ವೈದ್ಯರಿಗೇ ತಿರುಗುಬಾಣವಾದ ವಿದ್ವತ್ ಡಿಸ್ಚಾರ್ಜ್ ವರದಿ
ಬೆಂಗಳೂರು, ಮಾರ್ಚ್ 11 : ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಆ ಚಿತ್ರವನ್ನು ಮತ್ತು ಟಿವಿಗಳಲ್ಲಿ ತೋರಿಸುತ್ತಿದ್ದ ವಿಡಿಯೋ ಫುಟೇಜ್ ಗಳನ್ನು ನೋಡುತ್ತಿದ್ದರೆ ಸಾಕು, ವಿದ್ವತ್ ಮೇಲೆ ನಲಪಾಡ್ ಅಂಡ್ ಗ್ಯಾಂಗ್ ಯಾವ ರೀತಿ ಮಾರಣಾಂತಿಕ ಹಲ್ಲೆ ಮಾಡಿತ್ತೆಂದು ತಿಳಿಯುತ್ತಿತ್ತು.
ಆದರೆ, ವಿದ್ವತ್ ಮಲ್ಯ ಆಸ್ಪತ್ರೆಯಿಂದ ಬಿಡುಗಡೆಯಾದ ದಿನವೇ ಮಲ್ಯ ಆಸ್ಪತ್ರೆಯ ವೈದ್ಯರು ಬಿಡುಗಡೆ ಮಾಡಿದ ಅಥವಾ ಲೀಕ್ ಮಾಡಿದ ಡಿಸ್ಚಾರ್ಜ್ ವರದಿ ಬೇರೆ ಕಥೆಯನ್ನೇ ಹೇಳುತ್ತಿತ್ತು. ಆ ವರದಿಯ ಪ್ರತೀ ಪುಟಗಳನ್ನು ಶಾಂತಿನಗರದ ಶಾಸಕರಾದ ಎನ್ಎ ಹ್ಯಾರಿಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸಪಟ್ಟಿದ್ದರು.
ಸೋಷಿಯಲ್ ಮೀಡಿಯಾದಲ್ಲಂತೂ, ಹ್ಯಾರಿಸ್ ಅವರೇ ನೀವು ತುಂಬಾ ಒಳ್ಳೆಯವರು, ಆದಷ್ಟು ಬೇಗ ಮೊಹಮ್ಮದ್ ನಲಪಾಡ್ ಅವರನ್ನು ಬಿಡಿಸಿಕೊಂಡು ಬನ್ನಿ, ನಮ್ಮ ಪ್ರಾರ್ಥನೆ ಅವರಿಗಾಗಿದೆ, ಇನ್ ಶಾ ಅಲ್ಲಾಹ್, ನಾಳೆ ಮೊಹಮ್ಮದ್ ಬಿಡುಗಡೆಯಾಗುತ್ತಾರೆ, ನಾವು ಅವರಿಗಾಗಿ ಕಾಯುತ್ತಿದ್ದೇವೆ, ನೀವು ದಯಾಮಯಿಗಳು ಇತ್ಯಾದಿಯಾಗಿ ಹಾರೈಕೆ ಮಾಡಿದ್ದಾರೆ.
ಇದೆಲ್ಲಕ್ಕಿಂತ ಅಚ್ಚರಿ ತಂದಿದ್ದೆಂದರೆ, ಪ್ಲಾಸ್ಟಿಕ್ ಸರ್ಜನ್ ಆಗಿರುವ ಡಾ. ಕೆ ಆನಂದ್ ಅವರು ನೀಡಿರುವ ವರದಿಯ ವಿವರಗಳು. ಈಗ ಇದೇ ಮಲ್ಯ ಆಸ್ಪತ್ರೆಯ ವೈದ್ಯರಿಗೆ ತಿರುಗುಬಾಣವಾಗಿದೆ. ಡಿಸ್ಚಾರ್ಜ್ ಸಮ್ಮರಿಯನ್ನು ಹ್ಯಾರಿಸ್ ಕೈಗಾಗಲಿ ಕೊಟ್ಟಿದ್ದೇಕೆಂದು ಸಿಸಿಬಿ ಪೊಲೀಸರು ಡಾ. ಕೆ ಆನಂದ್ ಅವರಿಗೆ ನೋಟೀಸ್ ನೀಡಿದ್ದು, ಮೂರು ವಾರಗಳೊಳಗಾಗಿ ಉತ್ತರ ನೀಡಬೇಕೆಂದು ತಾಕೀತು ಮಾಡಿದ್ದಾರೆ. ವೈದ್ಯರಿಗೇ ಬೆದರಿಕೆ ಇರುವುದರಿಂದ ಅವರು ವರದಿಯನ್ನು ತಿರುಚಿದ್ದಾರೆ ಎಂದೂ ಆರೋಪಿಸಲಾಗಿದೆ.

