ರಸ್ತೆಗುಂಡಿ ದುರಸ್ತಿ: 'ಮೋದಿ ತಿಂಗಳಿಗೊಮ್ಮೆ ಬರಲಿ' ಚಳವಳಿ ನಡೆಸಿದ ಎಎಪಿ ಮುಖಂಡರ ಬಂಧನ
ಬೆಂಗಳೂರು, ನವೆಂಬರ್ 10: ಪ್ರಧಾನಮಂತ್ರಿ 'ನರೇಂದ್ರ ಮೋದಿ ತಿಂಗಳಿಗೊಮ್ಮೆ ಬರಲಿ' ಬರಬೇಕು ಎಂದು ಆಗ್ರಹಿಸಿ ವಿನೂತನವಾಗಿ ಚಳಿವಳಿ ನಡೆಸಿದ ಆಮ್ ಆದ್ಮಿ ಪಾರ್ಟಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಮಂತ್ರಿಗಳು ಬೆಂಗಳೂರಿಗೆ ಆಗಮಿಸುವುದು ಕೆಲವೇ ದಿನಗಳು ಇರುವಾಗ ಮಾತ್ರ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ರಸ್ತೆಗಳ ದುರಸ್ತಿ ಕೆಲಸ ಮಾಡುತ್ತದೆ. ಇದರಿಂದ ಬೆಂಗಳೂರು ಸುಂದರವಾಗುತ್ತದೆ. ಇದೇ ರೀತಿ ಬೆಂಗಳೂರು ಸದಾಕಾಲ ಸುಂದರವಾಗಿರಲು ಪ್ರಧಾನಿ ತಿಂಗಳಿಗೊಮ್ಮೆ ಆಗಮಿಸಬೇಕು ಎಂದು ಗುರುವಾರ ಆಮ್ ಆದ್ಮಿ ಪಕ್ಷ ಚಳವಳಿ ಆರಂಭಿಸಿತ್ತು.
ಮೋದಿ ಉದ್ಘಾಟಿಸಲಿರುವ ಬೆಂಗಳೂರಿನ 'ಗಾರ್ಡನ್ ಟರ್ಮಿನಲ್' ಬಗ್ಗೆ ನಿಮಗೆಷ್ಟು ಗೊತ್ತು?
ಗುರುವಾರದಂದು ಬೆಳಗ್ಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ರಸ್ತೆಯಲ್ಲಿ ಹಾಗೂ ಮಧ್ಯಾಹ್ನ ಮಲ್ಲೇಶ್ವರಂನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ರೈಲು ನಿಲ್ದಾಣದ ಸಮೀಪ ಪ್ರತಿಭಟಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ರಸ್ತೆಗುಂಡಿಗೆ ಬಲಿಯಾದರೂ ತಲೆಕೆಡಿಸಿಕೊಳ್ಳದ ಸರ್ಕಾರ
ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಾಲು ಸಾಲು ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡರೂ, ಜೀವ ಕಳೆದುಕೊಂಡರು ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಾರೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದರು.
ಪ್ರಧಾನಿಮಂತ್ರಿಗಳು ಸಂಚರಿಸುವ ನಗರ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಿ, ಉಳಿದ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೋದಿಯವರನ್ನು ಮೆಚ್ಚಿಸಿ, ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗುವುದೇ ಬಸವರಾಜ ಬೊಮ್ಮಾಯಿಯವರ ಏಕೈಕ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಅವರು ದೂರಿದರು.
ಗುಣಮಟ್ಟದ್ದಲ್ಲದೇ ಅವಸರದಲ್ಲಿ ರಸ್ತೆ ದುರಸ್ತಿ
ಬೆಂಗಳೂರಿಗೆ ಪ್ರಧಾನಿಗಳು ಬರುವಾಗ ಮುಚ್ಚುವ ಗುಂಡಿಗಳು ಅವರು ಬಂದು ಹೋದ ಕೆಲವೇ ದಿನಗಳಲ್ಲಿ ಮತ್ತೆ ಬಾಯಿ ತೆರೆಯಲಿವೆ. ಗುಣಮಟ್ಟ ಕಾಯ್ದುಕೊಳ್ಳದೇ ಅವರಸರದಲ್ಲಿ ಮಾಡಿದ ರಸ್ತೆ ಕಾಮಗಾರಿಗಳು ಒಂದು ತಿಂಗಳು ಬಾಳಿಕೆ ಬರುವುದೂ ಅನುಮಾನ. ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗಲೂ ಇದೇ ರೀತಿ ಆಗಿತ್ತು.
