ರಾಜಕೀಯ ಪ್ರೇರಿತ ಮುಂಗಡಪತ್ರ : ಅನಂತಕುಮಾರ್ ಆಕ್ರೋಶ
ಬೆಂಗಳೂರು, ಜುಲೈ 06 : ಸಮಗ್ರ ಕರ್ನಾಟಕ ರಾಜ್ಯದ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸದೇ ಇರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಕೇವಲ ಜೆಡಿಎಸ್ ಬೆಂಬಲಿತ ಜಿಲ್ಲೆಗಳಿಗೆ ಮುತುವರ್ಜಿ ತೋರಿಸುವ ಮೂಲಕ ರಾಜಕೀಯ ಪ್ರೇರಿತ ಮುಂಗಡಪತ್ರ ಮಂಡಿಸಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಗಡಪತ್ರದ ಗುರಿ ರಾಜ್ಯದ ಆರುವರೆ ಕೋಟಿ ಜನರ ಅಭಿವೃದ್ದಿ ಮತ್ತು ಏಳಿಗೆ ಆಗದೆ ಕೇವಲ 37 ಶಾಸಕರ ಒತ್ತಾಸೆಯ ಮುಂಗಡ ಪತ್ರ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಸಮರ್ಥಿಸಿಕೊಂಡಿರುವುದು ದುರ್ದೈವಕರವಾಗಿದೆ ಎಂದು ಅನಂತ್ ಪ್ರತಿಕ್ರಿಯಿಸಿದರು.
ವಿದ್ಯುತ್ ದರ ಪ್ರತಿ ಯೂನಿಟ್ ಗೆ 20 ಪೈಸೆಯಂತೆ ಹೆಚ್ಚಿಸಲಾಗಿದೆ. ಅಲ್ಲದೆ, ಡಿಸೇಲ್ ಮತ್ತು ಪೆಟ್ರೋಲ್ ಮೇಲಿನ ಸೆಸ್ ನ್ನು ಹೆಚ್ಚಳ ಮಾಡುವುದರ ಮೂಲಕ ಜನ ಸಾಮಾನ್ಯರ ಮೇಲೆ ಹೊರೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪೆಟ್ರೋಲ್ ಮೇಲೆ 1.14 ರೂಪಾಯಿ ಹಾಗೂ ಡಿಸೇಲ್ ಮೇಲೆ 1.12 ರೂಪಾಯಿ ಹೊರೆ ಹೆಚ್ಚಾಗಲಿದೆ. ಇದು ಹಣದುಬ್ಬರಕ್ಕೆ ಅವಕಾಶಮಾಡಿಕೊಲಿದ್ದು, ಮತ್ತೊಮ್ಮೆ ರೈತರ ಮೇಲೂ ದುಷ್ಪರಿಣಾಮ ಬೀರಲಿದೆ ಎಂದರು.

ಇನ್ನು ರೈತರ ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ಕಣ್ಣೊರೆಸುವ ತಂತ್ರ ಅನುಸರಿಸಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ 53 ಸಾವಿರ ಕೋಟಿ ರೂಪಾಯಿಗಳಷ್ಟು ರೈತರ ಸಾಲಮನ್ನಾ ಘೋಷಿಸಿಲ್ಲ ಎಂದರು.
ನಾಲ್ಕು ವರ್ಷಗಳಲ್ಲಿ ವಾರ್ಷಿಕ/ಅರೆವಾರ್ಷಿಕ ಕಂತುಗಳಲ್ಲಿ ಬ್ಯಾಂಕುಗಳಿಗೆ ಸಾಲಮನ್ನಾ ಮೊತ್ತವನ್ನು ಮರುಪಾವತಿಸುವ ಭರವಸೆ ಕೇವಲ ಭರವಸೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ನಾಲ್ಕು ವರ್ಷಗಳ ಕಾಲ ಸರಕಾರ ಉಳಿಯುವ ಭರವಸೆಯೇ ಇಲ್ಲದೆ ಇರುವುದನ್ನ ನೋಡಿದಲ್ಲಿ, ಈ ಭರವಸೆ ಹೇಗೆ ಈಡೇರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗ, ಮಲೆನಾಡು ಭಾಗದ ಜನತೆಗೆ ಯಾವುದೇ ಯೋಜನೆಗಳನ್ನು ಘೋಷಿಸದೇ ನಿರ್ಲಕ್ಷಿಸಲಾಗಿದೆ ಎಂದರು.
ಜೊತೆಯಲ್ಲಿ ನೇಕಾರರ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮತ್ತು ಮೀನುಗಾರರ ಸಾಲ ಮನ್ನಾ ಮಾಡುವ ಭರವಸೆಯನ್ನು ನೀಡಿದ್ದ ಕುಮಾರಸ್ವಾಮಿ, ತಮ್ಮ ಬಜೆಟ್ ನಲ್ಲಿ ಇವೆಲ್ಲವನ್ನೂ ಉಲ್ಲೇಖಿಸದೆ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ಹೇಳಿದರು.
ಕೇಂದ್ರದ ಮೋದಿ ಸರಕಾರ ಕೊಡುತ್ತಿರುವ ಅನ್ನಭಾಗ್ಯದ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿರುವುದು ಸರಿಯಲ್ಲ. ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಬಡಕುಟುಂಬದ ಗರ್ಭಿಣಿಯರಿಗೆ 6 ತಿಂಗಳ ಕಾಲ ಮಾಸಿಕ 6,000 ರೂಪಾಯಿ ಸಹಾಯಧನ ನೀಡುವುದರ ಬದಲಾಗಿ ಕೇವಲ 1,000 ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಣ್ಣ ಟ್ರ್ಯಾಕ್ಟರ್ ಗಳ ಖರೀದಿಗೆ ಶೇಕಡಾ 75ರಷ್ಟು ಮತ್ತು ಇನ್ನಿತರೆ ಸಲಕರಣೆಗಳ ಖರೀದಿಗೆ ಶೇಡಕಾ 90ರಷ್ಟು ಸಬ್ಸಿಡಿ ನೀಡುತ್ತೇವೆ ಎಂದಿದ್ದ ಮುಖ್ಯಮಂತ್ರಿಗಳು ತಮ್ಮ ಮಾತಿಗೆ ತಪ್ಪಿದ್ದಾರೆ. ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು 5 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಮಾತಿಗೆ ತಪ್ಪಿದ್ದಾರೆ ಎಂದು ಕಿಡಿ ಕಾರಿದರು.
ಸಮ್ಮಿಶ್ರ ಸರಕಾರದ ನೆಲೆಗಟ್ಟಿನಲ್ಲಿರುವ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಬಲವರ್ಧನೆ ಹಾಗೂ ಎಸಿಬಿ ನಿರ್ಮೂಲನೆ ಮಾಡುವುದಾಗಿ ಸ್ವತಃ ತಾವೇ ನೀಡಿದ್ದ ಭರವಸೆಯನ್ನು ತಳ್ಳಿ ಹಾಕುವ ಮೂಲಕ ಜಾಣ ಮರೆವನ್ನು ತೋರ್ಪಡಿಸಿದ್ದಾರೆ ಎಂದು ಅನಂತ್ ಕುಮಾರ್ ವ್ಯಂಗ್ಯವಾಡಿದರು.












Click it and Unblock the Notifications