ಬಿಎಂಟಿಸಿ ದರ ಕೊಂಚ ಇಳಿಕೆ: ಜನ ಏನಂತಾರೆ?
ಬೆಂಗಳೂರು, ಜ. 8: 'ಏನೂ ಮಾತಾಡಬೇಡ್ರಿ,,, ಹೋಗಿ ಸಾಕು, ಮನಸ್ಸಿಗೆ ಕಂಡಾಗ ಸಿಕ್ಕಾಪಟ್ಟೆ ಏರಿಸೋದು, ಜನ ಕೂಗಾಡಿದ ಮೇಲೆ ಒಂಚೂರು ಇಳಿಸೋದು, ಇವರ ಬಗ್ಗೆ ಏನೂ ಅಂತ ಹೇಳಕಾಗುತ್ತೆ' ಹೀಗಂತ ಪ್ರತಿಕ್ರಿಯೆ ನೀಡಿದವರು ಬನಶಂಕರಿ ಮೂರನೇ ಹಂತದ ನಿವಾಸಿ ರಾಜೇಂದ್ರ ದೀಕ್ಷಿತ್.
ಬಿಎಂಟಿಸಿ ದರ ಇಳಿಕೆ ಬಗ್ಗೆ ಒನ್ ಇಂಡಿಯಾ ಜನರ ಪ್ರತಿಕ್ರಿಯೆ ಕೇಳಿದಾಗ ಬೆಂಗಳೂರಿನಲ್ಲಿ ಕಳೆದ 30 ವರ್ಷಗಳಿಂದ ವಾಸವಿರುವ ದೀಕ್ಷಿತ್ ಖಾರವಾಗಿಯೇ ಉತ್ತರ ನೀಡಿದರು. ವಿಪಕ್ಷಗಳು, ನಾಗರಿಕರು ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಬಸ್ ದರ ಕೊಂಚ ಇಳಿಕೆ ಮಾಡಿದೆ. ಆದರೆ ಈ ಇಳಿಕೆ ಜನರಿಗೆ ಸ್ವಲ್ಪವೂ ಸಮಾಧಾನ ತಂದಿಲ್ಲ.[ಕರ್ನಾಟಕ ಸರ್ಕಾರದಿಂದ ಬಸ್ ಪ್ರಯಾಣ ದರ ಇಳಿಕೆ]

ಪ್ರತಿನಿತ್ಯ ಬಿಎಂಟಿಸಿಯಲ್ಲಿ ಒಡಾಡುವವರು ತಿಂಗಳ ಪಾಸ್ ಬಳಸುತ್ತಾರೆ. ಪ್ರತಿ ಹಂತಕ್ಕೆ ಒಂದು ರೂಪಾಯಿ ಇಳಿಕೆ ಮಾಡಿರುವ ಬಿಎಂಟಿಸಿ ಪಾಸ್ ದರದಲ್ಲಿ ಯಾವ ಬದಲಾವಣೆ ಮಾಡಿಲ್ಲ.
ಬೆಂಗಳೂರಿನಲ್ಲಿ ಯಾವುದು ಹಂತ ಎಂದು ಸ್ಪಷ್ಟವಾಗಿ ವಿರ್ವಾಹಕರಿಗೆ ಗೊತ್ತಿರುವುದಿಲ್ಲ. ಒಮ್ಮೊಮ್ಮೆ ಒಂದೊಂದು ದರ ತೆಗೆದುಕೊಂಡ ಉದಾಹರಣೆಗಳು ಇವೆ. ಮೆಜೆಸ್ಟಿಕ್ ಕಡೆಯಿಂದ ಆಗಮಿಸಿದರೆ ಒಂದು ದರ, ಅದೇ ಇಲ್ಲಿಂದ ತೆರಳಿದರೆ ಇನ್ನೊಂದು ದರ. ಒಟ್ಟಿನಲ್ಲಿ ಸ್ಪಷ್ಟ ರೂಪುರೇಷೆಗಳಿಲ್ಲ ಎಂದು ಜೆಪಿ ನಗರಕ್ಕೆ ತೆರಳಲು ನಿಂತಿದ್ದ ನಾಗಶೇಖರ್ ಹೇಳುತ್ತಾರೆ.[ಬಿಎಂಟಿಸಿ ಮಾಹಿತಿ ಬಸ್ ಮಾಹಿತಿ ಪಡೆಯೋದು ಸುಲಭ]

ಸದಾ ಬಿಎಂಟಿಸಿ ಜನರಿಂದ ತುಂಬಿರುತ್ತದೆ, ಈ ಮಧ್ಯೆ ಒಂದು ರೂಪಾಯಿ ಕಡಿಮೆಯಾಗಿರುವ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸುವುದು ಅಸಾಧ್ಯ. ಅವರು ನೀಡಿದ ಟಿಕೆಟ್ ತೆಗೆದುಕೊಂಡು ಸುಮ್ಮನಿರುವುದೇ ಜಾಯಮಾನವಾಗಿದೆ ಎನ್ನುತ್ತಾರೆ ರಾಮಕೃಷ್ಣ ಆಶ್ರಮ ಮಾರ್ಗವಾಗಿ ವಿಜಯನಗರಕ್ಕೆ ತೆರಳುತ್ತಿದ್ದ ನಾಗರಾಜು.
ಪುಷ್ಪಕ್, ಸಾಮಾನ್ಯ ದರ, ಕಪ್ಪು ಹಲಗೆ-ಕೆಂಪು ಹಲಗೆ ಹೀಗೆ ಕೈಗೆ ಸಿಕ್ಕ ಬಸ್ ಹತ್ತಿಕೊಂಡು ಮನೆ ಸೇರುತ್ತೇವೆ. ಈ ಮಧ್ಯೆ ನಿರ್ವಾಹಕ ಒಂದು ರೂ. ಹೆಚ್ಚಿಗೆ ತೆಗೆದುಕೊಂಡನೋ ಇಲ್ಲಾ ಯಾವ ಹಂತಕ್ಕೆ ಮುಕ್ತಾಯದ ಟಿಕೆಟ್ ನೀಡಿದ ಎಂಬುದನ್ನು ಲೆಕ್ಕ ಹಾಕಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬುದು ಸಿಟಿ ಮಾರ್ಕೆಟ್ ಗೆ ಹೊರಟಿದ್ದ ಹೂ ಮಾರುವ ಕಮಲಮ್ಮ ಅಭಿಪ್ರಾಯ.

ನಿರ್ವಾಹಕ ಮತ್ತು ಚಿಲ್ಲರೆ ಸಮಸ್ಯೆ
ಬಸ್ ದರ ಇಳಕೆ ಒಂದರ್ಥದಲ್ಲಿ ನಿರ್ವಾಹಕರಿಗೆ ತಲೆನೋವು ತಂದಿದೆ. ಮೊದಲು 20 ರೂ. ಇದ್ದಲ್ಲಿ ಈಗ 19 ರೂ, ಆಗಿದೆ. ಒಂಭತ್ತು ರೂಪಾಯಿ ಚಿಲ್ಲರೆ ಕೇಳಿದರೆ ಜನ ಗರಂ ಆಗುತ್ತಾರೆ. ನಮಗೆ ಚಿಲ್ಲರೆ ಹೊಂದಿಸುವುದು ಬಹಳ ಕಷ್ಟವಾಗಿ ಪರಿಣಮಿಸಿದೆ. ಸರಿಯಾದ ನಿರ್ದೇಶನಗಳು ನಮಗೆ ಬಂದಿರುವುದಿಲ್ಲ. ದರ ಇಳಿಕೆ ಎಂದು ಮಾಧ್ಯಮಗಳ ಮೂಲಕ ತಿಳಿದ ಜನ ಗಲಾಟೆಗೆ ನಿಲ್ಲುತ್ತಾರೆ ಎಂಬುದು ಹೆಸರು ಹೇಳಲು ಬಯಸದ ಕಂಡಕ್ಟರ್ ನೋವು.
ಒಟ್ಟಿನಲ್ಲಿ ಸರ್ಕಾರ ಜನರಿಗೆ ದೊಡ್ಡ ಕೊಡುಗೆ ನೀಡಿದ್ದೇನೆ ಎಂಬ ರೀತಿ ಹಂತಕ್ಕೆ ಒಂದು ರೂಪಾಯಿ ಕಡಿಮೆ ಮಾಡಿದೆ. ಆದರೆ ವಿವಿಧ ಮಾರ್ಗಗಳ ಮೂಲಕ ಸಂಚರಿಸುವ ಮಹಾನಗರದ ಬಸ್ ಗಳಿಗೆ ಹಂತ ಎಲ್ಲಿ ಆರಂಭ? ಎಲ್ಲಿ ಅಂತ್ಯ? ಎಂಬುದೇ ಗೊತ್ತಾಗಲ್ಲ. ಈ ನಡುವೆ ಜನರಿಗೂ ಒಂದು ರೂಪಾಯಿ ಇಳಿಕೆ ಮಹತ್ವದ್ದಾಗಿ ಕಾಣುತ್ತಿಲ್ಲ.












Click it and Unblock the Notifications