ಹಲವಾರು ಪ್ರಶ್ನೆ ಹುಟ್ಟುಹಾಕಿದ ಲೀಕ್
ಈ ವರದಿ ಹಲವಾರು ಪ್ರಶ್ನೆಗಳೇಳುವಂತೆ ಮಾಡಿದೆ. ಡಿಸ್ಚಾರ್ಜ್ ಸಮ್ಮರಿಯನ್ನು ರೋಗಿ ಅಥವಾ ರೋಗಿಯ ಸಂಬಂಧಿಗೆ ಮಾತ್ರ ಕೊಡಬಹುದು. ಅದು ಶಾಂತಿನಗರದ ಶಾಸಕ, ಪ್ರಭಾವಿ ರಾಜಕಾರಣಿ, ವಿದ್ವತ್ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್ ಅವರ ತಂದೆ ಎನ್ಎ ಹ್ಯಾರಿಸ್ ಕೈ ತಲುಪಿದ್ದಾದರೂ ಹೇಗೆ? ಹ್ಯಾರಿಸ್ ಮತ್ತು ಅವರ ಮಗ ಮೊಹಮ್ಮದ್ ನಲಪಾಡ್ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ, ಈ ಪ್ರಕರಣದಲ್ಲಿ ಅಂಥದ್ದೇನೂ ಆಗಿಲ್ಲ ಎಂದು ಬಿಂಬಿಸುವ ಉದ್ದೇಶದಿಂದ ಡಿಸ್ಚಾರ್ಜ್ ಸಮ್ಮರಿ ಬಿಡುಗಡೆ ಮಾಡಲಾಯಿತಾ?

ಆ ಕರಾಳ ರಾತ್ರಿ ನಡೆದ ಘಟನೆಯ ಮೆಲುಕು
ಯುಬಿ ಸಿಟಿಯಲ್ಲಿರುವ ಫಾರ್ಜಿ ಕೆಫೆಯಲ್ಲಿ, ವಿದ್ವತ್ ಕಾಲುಚಾಚಿ ಕುಳಿತಿದ್ದಾರೆ ಎಂಬ ಕಾರಣಕ್ಕಾಗಿ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಮತ್ತು ಸ್ನೇಹಿತರು ವಿದ್ವತ್ ಮೇಲೆ ಭೀಕರ ಹಲ್ಲೆ ನಡೆಸಿದ್ದರು. ವಿದ್ವತ್ ಕ್ಷಮೆ ಕೇಳಿದರೂ ಬಿಡದೆ ಬಿಯರ್ ಬಾಟಲಿಗಳಿಂದ ಹಲ್ಲೆ ಮಾಡಿದ್ದರು. ಕ್ಷಮೆ ಕೇಳಿದ ಪ್ರತೀಸಲವೂ ಬಲವಾದ ಪೆಟ್ಟುಗಳು ಬೀಳುತ್ತಿದ್ದವು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ವತ್ ರನ್ನು ಮಲ್ಯ ಆಸ್ಪತ್ರೆಗೆ ಸೇರಿಸಿದಾಗ, ಅಲ್ಲಿ ಕೂಡ ನುಗ್ಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ವತ್ ಮೇಲಿನ ಹಲ್ಲೆ ನಿರ್ಭಯಾಳ ಮೇಲಿನ ಹಲ್ಲೆಯನ್ನು ನೆನಪಿಸುತ್ತಿತ್ತು ಎಂದೂ ವೈದ್ಯರು ಹೇಳಿಕೆ ನೀಡಿದ್ದರು.

ಪೊಲೀಸರೇ ಕಟ್ಟುಕಥೆಯನ್ನೆಲ್ಲಾ ಸೃಷ್ಟಿಸಿದ್ದಂತೆ
ವಿದ್ವತ್ ಯಾವ ಸ್ಥಿತಿ ತಲುಪಿದ್ದರೆಂದರೆ, ಎರಡು ವಾರಗಳ ಕಾಲ ಪೊಲೀಸರಿಗೆ ಹೇಳಿಕೆ ನೀಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಅವರ ಆರೋಗ್ಯ ಸುಧಾರಿಸದಿದ್ದರೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೂ ಕರೆದುಕೊಂಡು ಹೋಗಲು ಅವರ ಕುಟುಂಬದವರು ನಿರ್ಧರಿಸಿದ್ದರು. ಆದರೆ ನಲಪಾಡ್ ವಕೀಲರು ಹೇಳುತ್ತಿದ್ದುದೇ ಬೇರೆ. ವಿದ್ವತ್ ಮೇಲೆ ಯಾವುದೇ ಹಲ್ಲೆ ಆಗಿರಲಿಲ್ಲ. ಈ ಕಥೆಯನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ನಾಲ್ಕು ವಾರಗಳ ಹಿಂದೆಯೇ ವಿದ್ವತ್ ಗೆ ಗಾಯಗಳಾಗಿದ್ದವು. ನಲಪಾಡ್ ಕೆಫೆಗೆ ಆಲ್ಕೋಹಾಲ್ ಕುಡಿಯಲು ಹೋಗಿರಲಿಲ್ಲ ಇತ್ಯಾದಿಯಾಗಿ ಹೇಳಿಕೆ ನೀಡಿದ್ದರು.