ಆದ್ದರಿಂದ ಪ್ರಧಾನಿ ಮೋದಿಯವರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಎಲ್ಲ ರಸ್ತೆಗಳಲ್ಲಿ ಸಂಚರಿಸಬೇಕು. ಇಲ್ಲದಿದ್ದರೆ ಇಲ್ಲಿನ ಮುಖ್ಯಮಂತ್ರಿಗಳು, ಸಚಿವರು ಸಚಿವರು ಹಾಗೂ ಶಾಸಕರು ನಿದ್ರಾವಸ್ಥೆಯಲ್ಲಿ ಇರುತ್ತಾರೆ ಎಂದು ಅವರು ಆರೋಪಿಸಿದರು.
ತೆರಿಗೆ ಕಟ್ಟುವ ಜನರಿಗಾಗಿ ರಸ್ತೆ ದುರಸ್ತಿ ಮಾಡಿ
ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಆಸ್ತಿ ತೆರಿಗೆ ಮುಂತಾದವುಗಳನ್ನು ಮಾತ್ರವಲ್ಲದೇ ಉತ್ತಮ ರಸ್ತೆಗಾಗಿ ವಾಹನ ನೋಂದಣಿ ಶುಲ್ಕ, ರಸ್ತೆ ತೆರಿಗೆಯನ್ನು ಸಹ ಜನಸಾಮಾನ್ಯರು ಪಾವತಿಸುತ್ತಾರೆ. ಆದರೆ ರಾಜ್ಯ ಸರ್ಕಾರವು ಜನರಿಗಾಗಿ ರಸ್ತೆ ದುರಸ್ತಿ ಮಾಡುವ ಬದಲು ಪ್ರಧಾನಿಗಾಗಿ ದುರಸ್ತಿ ಮಾಡುತ್ತಿದೆ. ಜನಸಾಮಾನ್ಯರನ್ನು ಕಸದಂತೆ ಕಂಡು, ಜನವಿರೋಧಿ ಆಡಳಿತ ನೀಡುತ್ತಿರುವ ಬಿಜೆಪಿಗೆ ಜನಸಾಮಾನ್ಯರೇ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಎಎಪಿ ರಾಜ್ಯಾಧ್ಯಕ್ಷ ಟ್ವಿಟ್ಟರ್ನಲ್ಲಿ ವ್ಯಂಗ್ಯ
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಾರೆಂದರೆ ಖುಷಿಯಾಗುತ್ತದೆ. ಸದಾ ಗೊರಕೆ ಹೊಡೆಯುವ ಇಲ್ಲಿನ ಬಿಜೆಪಿ ಶಾಸಕರು ರಸ್ತೆಗುಂಡಿ ಮುಚ್ಚಿಸುತ್ತಾರೆ. ಸುಣ್ಣಬಣ್ಣ ಹೊಡೆಯುತ್ತಾರೆ. ನೀವು ಆಗಾಗ ಇಲ್ಲವೇ ವಾರಕ್ಕೊಮ್ಮೆ ನಗರಕ್ಕೆ ಬರುತ್ತಿರಿ ಎಂದು ಆಗ್ರಹಿಸಿದ್ದರು. ಆಗಲಾದರು ನಿಮ್ಮ ಶಾಸಕರು ಕೆಲಸ ಮಾಡುತ್ತಾರೋ ನೋಡೋಣ ಎಂದು ಅವರು ಟ್ವೀಟ್ನಲ್ಲಿ ವ್ಯಂಗ್ಯವಾಡಿದ್ದರು.
ಪಕ್ಷದ ನಾಯಕರಾದ ಜಗದೀಶ್ ವಿ.ಸದಂ, ಸುರೇಶ್ ರಾಥೋಡ್, ಅಂಜನಾ ಗೌಡ, ಅಶೋಕ್ ಮೃತ್ಯುಂಜಯ, ಗೋಪಿನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.