಲಿ ಆ ಪೆನ್ಡ್ರೈವ್ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ದೊಡ್ಡ ಅಪರಾಧ ಎಂದರು.
ಪೆನ್ಡ್ರೈವ್ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುವ ವ್ಯಕ್ತಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಚರ್ಚೆ ಮಾಡಿದವರು ಹಾಸನಾಂಭ ದೇವಸ್ಥಾನಕ್ಕೆ ಬಂದು ದೇವರ ಮೇಲೆ ಕೈಯಿಟ್ಟು ಚರ್ಚೆ ಮಾಡಲಿ. ಲೋಕಸಭಾ ಟಿಕೆಟ್ ತಪ್ಪಿಸಲು ಇದನ್ನು ಬಳಸಿಕೊಂಡರು. ನೂರಾರು ಮಹಿಳೆಯರ ಮಾನ ಹರಣ ಆಗಿರುವುದೇ ಇವರಿಂದ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿಯವರು ಇವರ ಬಳಿ ಇರುವ ಅಷ್ಟು ಮತಗಳನ್ನು ಹಾಕಿಸಿಕೊಂಡು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಶಿ, ಮೋದಿ ಅವರ ಹೇಳಿಕೆಗಳು ಇದೇ ರೀತಿ ಇವೆ. ಜೆಡಿಎಸ್ ವಿರುದ್ದ ಮಾತನಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೈಂಗಿಕ ದೌರ್ಜನ್ಯ ನಡೆಸು ಎಂದು ಕಾಂಗ್ರೆಸ್ ಹೇಳಿತ್ತೇ?. 60 ವರ್ಷದ ಮಹಿಳೆಯನ್ನು ಅಪಹರಣ ಮಾಡಲು ಕಾಂಗ್ರೆಸ್ ಹೇಳಿತ್ತೇ? ಅಪಹರಣ ಮಾಡಿದ್ದೂ ಸುಳ್ಳು ಎಂದು ಹೇಳುತ್ತಿದ್ದಾರೆ ಅಂತಾ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಇವರು ಏನೂ ಮಾಡಿದರೂ ನಡೆಯುತ್ತದೆ. ಕಾನೂನಿಗಿಂತ, ಸಂವಿಧಾನಕ್ಕಿಂತ ಮೇಲೆ ಎಂದುಕೊಂಡಿದ್ದಾರೆ. ಅವರ ಕುಟುಂಬದಲ್ಲಿ ಒಬ್ಬರಾದರೂ ಈ ಘಟನೆಯನ್ನು ಖಂಡಿಸಿಲ್ಲ. ಎಲ್ಲೋ ಇರುವ ಅವನನ್ನು ಕರೆಸಿ ಕಸ್ಟಡಿಗೆ ಒಳಗಾಗು ಎಂದು ಹೇಳಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ದೇವರಾಜೇಗೌಡ ಅವರು ಕಳೆದ ಒಂದು ವರ್ಷದಿಂದ ಅನೇಕ ಹೇಳಿಕೆಗಳನ್ನು ಗಮನಿಸುತ್ತಾ ಹೋಗಬೇಕು. ಈತ ಎಸ್ಐಟಿ ತನಿಖೆ ಪ್ರಾರಂಭವಾದ ಕಾರಣಕ್ಕೆ ಹಾಗೂ ಇದರಿಂದ ಆತನಿಗೆ ತೊಂದರೆ ಎಂದು ಗೊತ್ತಾಗಿ ವಿರುದ್ದವಾಗಿ ಹೇಳಿಕೆ ನೀಡುತ್ತಿದ್ದಾರೆ. ಎಸ್ಐಟಿ ಸತ್ಯವನ್ನು ಹೊರಗೆ ತರುತ್ತದೆ. ಅಲ್ಲದೇ ಸಿಬಿಐಗೆ ಈ ಪ್ರಕರಣ ಹೋದರೆ, ಕೋಲ್ಡ್ ಸ್ಟೋರೇಜ್ಗೆ ಸೇರುತ್ತದೆ ಎಂದು ಹೀಗೆ ಮಾಡಲಾಗುತ್ತಿದೆ. ಇಂತಹ ಹೀನಾ ಕೆಲಸ ನಮ್ಮ ಜಾತಿಯವರಿಂದ ಆಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ರಾಜೀವ್ ಗೌಡ, ಶಾಸಕರಾದ ರಮೇಶ್ ಬಾಬು ಬಂಡ್ಢಿಸಿದ್ದೇಗೌಡ, ಗಣಿಗ ರವಿಕುಮಾರ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ವಕ್ತಾರರೆ ಶ್ರೀಮತಿ ತೇಜಶ್ವಿನಿ ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications