Breaking; ಮತದಾರರ ಪಟ್ಟಿ ಅಕ್ರಮ, ಚಿಲುಮೆ ಸಂಸ್ಥೆ ಮೇಲೆ ಪೊಲೀಸರ ದಾಳಿ
ಬೆಂಗಳೂರು, ನವೆಂಬರ್ 18; ಬೆಂಗಳೂರು ನಗರದಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ನಾಯಕರು ಗುರುವಾರ ಚಿಲುಮೆ ಸಂಸ್ಥೆ ವಿರುದ್ದ ಆರೋಪಗಳನ್ನು ಮಾಡಿದ್ದರು.
ಶುಕ್ರವಾರ ಹಲಸೂರು ಗೇಟ್ ಠಾಣೆ ಪೊಲೀಸರು ಮಲ್ಲೇಶ್ವರದ ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈಗಾಗಲೇ ಸಂಸ್ಥೆಗೆ ಸೇರಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Voter Data Theft : ಬಿಜೆಪಿಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ; ಕಾಂಗ್ರೆಸ್
ಕಾಂಗ್ರೆಸ್ ನಾಯಕರ ಆರೋಪದ ಬಳಿಕ ಬಿಬಿಎಂಪಿ ಆಯುಕ್ತರು ಪೊಲೀಸರಿಗೆ ದೂರು ನೀಡಿದ್ದರು. ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ಈ ದೂರಿನ ಬಳಿಕ ಪೊಲೀಸರು ದಾಳಿ ಮಾಡಿದ್ದಾರೆ.
ಈ ಸಂಸ್ಥೆಗೆ ಬೆಂಗಳೂರು ಮತದಾರರು ಮಾಹಿತಿ ಹಂಚಿಕೊಳ್ಳಬಾರದು ಎಂದ ಬಿಬಿಎಂಪಿ, ಏಕೆ?
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ವರದಿ ನೀಡುವಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು. ಪಾಲಿಕೆ ಸಲ್ಲಿಕೆ ಮಾಡಿರುವ ವರದಿಯ ಪ್ರಕಾರ ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಜವಾಬ್ದಾರಿ ನೀಡಲಾಗಿತ್ತು.
Voter Data Theft : ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ ಹಗರಣ: ಸಿಎಂ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಬಿಬಿಎಂಪಿ ಆಯುಕ್ತರ ಹೇಳಿಕೆ; ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಬಗೆಗಿನ ಆರೋಪಗಳ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಹಿತಿ ಸಂಗ್ರಹಣೆ ಮಾಡಿದವರು ಐಡಿ ಕಾರ್ಡ್ನಲ್ಲಿ ಬೂತ್ ಮಟ್ಟದ ಆಫೀಸರ್ ಎಂದು ನಮೂದು ಮಾಡಿಕೊಂಡಿದ್ದಾರೆ" ಎಂದರು.
"ಈ ವಿಚಾರ ನವೆಂಬರ್ 2ರಂದು ತಿಳಿದಿದೆ. ಚುನಾವಣಾ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ಸಂಸ್ಥೆ ಅನುಮತಿ ರದ್ದು ಮಾಡಿದ್ದೇವೆ ಮತ್ತು ಚಿಲುಮೆ ಸಂಸ್ಥೆ ವಿರುದ್ಧ ದೂರು ದಾಖಲು ಮಾಡಿದ್ದೇವೆ" ಎಂದು ಆಯುಕ್ತರು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದ ಬಳಿಕ ಬಿಬಿಎಂಪಿ ಮಹದೇವಪುರ ವಲಯ ಆರ್ಒ ಚಂದ್ರಶೇಖರ್ರನ್ನು ಅಮಾನತು ಮಾಡಲಾಗಿದೆ. ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಇನ್ನು ಆಕ್ರಮ ಆರೋಪದ ತನಿಖೆ ನಡೆಸುತ್ತಿರುವ ಪೊಲೀಸರು ಚಿಲುಮೆ ಸಂಸ್ಥೆಯ ಸಿಬ್ಬಂದಿಗಳಾದ ರೇಣುಕಾಪ್ರಸಾದ್, ಧರ್ಮೇಶ್, ಸುಧಾಕರ್ ಮತ್ತು ರಕ್ಷಿತ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.