ಬೆಂಗಳೂರಿಗೆ ಪ್ರಧಾನಿ ಭೇಟಿ: ರಸ್ತೆಗುಂಡಿ ಮುಚ್ಚಲು ಮುಂದಾದ ಬಿಬಿಎಂಪಿ, ಎಎಪಿ ವ್ಯಂಗ್ಯ
ಬೆಂಗಳೂರು, ನವೆಂಬರ್ 09: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು ಎಂಟು ವಲಯಗಳ ವ್ಯಾಪ್ತಿಯಲ್ಲಿ ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿದೆ.
ಪ್ರಧಾನ ಮಂತ್ರಿಗಳು ಓಡಾಡುವ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯು ಅಧಿಕಾರಿಗಳಿಗೆ ಸೂಚಿಸಿದೆ. ಬೆಂಗಳೂರಿನ ಎಂಟು ವಲಯಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ 2,494 ರಸ್ತೆಗುಂಡಿಗಳನ್ನು ನವೆಂಬರ್ 15ರೊಳಗೆ ಮುಚ್ಚಲು ಗಡುವು ನೀಡಿದೆ.
Recommended Video
ಕಳಸದ ರಸ್ತೆ ಅವ್ಯವಸ್ಥೆ ಬಗೆಗಿನ ವ್ಯಂಗ್ಯ ಚಿತ್ರಗಳು ವೈರಲ್
ಪ್ರಧಾನಮಂತ್ರಿ ಆಗಮಿಸುವಾಗ ಮಾತ್ರವೇ ರಸ್ತೆಗುಂಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು ಸಾರ್ವಜನಿಕರು ರಸ್ತೆಗುಂಡಿಗಳಿಗೆ ಬಲಿಯಾದಾಗ, ರಸ್ತೆ ಅಪಘಾತಗಳು ಸಂಭವಿಸಿದಾಗ ಕಾಳಜಿ ವಹಿಸುವುದಿಲ್ಲ. ನಿತ್ಯ ಓಡಾಡಲು ಜನರಿಗೆ ತೊಂದರೆಯಾದರೂ ಸಹ ರಸ್ತೆಗುಂಡಿ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷಿಸುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಧಾನಿ ಮೋದಿ ಆಗಮನ: ಚುರುಕಾದ ಬಿಬಿಎಂಪಿ
ನವೆಂಬರ್ 11ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಓಡಾಡಲಿರುವ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಬಿಬಿಎಂಪಿ ಮುಚ್ಚುವ ಕೆಲಸ ಮಾಡುತ್ತಿದೆ.
ಜೊತೆಗೆ ಪಾಲಿಕೆ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ವಿವಿಧ ವಲಯಗಳಿಗೆ ಭೇಟಿ ನೀಡಿ ರಸ್ತೆಗುಂಡಿ ಮುಚ್ಚುತ್ತಿರುವ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ತಪಾಸಣೆ ನಡೆಸಿದ್ದಾರೆ. ರಸ್ತೆಗುಂಡಿ, ಪಾದಾಯಚಾರಿ ಮಾರ್ಗದ ಸಮಸ್ಯೆ ಬಗೆಹರಿಸಲು ನಿತ್ಯ ಪರಿಶೀಲಿಸುವಂತೆ ಸ್ಥಳಗಳಿಗೆ ಭೇಟಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳು, ವಲಯ ಜಂಟಿ ಆಯುಕ್ತರಿಗೆ ತಿಳಿಸಿದ್ದಾರೆ.
2,494 ರಸ್ತೆಗುಂಡಿ ಮುಚ್ಚುವುದು ಬಾಕಿ ಇದೆ
ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿಯು ಒಟ್ಟು 32,011 ರಸ್ತೆಗುಂಡಿಗಳನ್ನು ಗುರುತಿಸಿತ್ತು, ಅದರಲ್ಲಿ ಈಗಾಗಲೇ 29,517 ರಸ್ತೆಗುಂಡಿಗಳನ್ನು (ಶೇ.92ರಷ್ಟು)ಮುಚ್ಚಲಾಗಿದೆ. ಬಾಕಿ 2,494 ರಸ್ತೆಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಕ್ರಮ ಕೈಗೊಂಡಿದ್ದೇವೆ ಎಂದು ಪಾಲಿಕೆ ಪ್ರಕಟಣೆ ಹೊರಡಿಸಿದೆ. ಈ ಪೈಕಿ ಬೊಮ್ಮನಹಳ್ಳಿ ವಲಯದಲ್ಲಿ 263, ದಾಸರಹಳ್ಳಿ 1045, ಪೂರ್ವ 92, ಮಹದೇವಪುರ 123, ಆರ್ಆರ್ ನಗರ ವ್ಯಾಪ್ತಿಯಲ್ಲಿ 203, ದಕ್ಷಿಣ 67, ಪಶ್ಚಿಮ 292 ಮತ್ತು ಯಲಹಂಕ ವಲಯದಲ್ಲಿ 42 ಹಾಗೂ ಪ್ರಮುಖ್ಯ ರಸ್ತೆಗಳಲ್ಲಿ 367ಗುಂಡಿಗಳು ಬಿದ್ದಿವೆ. ಅವುಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಾದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ಸುತ್ತಮುತ್ತ, ಶಾಂತಲಾ ವೃತ್ತ, ಮತ್ತು ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ಹೊಸದಾಗಿ ಕೋಟ್ ಟಾರ್ ಹಾಕಲು ಕಾರ್ಮಿಕರು ಮಿಲ್ಲಿಂಗ್ ಮಾಡುತ್ತಿದ್ದಾರೆ. ಡಾಂಬರು ಹಾಕಿ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ನಿರತರಾಗಿದ್ದಾರೆ.
ರಸ್ತೆಗುಂಡಿ: ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಸುದ್ದಿ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ 14ಕಿಲೋ ಮೀಟರ್ ರಸ್ತೆಯನ್ನು ಒಟ್ಟು 23ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಮುಚ್ಚಿತ್ತು. ಆದರೆ ಕೆಲವೆಡೆ ಕಳೆಪೆ ಕಾಮಗಾರಿ ಆಗಿದ್ದರಿಂದ ಡಾಂಬರು ಎರಡೇ ದಿನಕ್ಕೆ ಕಿತ್ತು ಹೋಗಿತ್ತು. ಇದರಿಂದಾಗಿ ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೆ ಪ್ರಧಾನಮಂತ್ರಿ ಕಚೇರಿ ರಸ್ತೆ ದುರಸ್ಥಿ ಕಾಮಗಾರಿ ಬಗ್ಗೆ ವರದಿ ಕೇಳಿತ್ತು. ಈ ಬಾರಿಯು ಪ್ರಧಾನಿ ಆಗಮನ ಹಿನ್ನೆಲೆ ನಡೆಸುತ್ತಿರುವ ರಸ್ತೆಗುಂಡಿಗಳು ಕಳಪೆ ಗುಣಮಟ್ಟದ್ದು ಆಗಿರದಿರಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಎಎಪಿಯಿಂದ 'ನಮ್ಮಲ್ಲಿಗೂ ಬನ್ನಿ ಮೋದಿ' ಅಭಿಯಾನ
ಶಾಸಕರು ನಿರಂತರವಾಗಿ ಕೆಲಸ ಮಾಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೊಮ್ಮೆ ಬೆಂಗಳೂರಿಗೆ ಬರುತ್ತಿರಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆ ರಸ್ತೆ ದುರಸ್ತೆ ಕಾರ್ಯ ನಡೆಸಿದ್ದರಿಂದ ಎಎಪಿಯು 'ನಮ್ಮಲ್ಲಿಗೂ ಬನ್ನಿ ಮೋದಿ' ಅಭಿಯಾನ ಎಂಬ ಅಭಿಯಾನ ಆರಂಭಿಸಿದೆ.
ಸದಾ ಗೊರಕೆ ಹೊಡೆಯುವ ಇಲ್ಲಿನ ಬಿಜೆಪಿ ಶಾಸಕರು ರಸ್ತೆಗುಂಡಿ ಮುಚ್ಚಿಸುತ್ತಾರೆ. ಸುಣ್ಣಬಣ್ಣ ಹೊಡೆಯುತ್ತಾರೆ. ನನ್ನ ಒಂದೇ ಮನವಿ ಮೋದಿಯವರೇ, ನೀವು ಆಗಾಗ ವಾರಕ್ಕೊಮ್ಮೆ ಬರುತ್ತಿರಿ. ನಿಮ್ಮ ಶಾಸಕರು ಆಗಲಾದರೂ ಕೆಲಸ ಮಾಡುತ್ತಾರೋ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ ಆಸ್ಪತ್ರೆ ಭೇಟಿಗೆ ಟೀಕೆ
ಇತ್ತೀಚೆಗೆ ಗುಜರಾತಿನ ಮೊರ್ಬಿ ತೂಗು ಸೇತುವೆ ಬಿದ್ದ ಪರಿಣಾಮ ಸಾಕಷ್ಟು ಮಂದಿ ಜೀವ ಬಿಟ್ಟರು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಗುಜರಾತಿನಲ್ಲಿದ್ದ ಪ್ರಧಾನಿ ಮೋದಿ ಆಸ್ಪತ್ರೆ ಭೇಟಿ ನೀಡದೇ ಎರಡು ದಿನ ಬಳಿಕ ತಡವಾಗಿ ಭೇಟಿ ನೀಡಿದರು. ಈ ಎರಡು ದಿನ ಗಾಯಾಳು ದಾಖಲಾಗಿದ್ದ ಸ್ಥಳಿಯ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿಯಲಾಯಿತು. ಇದಾದ ನಂತರ ಪ್ರಧಾನಿ ಆಸ್ಪತ್ರೆಗೆ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರಧಾನಿ ಮೋದಿ ಭೇಟಿಯನ್ನು ಟೀಕಿಸಿದ್ದವು.
ಇದೀಗ ಬೆಂಗಳೂರಿನಲ್ಲಿ ಅಂತದ್ದೆ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಆಗಮನ ಹಿನ್ನೆಲೆ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಕಳೆದ ಎರಡು ವಾರದಲ್ಲಿ ರಾಜಾಜಿನಗರ ಸೇರಿದಂತೆ ಬೆಂಗಳೂನ ಹಲವೆಡೆ ರಸ್ತೆಗುಂಡಿಯಿಂದ ಜನ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯವಾಗಿವೆ. ಈ ಬಗ್ಗೆ ಗಮನಹರಿಸದ ಸರ್ಕಾರ, ಬಿಬಿಎಂಪಿ ಈಗ ದುರಸ್ತಿ ಕಾರ್ಯ ಮಾಡುತ್ತಿದೆ.