ಪೊಲೀಸರ ವೇತನ ತಾರತಮ್ಯ: ಔರಾದ್ಕರ್ ವರದಿ ಯಥಾವತ್ ಜಾರಿಗೆ ಒತ್ತಾಯ
ಬೆಂಗಳೂರು,ನ.16: ರಾಜ್ಯದ ಪೊಲೀಸ್ ಸಿಬ್ಬಂದಿಯ ವೇತನ ಹಾಗೂ ಭತ್ಯೆ ಹೆಚ್ಚಳ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಔರಾದ್ಕರ್ ವರದಿ ಜಾರಿ ಕುರಿತು ಪೊಲೀಸ್ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ರಾಜ್ಯದಲ್ಲಿ 2016ರಲ್ಲಿ ಪೊಲೀಸರು ಏಕಾಏಕಿ ಬೀದಿಗೆ ಇಳಿದಿದ್ದರು. ವೇತನ ತಾರತಮ್ಯ, ಇಲಾಖೆಯಲ್ಲಿ ಒತ್ತಡ ಕೆಲಸ, ರಜೆ ಸಾಕಷ್ಟು ವಿಚಾರಗಳನ್ನು ಮುಂದಿಟ್ಟುಕೊಂಡೇ ಪೊಲೀಸರೇ ಹೋರಾಟಕ್ಕೆ ಇಳಿದಿದ್ದರು. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ನಾನಾ ರಾಜ್ಯಗಳ ಪೊಲೀಸರ ವೇತನ ಶ್ರೇಣಿ ಬಗ್ಗೆ ಅಧ್ಯಯನ ಮಾಡಿ ಔರಾದ್ಕರ್ ಸರ್ಕಾರಕ್ಕೆ ವರದಿ ನೀಡಿದ್ದರು. ವರದಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಮೂರು ಸರ್ಕಾರಗಳು ಮುಂದಾದರೂ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ. ಭಾಗಶಃ ವರದಿ ಜಾರಿ ಮಾಡಿ ವೇತನ ಶ್ರೇಣಿ ಪರಿಷ್ಕರಿಸಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಜಾರಿ ಮಾಡಿತ್ತು.
ಭಾಗಶಃ ವರದಿ ಜಾರಿಯಿಂದ ಕೇವಲ ಹೊಸದಾಗಿ ಇಲಾಖೆಗೆ ಸೇರುವರಿಗೆ ಮಾತ್ರ ಸ್ವಲ್ಪ ಅನುಕೂಲವಾಗಲಿದೆ. ಆದರೆ ಸೇವಾ ಹಿರಿತನ ಪೊಲೀಸ್ ಸಿಬ್ಬಂದಿಗೆ ಯಾವುದೇ ಅನುಕೂಲವಾಗಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಔರಾದ್ಕರ್ ವರದಿಯನ್ನು ಜಾರಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಎರಡು ದಿನದ ಹಿಂದಷ್ಟೇ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಔರಾದ್ಕರ್ ವರದಿ ಪೂರ್ಣ ಪ್ರಮಾಣ ಜಾರಿಗೆ ಮನವಿ ಮಾಡಿದ್ದರು. ಮಾಜಿ ಗೃಹ ಸಚಿವರು ಈಗ ಪತ್ರ ಬರೆದಿದ್ದಾರೆ. ಅವರೇ ಗೃಹ ಸಚಿವರು ಆಗಿದ್ದಾಗ ಯಾಕೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಿಲ್ಲ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಆರ್ಥಿಕ ಇಲಾಖೆ ಶಿಫಾರಸಿನಂತೆ ಭಾಗಶಃ ಔರಾದ್ಕರ್ ವರದಿ ಜಾರಿಯಿಂದ ಪೊಲೀಸ್ ಸಿಬ್ಬಂದಿ ನಡುವೆ ಅಸಹನೆ, ತಾರತಮ್ಯ ಹುಟ್ಟು ಹಾಕಿದೆ. ಔರಾದ್ಕರ್ ವರದಿಯಂತೆ ವೇತನ ಶ್ರೇಣಿ ಪರಿಷ್ಕರಣೆ ಮಾಡಿರುವುದರಿಂದ ಗೊಂದಲ ಉಂಟಾಗಿದೆ. ಇದರಿಂದ ಸೇವಾ ಹಿರಿತನದ ಸಿಬ್ಬಂದಿಗೆ ಅನ್ಯಾಯವಾಗಿದೆ. ಹೊಸದಾಗಿ ಇಲಾಖೆಗೆ ಸೇರಿದವರಿಗೆ ಹೆಚ್ಚು ವೇತನ ಸಿಗುತ್ತದೆ. ಆದರೆ, ಏಳೆಂಟು ವರ್ಷ ಸೇವೆ ಮಾಡಿದವರಿಗೆ ಅನ್ಯಾಯವಾಗಲಿದೆ. ಈ ಕುರಿತು ಸಾಕಷ್ಟು ಪೊಲೀಸ್ ಸಿಬ್ಬಂದಿ ನನ್ನ ಜತೆ ಚರ್ಚೆ ನಡೆಸಿದ್ದಾರೆ. ಬರುವ ಮಾರ್ಚ್ ಒಳಗಾಗಿ ಯಡಿಯೂರಪ್ಪ ಸರ್ಕಾರ ಪೂರ್ಣ ಪ್ರಮಾಣದಲ್ಲಿ ವರದಿ ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ಮತ್ತೆ ಪೊಲೀಸರ ಅಸಹನೆ ಕಟ್ಟೆ ಹೊಡೆಯುತ್ತದೆ ಪೊಲೀಸರ ಹೋರಾಟ ನೇತೃತ್ವ ವಹಿಸಿದ್ದ ಶಶಿಧರ್ ಒನ್ ಇಂಡಿಯಾ ಕನ್ನಡಗೆ ತಿಳಿಸಿದರು.
ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಪೊಲೀಸ್ ಸಿಬ್ಬಂದಿಯ ವೇತನ ಮಾದರಿ ಅಧ್ಯಯನ ಮಾಡಿ ವರದಿ ನೀಡಲಾಗಿದೆ ಎಂದು ಔರಾದ್ಕರ್ ಹೇಳಿದ್ದರು. ಅವರು ವರದಿ ಭಾಗಶಃ ಜಾರಿಯಾದಾಗ ಏನೂ ಪ್ರತಿಕ್ರಿಯೆ ನೀಡಲಿಲ್ಲ. ನಿವೃತ್ತಿ ದಿನ ವರದಿ ಜಾರಿಯ ಬಗ್ಗೆ ನನಗೆ ಸಮಾಧಾನ ತಂದಿಲ್ಲ ಎಂದರು. ಸೇವೆಯಲ್ಲಿರುವಾಗ ಯಾಕೆ ಅವರು ವರದಿ ಜಾರಿಯ ಬಗ್ಗೆ ಅಪಸ್ಪರ ಎತ್ತಲಿಲ್ಲ ಎಂದು ಶಶಿಧರ್ ಪ್ರಶ್ನಿಸಿದ್ದಾರೆ.
ಕರೋನಾದಲ್ಲಿ ಪೊಲೀಸ್ ಸಿಬ್ಬಂದಿ ವಾರಿಯರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುವರಿಗೆ ಬಡ್ತಿ, ವೇತನ ಪ್ರಮಾಣವೂ ಕಡಿಮೆ. ರಜೆ ಪಡೆಯಲು ಸಾಧ್ಯವೇ ಇಲ್ಲ. ಇಷ್ಟು ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಯೋಗ ಕ್ಷೇಮ ಕಾಪಾಡಲಿಕ್ಕೆ ಸರ್ಕಾರ ಮುಂದಾಗಲಿದೆಯಾ ? ಅಥವಾ ಪೊಲೀಸರೇ ಮತ್ತೆ ಬೀದಿಗೆ ಇಳಿಯುವ ಪ್ರಸಂಗ ಎದುರಾಗಲಿದೆಯಾ ಕಾದು ನೋಡಬೇಕು.
ಪ್ರತಿಕ್ರಿಯೆಗೆ ಸಿಗದ ಪಾಟೀಲ್:
ದೀಪಾವಳಿ ಹಬ್ಬದ ದಿನವೇ ಪೊಲೀಸರ ಪರ ಧ್ವನಿಯೆತ್ತಿ ಔರಾದ್ಕರ್ ವರದಿ ಪೂರ್ಣ ಪ್ರಮಾಣ ಮೂಲಕ ಪೊಲೀಸರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿರುವ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆಗೆ ಸಿಗಲಿಲ್ಲ. ಹಾಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಸಂಪರ್ಕಿಸುವ ಪ್ರಯತ್ನ ಕೂಡ ವಿಫಲವಾಯಿತು.












Click it and Unblock the Notifications