ಮೋಸದ ಚಿತ್ರ ಹೆಣೆಯುತ್ತಿದ್ದ ನಕಲಿ ಕನ್ನಡ ನಿರ್ಮಾಪಕರ ಸೆರೆ
ಬೆಂಗಳೂರು, ಡಿಸೆಂಬರ್ 27: ರಿಯಲ್ ಎಸ್ಟೇಟ್, ಚಲನಚಿತ್ರ ನಿರ್ಮಾಣ ಹಾಗೂ ಚಲನಚಿತ್ರ ವಿತರಣೆಯಲ್ಲಿ ಲಾಭ ಗಳಿಸಬಹುದೆಂಬ ಆಮಿಷವೊಡ್ಡಿ ಅಮಾಯಕನನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಚಲನಚಿತ್ರ ನಿರ್ಮಾಪಕ ಸೇರಿದಂತೆ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಯಾಗಿರುವ ದಿವ್ಯಶ್ರೀ ಅವರಿಗೆ ಮೈಸೂರಿನ ಜಿಆರ್ ಎಸ್ ಪ್ಯಾಂಟಸಿ ಪಾರ್ಕ್ ಬಳಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ, ರಿಯಲ್ ಎಸ್ಟೇಟ್ನಲ್ಲಿ ಹಣ ತೊಡಗಿಸಿ ಹೆಚ್ಚಿನ ಹಣ ಗಳಿಸಬಹುದು ಹಾಗೂ ಚಲನಚಿತ್ರೀಕರಣ ಹಾಗೂ ಚಲನಚಿತ್ರ ನಿರ್ಮಾಣ ಮತ್ತು ವಿತರಣೆ ಹೆಸರಿನಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ 88 ಲಕ್ಷ ರೂ ವಂಚಿಸಿದ್ದರು.
ಸುಧಾಕರ, ವೆಂಕಟಸುಬ್ಬಯ್ಯ, ನಲ್ಲಯನ್ ಪೀಟರ್, ವಿಜಯ್ಕುಮಾರ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಿಸಿಬಿಗೆ ತನಿಖೆಯನ್ನು ವರ್ಗಾವಣೆ ಮಾಡಿತ್ತು.

ಸುಧಾಕರ ಎಂಬುವವರು ವರ್ಧನ, ಕಥಾ ವಿಚಿತ್ರ, ಹುಲಿದುರ್ಗ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿರುವುದಾಗಿಯೂ ಹಾಗೂ ಹಲವು ಚಲನಚಿತ್ರಗಳ ವಿತರಣೆ ಪಡೆದಿರುವುದಾಗಿಯೂ ಹೇಳಿ ವಂಚಿಸುತ್ತಿದ್ದ.
ಬೆಂಗಳೂರು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಹಾಗೂ ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್ ಅವರ ನೇತೃತ್ವದ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications