Nandamuri Taraka Ratna; ನಟ ನಂದಮೂರಿ ತಾರಕರತ್ನ ನಿಧನ
ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದ ನಂದಮೂರಿ ತಾರಕರತ್ನ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಬೆಂಗಳೂರು, ಫೆಬ್ರವರಿ 19; ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಟಾಲಿವುಡ್ ನಟ, ರಾಜಕೀಯ ನಾಯಕ ನಂದಮೂರಿ ತಾರಕರತ್ನ ವಿಧಿವಶರಾದರು. ಬೆಂಗಳೂರಿನ ಆಸ್ಪತ್ರೆಯಲ್ಲಿ 23 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಶನಿವಾರ ರಾತ್ರಿ 39 ವರ್ಷದ ನಂದಮೂರಿ ತಾರಕರತ್ನ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಆಸ್ಪತ್ರೆಯ ಐಸಿಯುವಿನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
నందమూరి తారకరత్న మరణ వార్త తీవ్రమైన దిగ్భ్రాంతిని, బాధను కలిగించింది. తారకరత్నను బ్రతికించుకునేందుకు చేసిన ప్రయత్నాలు, కుటుంబ సభ్యుల, అభిమానుల ప్రార్థనలు, అత్యంత నిపుణులైన డాక్టర్ల వైద్యం ఫలితాన్ని ఇవ్వలేదు.(1/2) pic.twitter.com/VfyfdHfKnF
— N Chandrababu Naidu (@ncbn) February 18, 2023
ನಂದಮೂರಿ ತಾರಕರತ್ನಗೆ ಜನವರಿ 27ರಂದು ಹೃದಯಸ್ತಂಭನವಾಗಿತ್ತು. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಅವರು ಕುಸಿದುಬಿದ್ದಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತರಲಾಗಿತ್ತು.

ನಾರಾಯಣ ಹೃದಯಾಲಯದ ಹಿರಿಯ ವೈದ್ಯರ ತಂಡ ನಂದಮೂರಿ ತಾರಕರತ್ನಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಸುಧಾರಿಸಲೇ ಇಲ್ಲ. ನಟ ಜ್ಯೂನಿಯರ್ ಎನ್ಟಿಆರ್ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದರು.
ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ನಂದಮೂರಿ ತಾರಕರತ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ನಟ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು, ವಿಶೇಷ ಪೂಜೆ ಸಲ್ಲಿಸಿದ್ದರು.
ಸಚಿವರು, ಸೇರಿದಂತೆ ಆಂಧ್ರ ಪ್ರದೇಶದ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದರು. ವೈದ್ಯರ ತಂಡದ ಜೊತೆ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು.

ನಂದಮೂರಿ ತಾರಕರತ್ನ ನಿಧನಕ್ಕೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ನಟ ಚಿರಂಜೀವಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ನಂದಮೂರಿ ತಾರಕರತ್ನ ಸಂಕ್ಷಿಪ್ತ ಪರಿಚಯ; ಟಾಲಿವುಡ್ ನಟ, ರಾಜಕೀಯ ನಾಯಕ ನಂದಮೂರಿ ತಾರಕರತ್ನ ಆಂಧ್ರ ಪ್ರದೇಶದಲ್ಲಿ ಲಕ್ಷಾಂತರ ಅಭಿಮಾಣಿಗಳನ್ನು ಹೊಂದಿದ್ದಾರೆ. 1983ರ ಫೆಬ್ರವರಿ 22ರಂದು ಅವರು ಜನಿಸಿದರು.
ತಂದೆ ನಂದಮೂರಿ ಮೋಹನ್ಕೃಷ್ಣ, ತಾಯಿ ನಂದಮೂರಿ ಶಾಂತಿ ಮೋಹನ್. ತೆಲಗು ಚಿತ್ರರಂಗದ ಖ್ಯಾತ ನಟ, ಮಾಜಿ ಮುಖ್ಯಮಂತ್ರಿ ಎನ್ಟಿಆರ್ ಅವರ ಮೊಮ್ಮಗ ನಂದಮೂರಿ ತಾರಕರತ್ನ. 2012ರಲ್ಲಿ ಅಲೇಖ್ಯಾ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲು ಸಿನಿಮಾಗಳಲ್ಲಿ ನಂದಮೂರಿ ತಾರಕರತ್ನ ನಟಿಸಿದ್ದಾರೆ. ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ನಂದಮೂರಿ ತಾರಕರತ್ನ 2002ರಲ್ಲಿ ಒಕಾಟೊ ನಂಬರ್ ಕುರ್ರಾಡು ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಾರಕ್, ಭದ್ರಿ ರಾಮುಡು ಮುಂತಾದ ಚಿತ್ರಗಳು ಹಿಟ್ ಆದವು. ತೆಲುಗು ವೆಬ್ ಸಿರೀಸ್ಗಳಲ್ಲಿ ಸಹ ಅವರು ನಟಿಸಿದ್ದಾರೆ. ಉತ್ತಮ ನಟನೆಗಾಗಿ 'ಅಮರಾವತಿ' ಚಿತ್ರಕ್ಕಾಗಿ 2009ರಲ್ಲಿ ಆಂಧ್ರದ ಪ್ರತಿಷ್ಠಿತ ನಂದಿ ಅವಾರ್ಡ್ ಪಡೆದಿದ್ದಾರೆ.
ತೆಲಗು ಚಿತ್ರರಂಗದ ಪ್ರಸಿದ್ಧ ನಟ ಜ್ಯೂ. ಎನ್ಟಿಆರ್ ಅವರ ಅಣ್ಣ ನಂದಮೂರಿ ತಾರಕರತ್ನ. ಬೆಂಗಳೂರಿನ ಆಸ್ಪತ್ರೆಗೆ ಜ್ಯೂ. ಎನ್ಟಿಆರ್ ಭೇಟಿ ನೀಡಿ ತಾರಕರತ್ನ ಆರೋಗ್ಯ ವಿಚಾರಿಸಿದ್ದರು.
ಟಿಡಿಪಿ ಪಕ್ಷದ ಯುವ ಮುಖಂಡ ನಾರಾ ಲೋಕೇಶ್ ಆಯೋಜನೆ ಮಾಡಿದ್ದ 'ಯುವಗಳಂ' ಪಾದಯಾತ್ರೆಯಲ್ಲಿ ತಾರಕರತ್ನ ಪಾಲ್ಗೊಂಡಿದ್ದರು. ಆಗ ಹೃದಯಸ್ತಂಭನವಾಗಿ ಕುಸಿದುಬಿದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.
ನಾರಾಯಣ ಹೃದಯಾಲಯದ ವೈದ್ಯರ ಜೊತೆ ವಿದೇಶಿ ವೈದ್ಯರು ಸಹ ನಂದಮೂರಿ ತಾರಕರತ್ನಗೆ ಚಿಕಿತ್ಸೆ ನೀಡಿದ್ದರು. ಶುಕ್ರವಾರವೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.












Click it and Unblock the Notifications