ಅಷ್ಟಕ್ಕೂ ಡಿಸ್ಚಾರ್ಜ್ ಸಮ್ಮರಿಯಲ್ಲಿರುವುದೇನು?
ಏಕೆಂದರೆ, ಮಲ್ಯ ಆಸ್ಪತ್ರೆ ಬಿಡುಗಡೆ ಮಾಡಿದ ಡಿಸ್ಚಾರ್ಜ್ ವರದಿಯ ಮಾಹಿತಿಯೇ ಹಾಗಿತ್ತು. ವಿದ್ವತ್ ಅವರನ್ನು ಫೆಬ್ರವರಿ 17ರಂದು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮೂಗಲ್ಲಿ, ಕಿವಿಯಲ್ಲಿ ಯಾವುದೇ ರಕ್ತಸ್ರಾವವಿರಲಿಲ್ಲ. ಕತ್ತು, ಕಣ್ಣು, ಮುಖದ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಬಿಟ್ಟರೆ, ಅವರು ಪ್ರಜ್ಞೆ ಕಳೆದುಕೊಂಡಿರಲಿಲ್ಲ. ತಲೆಗೆ ಕೂಡ ಯಾವುದೇ ಪೆಟ್ಟಾಗಿಲ್ಲ. ಸಿಟಿ ಸ್ಕ್ಯಾನ್ ಪ್ರಕಾರ ಮೂಗಿನ ಮೂಳೆಯಲ್ಲಿ ಹೇರ್ ಲೈನ್ ಫ್ರಾಕ್ಚರ್ ಆಗಿದೆ. ಇದಕ್ಕೆ ಯಾವುದೇ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ. ಅವರಿಗೆ ಪ್ರಾಣ ಹೋಗುವಂಥ ಯಾವುದೇ ಗಾಯಗಳಾಗಿಲ್ಲ ಎಂಬಿತ್ಯಾದಿಯಾಗಿ ಡಾ. ಕೆ ಆನಂದ್ ಅವರು ವರದಿ ಒಪ್ಪಿಸಿದ್ದಾರೆ. ಈ ರೀತಿ ವರದಿ ಸೃಷ್ಟಿಸಲು ವೈದ್ಯರಿಗೆ ಬೆದರಿಕೆ ಒಡ್ಡಲಾಗಿತ್ತೆ? ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.

ಅಕ್ರಮವಾಗಿ ಪಡೆದುಕೊಂಡಿರುವ ವೈದ್ಯಕೀಯ ವರದಿ?
ಡಿಸ್ಚಾರ್ಜ್ ಸಮ್ಮರಿ ಹ್ಯಾರಿಸ್ ಅವರ ಕೈತಲುಪಿರುವ ಬಗ್ಗೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಮ್ ಸುಂದರ್ ಅವರು ಕರ್ನಾಟಕ ಹೈಕೋರ್ಟಿನ ಗಮನಕ್ಕೂ ತಂದಿದ್ದಾರೆ. ವಿದ್ವತ್ ಅವರಿಗೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಹ್ಯಾರಿಸ್ ಅವರು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಸ್ಚಾರ್ಜ್ ವರದಿ ಸಿಕ್ಕಿದ್ದರೂ ಹ್ಯಾರಿಸ್ ಅವರು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದೇಕೆ? ಈ ನಡುವೆ, ವಿವಾದದ ಸುಳಿಯಲ್ಲಿ ಸಿಲುಕಿರುವ ಎನ್ಎ ಹ್ಯಾರಿಸ್ ಅವರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಂತಿನಗರದಿಂದ ಟಿಕೆಟ್ ನೀಡಬಾರದು ಎಂಬ ವಾದವನ್ನು ಕಾಂಗ್ರೆಸ್ ಪಕ್ಷದ ನಾಯಕರೇ ಹೈಕಮಾಂಡ್ ಮುಂದಿಟ್ಟಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಮೊಹಮ್ಮದ್ ನಲಪಾಡ್
ಇಷ್ಟೆಲ್ಲ ಬೆಳವಣಿಗೆಗಳು ನಡೆದಿರುವಾಗ ಮೊಹಮ್ಮದ್ ನಲಪಾಡ್ ಮತ್ತು ಆರು ಜನ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಅವರಿಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ. ಅವರು ಬಿಡುಗಡೆಯಾದರೆ ಸಾಕ್ಷಿ ನಾಶ ಮಾಡಬಹುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಜಾಮೀನು ನೀಡಲಾಗಿಲ್ಲ. ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ಮಾರ್ಚ್ 12ರಂದು ಮತ್ತೆ ವಿಚಾರಣೆಗೆ ಬರಲಿದೆ. ಮೊಹಮ್ಮದ್ ನಲಪಾಡ್ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications