ಬಿಬಿಎಂಪಿ ಕಚೇರಿಗೆ ಬೀಗ ಹಾಕಲು ಯತ್ನ, ಎಎಪಿ ಕಾರ್ಯಕರ್ತರ ಬಂಧನ
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಲ್ಲಿ ಹೆಚ್ಚಾದ ರಸ್ತೆ ಗುಂಡಿ ಸಮಸ್ಯೆ, ನಿರಂತರ ಅಪಘಾತ ಹಾಗೂ ಸಾವುಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಮುಖಂಡರು ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಜಡಿಯಲು ಮುಂಗಾಗಿದ್ದರು. ಅವರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಬೆಂಗಳೂರಿನ ಅಟ್ಟೂರು ಬಡಾವಣೆ ಹಾಗೂ ರಾಜಾನುಕುಂಟೆಯಲ್ಲಿ ಯುವಕರಿಬ್ಬರು ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ. ಹಲವು ದಿನಗಳಿಂದ ಇಂತಹ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಬಿಬಿಎಂಪಿ ಅಮರ್ಪಕ ರಸ್ತೆ ನಿರ್ವಹಣೆ ಕಾರಣ ಎಂದು ಎಎಪಿ ಆಮ್ ಆದ್ಮಿ ಪಾರ್ಟಿ ದೂರಿದೆ.
ರಸ್ತೆ ಅಪಘಾತ ಹೆಚ್ಚಳ: ನ.1ರಿಂದ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ
ಈ ಸಂಬಂಧ ಬಿಬಿಎಂಪಿ ವಿರುದ್ಧ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು. ನೂರಾರು ಎಎಪಿ ಕಾರ್ಯಕರ್ತರು, ಮುಖಂಡರು ರಸ್ತೆಗುಂಡಿ, ಅಪಘಾತ ಸಾವಿಗೆ ಕಾರಣವಾದ ಬಿಬಿಎಂಪಿ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಲ್ಲಿಂದ ಬಿಬಿಎಂಪಿ ಕಚೇರಿಗೆ ಬೀಗ ಜಡಿಯಲು ಮೆರವಣಿಗೆ ನಡೆಸಿದರು. ಈವೇಳೆ ಮಾರ್ಗ ಮಧ್ಯದಲ್ಲೇ ಪೊಲೀಸರು ಎಎಪಿ ಕಾರ್ಯಕರ್ತರನ್ನು ತಡೆದು ಬಂಧಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಜನರು ಸಾಯುತ್ತಿರುವುದು ಕೇವಲ ಬಲಿಯಲ್ಲ. ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ. ರಸ್ತೆಗುಂಡಿಗಳನ್ನು ಮುಚ್ಚಿಸುವ ಯೋಗ್ಯತೆಯಿಲ್ಲದ ನಿರ್ಲಜ್ಜ ಸರ್ಕಾರವು ಅಮಾಯಕ ಜೀವಗಳನ್ನು ಈ ರೀತಿ ಕೊಲೆ ಮಾಡಿ ವಿಕೃತಿ ಮೆರೆಯುತ್ತಿದೆ. ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಬೆರಳೆಣಿಕೆಯ ದಿನಗಳಿದ್ದಾಗ ಮಾತ್ರ ರಸ್ತೆಗುಂಡಿಗಳನ್ನು ಕಳಪೆ ಕಾಮಗಾರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಮತದಾರರನ್ನು ವಂಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಿಡಿ ಕಾರಿದರು.
ರಸ್ತೆ ಕಾಮಗಾರಿಗೆ ಹಣ ನೀಡಲು ಸರ್ಕಾರದ ಮೀನಾಮೇಷ; ಬೆಂಗಳೂರಿನಲ್ಲಿ ರಸ್ತೆಗುಂಡಿಯಿಂದಾಗಿ ಅಪಘಾತವಾಗುವುದು ಸಾಮಾನ್ಯವಾಗಿದೆ. ತಿಂಗಳಿಗೆ ಕನಿಷ್ಠ ಮೂರ್ನಾಲ್ಕು ಮಂದಿಯಾದರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಜೀರೋ ಟ್ರಾಫಿಕ್ನಲ್ಲಿ ತಿರುಗಾಡುವ ಮುಖ್ಯಮಂತ್ರಿಯವರಿಗೆ ಹಾಗೂ ಸದಾ ಕಾರಿನಲ್ಲೇ ತಿರುಗಾಡುವ ಸಚಿವರುಗಳು ಹಾಗೂ ಶಾಸಕರುಗಳಿಗೆ ಬೈಕ್ ಸವಾರರ ಕಷ್ಟ ಅರ್ಥವಾಗುತ್ತಿಲ್ಲ. ಕೇಳಿದಷ್ಟು ಕಮಿಷನ್ ಕೊಡಲು ಗುತ್ತಿಗೆದಾರರು ಒಪ್ಪದ ಕಾರಣಕ್ಕೆ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇಂತಹ ಹಣಬಾಕ ಸರ್ಕಾರವನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ ಎಂದು ಅವರು ಆರೋಪಿಸಿದರು.
ಮತದಾನದ ದಿನ ಗುಂಡಿ ಮುಚ್ಚಲ್ಪಟ್ಟಿದ್ದರೆ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವಿಸಿದ್ದಾರೆ. ಆದರೆ ಜನರು ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಗಳಲ್ಲಿ ಭ್ರಷ್ಟ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ರಸ್ತೆಗುಂಡಿಯಿಂದಾಗಿ ಸಂಭವಿಸಿದ ಒಂದೊಂದು ಅಪಘಾತವೂ ಬಿಜೆಪಿ ವಿರುದ್ಧ ಮತ ಚಲಾಯಿಸಲು ಪ್ರೇರಣೆ ಆಗಬೇಕು. ನಾನಾ ರೀತಿಯ ತೆರಿಗೆ ಕಟ್ಟುವ ಜನರಿಗೆ ಉತ್ತಮ ರಸ್ತೆ ಪಡೆಯುವ ಸಂಪೂರ್ಣ ಹಕ್ಕುಇದೆ ಎಂಬುದನ್ನು ಜನತೆ ಸದಾ ನೆನನಪಿನಲ್ಲಿ ಇಟ್ಟುಕೊಂಡು, ಕಳಪೆ ರಸ್ತೆ ನೀಡಿ ಬೆಂಗಳೂರಿನ ಘನತೆ ಕುಗ್ಗಿಸುತ್ತಿರುವ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಮೋಹನ್ ದಾಸರಿ ಹೇಳಿದರು.
ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ಸುರೇಶ್ ರಾಥೋಡ್ ,ಜಗದೀಶ್ ವಿ ಸದಂ, ಸುಹಾಸಿನಿ, ಉಷಾ ಮೋಹನ್, ಅಂಜನಾ ಗೌಡ, ಭಾನುಪ್ರಕಾಶ್, ವಿಶ್ವನಾಥ್, ಮಹೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು.