ಕುಖ್ಯಾತ ರೌಡಿ ಹರೀಶ್ ಕಾಲಿಗೆ ಪೊಲೀಸರಿಂದ ಗುಂಡೇಟು
ಬೆಂಗಳೂರು, ಅಕ್ಟೋಬರ್ 26: ಬೆಳ್ಳಂಬೆಳಗ್ಗೆ ನಟೋರಿಯಸ್ ರೌಡಿ ಹರೀಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತ ಕುಖ್ಯಾತ ರೌಡಿ ಯುವರಾಜ್ ಗ್ಯಾಂಗ್ ಸಹಚರನಾಗಿದ್ದ ಹರೀಶ್ ವಿರುದ್ಧ ಪೀಣ್ಯ, ನಂದಿನಿ ಲೇಔಟ್, ರಾಜಗೋಪಾಲನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಇಂದು ಬೆಳಗ್ಗೆ ಆರೋಪಿ ಹರೀಶ್ ಅಬ್ಬಿಗೆರೆ ಬಳಿ ಅಡಗಿರುವ ಕುರಿತ ಖಚಿತ ಮಾಹಿತಿ ಪಡೆದಿದ್ದ ಪೀಣ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುದ್ದುರಾಜ್ ತನ್ನ ತಂಡದೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಶರಣಾಗುವಂತೆ ಅವರು ಆರೋಪಿಗೆ ತಾಕೀತು ಮಾಡಿದ್ದಾರೆ. ಆದರೆ, ಆರೋಪಿ ಹರೀಶ್ ಪೊಲೀಸ್ ಪೇದೆಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪರಿಣಾಮ ಪೇದೆಗಳಾದ ಲಕ್ಷ್ಮೀನಾರಾಯಣ ಮತ್ತು ಹರಿ ಎಂಬುವವರಿಗೆ ತೀವ್ರ ಗಾಯಗಳಾಗಿವೆ.

ಕೊನೆಗೆ ಆರೋಪಿಯನ್ನು ಬಂಧಿಸಲು ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಬಳಿಕ ಗಾಯಾಳುಗಳಾದ ಪೇದೆಗಳು ಹಾಗೂ ಆರೋಪಿ ಹರೀಶ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಅಲ್ಲದೆ, ಈತ ಇತ್ತೀಚೆಗೆ ದಾಸರಹಳ್ಳಿ ಬಳಿಯ ಅಂಗಡಿಯೊಂದನ್ನು ದರೋಡೆ ಮಾಡಿದ್ದ. ಹೀಗಾಗಿ ಈತನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಇಂದು ಬೆಳಗ್ಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.











Click it and Unblock the Notifications