ಪೊಲೀಸರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ
ಬೆಂಗಳೂರು, ಆ.19 : ಹೆಗ್ಗನಹಳ್ಳಿ ಕಾರ್ಪೋರೇಟರ್ ಗೋವಿಂದೇಗೌಡರ ಸೊಸೆ ಅಪಹರಣಕ್ಕೆ ಯತ್ನಿಸಿದ್ದ ಪ್ರಮುಖ ಆರೋಪಿ ವೆಂಕಟೇಶ್ ಮೇಲೆ ಸೋಮವಾರ ರಾತ್ರಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ವೆಂಕಟೇಶ್ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಗುಂಡಿನ ದಾಳಿ ನಡೆಸಲಾಗಿದೆ.
ಸೋಮವಾರ ರಾತ್ರಿ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಬೈಕ್ನಲ್ಲಿ ಸಾಗುತ್ತಿದ್ದ ವೆಂಕಟೇಶ್ನನ್ನು ಪೊಲೀಸರು ಬಂಧಿಸಲು ಮುಂದಾದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ, ಗುಂಡಿನ ದಾಳಿ ನಡೆಸಲಾಗಿದೆ. ಗಾಯಗೊಂಡಿರುವ ಅವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೌಡಿ ಶೀಟರ್ ವೆಂಕಟೇಶ್ ಗಾಯತ್ರಿನಗರದ ನಿವಾಸಿ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ. ಸುಬ್ರಹ್ಮಣ್ಯನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಉಡುಪಿ ಪೊಲೀಸ್ ಠಾಣೆಯಲ್ಲಿ ದರೋಡೆ, ಸುಲಿಗೆ, ಕಿಡ್ನ್ಯಾಪ್, ಕೊಲೆ ಯತ್ನ ಪ್ರಕರಣಗಳು ವೆಂಕಟೇಶ್ ವಿರುದ್ಧ ದಾಖಲಾಗಿವೆ. [ಬಿಬಿಎಂಪಿ ಕಾರ್ಪೋರೇಟರ್ ಸೊಸೆ ಅಪಹರಣ ಯತ್ನ]
ಉಡುಪಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಾಣೆ ಪ್ರಕರಣದಲ್ಲಿ ವೆಂಕಟೇಶ್ ಆರೋಪಿಯಾಗಿದ್ದ. ಸಾಮಾನ್ಯವಾಗಿ ಖಾಸಗಿ ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಈತ, ಬಿಡದಿ, ರಾಮನಗರದಲ್ಲಿ ಹೆಚ್ಚು ಇರುತ್ತಿದ್ದ. ಸೋಮವಾರ ರಾತ್ರಿ ಸಹ ಕುಂಬಳಗೋಡಿನಲ್ಲಿ ರೌಡಿ ಪರಮಗಿರಿ ಜತೆ ಜಗಳವಾಡಿಕೊಂಡು, ಕಾರೊಂದರ ಗಾಜನ್ನು ಒಡೆದು ಹಾಕಿ, ಬೆಂಗಳೂರಿಗೆ ಬಂದಿದ್ದ.
ಆ.13ರಂದು ಶಿವಾನಂದ ಸರ್ಕಲ್ಬಳಿ ಹೆಗ್ಗನಹಳ್ಳಿ ಕಾರ್ಪೋರೇಟರ್ ಗೋವಿಂದೇಗೌಡರ ಸೊಸೆ ಮಾನಸ ಅವರನ್ನು ಅಪಹರಿಸಲು ಯತ್ನಿಸಿದ ಆರೋಪಿಗಳಲ್ಲಿ ವೆಂಕಟೇಶ್ ಸಹ ಸೇರಿಕೊಂಡಿದ್ದ. ಅಂದಿನಿಂದಲೂ ಹೈಗ್ರೌಂಡ್ಸ್ ಪೊಲೀಸರು ವೆಂಕಟೇಶ್ಗಾಗಿ ಹುಡಕಾಟ ನಡೆಸುತ್ತಿದ್ದರು.












Click it and Unblock the Notifications