ಬಾಲಕಿ ಮೇಲೆ ದೌರ್ಜನ್ಯ ಪ್ರಕರಣ ; ನಿಜವಾಗಿ ನಡೆದಿದ್ದೇನು?
ಬೆಂಗಳೂರು, ಜ. 7: ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರಿನ ಮತ್ತೋರ್ವ ಶಿಕ್ಷಕ ಪಾಲಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಇವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆದರೆ, ನಿಜವಾಗಿಯೂ ನಡೆದಿದ್ದೇನು?

ಆಗಿದ್ದೇನು? : ಮೈಸೂರು ರಸ್ತೆ ಪಕ್ಕದಲ್ಲಿರುವ ಬ್ಯಾಟರಾಯನಪುರದ ಹೊಸಗುಡದಳ್ಳಿಯ ವೆಂಕಟೇಶ್ವರ ಖಾಸಗಿ ಶಾಲೆ ದೈಹಿಕ ಶಿಕ್ಷಕ ಕೃಷ್ಣ ಪ್ರಕರಣದ ಮುಖ್ಯ ಆರೋಪಿ. ಎಂದಿನಂತೆ ಬುಧವಾರ ಬೆಳಗ್ಗೆ ಕೂಡ ಶಾಲೆ ಆರಂಭವಾಗಿದೆ. ಅಲ್ಲಿಯವರೆಗೂ ಎಲ್ಲವೂ ಶಾಂತವಾಗಿತ್ತು. ಆದರೆ, ಶಾಲೆಗೆ ತಡವಾಗಿ ಬಂದ ಆರೋಪದ ಮೇಲೆ 2ನೇ ತರಗತಿ ವಿದ್ಯಾರ್ಥಿನಿಯೋರ್ವಳಿಗೆ ದೈಹಿಕ ಶಿಕ್ಷಕ ಕೊಟ್ಟ ಶಿಕ್ಷೆ 'ಬಟ್ಟೆ ಬಿಚ್ಚಿಕೊಂಡು ನಿಲ್ಲುವುದು'! [ಬ್ಯಾಟರಾಯನಪುರ ಶಾಲೆಯಲ್ಲಿ ಗಲಭೆ]
ಶಿಸ್ತು ಉಲ್ಲಂಘಿಸುವ ಮಕ್ಕಳಿಗೆ ಹೆಚ್ಚೆಂದರೆ ಒಂದೇಟು ಹೊಡೆಯಬಹುದು. ಆದರೆ, ಬಟ್ಟೆ ಬಿಚ್ಚಿಸಿ ನಿಲ್ಲಿಸುವುದು ಅದರಲ್ಲಿಯೂ ಹೆಣ್ಣು ಮಗುವಿನೊಂದಿಗೆ ಹೀಗೆ ವರ್ತಿಸಿದ್ದು ಪ್ರಕರಣದ ಮೂಲ. ಶಿಕ್ಷಕನೋರ್ವನ ಈ ಮತಿಹೀನ ವರ್ತನೆ ಪಾಲಕರು ಹಾಗೂ ಸಾರ್ವಜನಿಕರನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿತು. ಕೈಗೆ ಸಿಕ್ಕ ಶಿಕ್ಷಕನನ್ನು ಮನಬಂದಂತೆ ಚಚ್ಚಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಇಓ ನಾಗರತ್ನಮ್ಮ ಜನರ ಮನ ಒಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಅವರನ್ನು ಜನರು ಶಾಲೆಯೊಳಗೇ ಕೂಡಿಹಾಕಿ ಪ್ರತಿಭಟನೆ ಮುಂದುವರಿಸಿದರು. ಅಲ್ಲಿಯವರೆಗೂ ಶಿಕ್ಷಕ ಮಾತ್ರ ಆಕ್ರೋಶಕ್ಕೆ ಗುರಿಯಾಗಿದ್ದ.

ಕಿಡಿಗೇಡಿಗಳ ಆರ್ಭಟ : ಆದರೆ, ಪಾಲಕರ ಜೊತೆಗೂಡಿದ ಕೆಲವು ಕಿಡಿಗೇಡಿಗಳು ಶಾಲೆಯೊಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಬೆಂಚ್ಗಳನ್ನು ಹೊರಕ್ಕೆ ತಂದೆಸೆದು, ಶಾಲೆಯ ಹೊರಗಿದ್ದ ಬೈಕ್ಗೆ ಬೆಂಕಿ ಹಚ್ಚಿದರು. ಇದೇ ಸಮಯವೆಂದು ತಿಳಿದು ಅಕ್ಕಪಕ್ಕದಲ್ಲಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಿದರು.
ಕಾರು ಹಾಗೂ ವ್ಯಾನ್ಗಳ ಮೇಲೆ ದಾಳಿ ನಡೆಸಿ, ಗಾಜು ಪುಡಿ ಮಾಡಿದರು. ಪರಿಸ್ಥಿತಿ ಹದಗೆಡುತ್ತಿರುವುದನ್ನು ಅರಿತ ಅಂಗಡಿಗಳ ಮಾಲೀಕರು ತಕ್ಷಣ ಬಾಗಿಲು ಹಾಕಿಕೊಂಡರು. ಸುತ್ತಲೂ ಕಂಡ ಬೈಕ್, ಕಾರು ಇನ್ನಿತರ ವಾಹನಗಳು ನಜ್ಜುಗುಜ್ಜುಗೊಂಡವು.

ಲಾಠಿ ಚಾರ್ಜ್ : ವಿಷಯ ಅರಿತ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಆರೋಪಿ ಶಿಕ್ಷಕನ್ನು ಬಂಧಿಸಿ ಕರೆದೊಯ್ದರು. ಜನರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಆದರೆ, ಇದಕ್ಕೂ ಬಗ್ಗದ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ತೂರಾಟ ಮುಂದುವರಿಸಿದರು. ಓರ್ವ ಎಸಿಪಿ, ಪೊಲೀಸ್ ನಿರೀಕ್ಷಕ ಹಾಗೂ ಹಲವು ಪೇದೆಗಳು ಕಲ್ಲೆಟು ತಿಂದು ಗಾಯಗೊಂಡರು. ಆಗ ಅನಿವಾರ್ಯವಾಗಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ನಿಷೇಧಾಜ್ಞೆ ಘೋಷಿಸಬೇಕಾಯಿತು.
ಸ್ಥಳಕ್ಕೆ ಡಿಸಿಪಿ ಸಂದೀಪ್ ಪಾಟೀಲ್ ಆಗಮಿಸಿ ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದಾರೆ. ಡಿಡಿಪಿಐ ಕೆ. ಪದ್ಮಾವತಿ ಶಾಲೆಗೆ ಆಗಮಿಸಿ ಧ್ವಂಸಗೊಂಡ ಪೀಠೋಪಕರಣಗಳನ್ನು ವೀಕ್ಷಿಸಿದ್ದಾರೆ.

ಕಲ್ಲು ಒಗೆದವರು ಹೊರಗಿನವರು : ಶಾಲೆ ಹಾಗೂ ಸುತ್ತಲಿನ ಅಂಗಡಿ ಮುಗ್ಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದವರು ಹೊರಗಿನವರು ಅಂತಾರೆ ಸ್ಥಳೀಯರು. ಪಾಲಕರು ಶಿಕ್ಷಕನ ಮೇಲೆ ಮಾತ್ರ ಕೋಪಗೊಂಡಿದ್ದರು. ಆದರೆ, ಅವರ ಜೊತೆ ಸೇರಿದ ಕಿಡಿಗೇಡಿಗಳೇ ಕಲ್ಲು ತೂರಾಟ ಆರಂಭಿಸಿದ್ದು.
ಪೊಲೀಸರ ಮೇಲೆಯೂ ಕಲ್ಲು ಒಗೆದಿರುವುದು ಇದೊಂದು ದುಷ್ಕರ್ಮಿಗಳ ಕೃತ್ಯ ಎಂಬುದಕ್ಕೆ ಸಾಕ್ಷಿ ಎಂಬುದು ಇಲ್ಲಿನವರ ಆರೋಪ. ಹಲ್ಲೆ ನಡೆಸಿದವರ ಕೈಯಲ್ಲಿ ಬಾಟಲಿ ಇತ್ತು, ಕಬ್ಬಿಣದ ರಾಡ್ ಇತ್ತು ಎಂದು ಇಲ್ಲಿನವರು ಹೇಳುತ್ತಾರೆ.

ಶಿಕ್ಷಕ ಅಂತವರಲ್ಲ ಅಂತಾರೆ ಸ್ಥಳೀಯರು : "ನಾವೆಲ್ಲ ದೈಹಿಕ ಶಿಕ್ಷಕ ಕೃಷ್ಣ ಅವರ ಹತ್ತಿರವೇ ಕಲಿತಿದ್ದೇವೆ. ಆದರೆ, ಅವರಲ್ಲಿ ಅಂತಹ ವರ್ತನೆ ಕಂಡುಬಂದಿರಲಿಲ್ಲ" ಎಂದು ಸ್ಥಳೀಯ ಹುಸೇನ್ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರೋಪಿ ಕೃಷ್ಣ ಅವರು 25 ವರ್ಷಗಳಿಗಿಂತ ಹೆಚ್ಚು ದಿನಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇದುವರೆಗೂ ಅವರ ಮೇಲೆ ಯಾವುದೇ ಆರೋಪ ಕೇಳಿಬಂದಿರಲಿಲ್ಲ. ಈಗ ಒಮ್ಮೆಲೇ ಇಂತಹ ಘಟನೆ ನಡೆದಿರುವುದು ಅಚ್ಚರಿಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.














Click it and Unblock the Notifications