ಚಪ್ಪಲಿಯಲ್ಲಿ ಹೊಡೆದು ವಾಪಸ್ ಆದೆ ಎಂದ ಪವಿತ್ರಾ: ಹಾಗಿದ್ರೆ ರೇಣುಕಾಸ್ವಾಮಿಯನ್ನು ಕೊಂದವರ್ಯಾರು?
ಬೆಂಗಳೂರು, ಜೂನ್ 14: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದ್ದು, ಆರೋಪಿಗಳ ವಿರುದ್ಧ ಸಾಲು ಸಾಲು ಸಾಕ್ಷಿಗಳು ಲಭ್ಯವಾಗುತ್ತಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಸೇರಿದಂತೆ ಈವರೆಗೆ ಒಟ್ಟು ಹದಿನೈದು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.
ಪ್ರಕರಣದ ಎ-೧ ಆರೋಪಿಯಾಗಿರುವ ಪವಿತ್ರ ಗೌಡ ಪೊಲೀಸರ ವಿಚಾರಣೆ ವೇಳೆ ಸಿಕ್ಕಾಪಟ್ಟೆ ಕಣ್ಣೀರಿಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹೀಗಾಗಿ ಪವಿತ್ರಾ ಗೌಡರನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಮೂಲಗಳ ಮಾಹಿತಿ ಪ್ರಕಾರ, ಪ್ರಕರಣದ ಮೊದಲ ಆರೋಪಿ ಪವಿತ್ರ ಗೌಡ ಪೊಲೀಸರ ವಿಚಾರಣೆ ವೇಳೆ ಕೆಲವು ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. 'ನನಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡುತ್ತಿದ್ದ. ಇದನ್ನು ನಾನು ಮನೆ ಕೆಲಸದವ ಪವನ್ಗೆ ಕಳುಹಿಸಿದ್ದೆ. ಅವನಿಗೆ ಕಳುಹಿಸುವ ಮೊದಲು ಈ ವಿಚಾರ ದರ್ಶನ್ಗೆ ಗೊತ್ತಾಗಬಾರದು ಎಂದು ಹೇಳಿದ್ದೆ. ದರ್ಶನ್ಗೆ ಗೊತ್ತಾದರೆ ಏನಾದರೂ ಅನಾಹುತ ಆಗಬಹುದು ಅಂತಲೂ ಹೇಳಿದ್ದೆ. ನನಗೆ ಕೊಲೆ ಮಾಡುತ್ತಾರೆ ಎನ್ನುವ ಕಲ್ಪನೆಯೂ ಇರಲಿಲ್ಲ. ಕೆಟ್ಟದಾಗಿ ಮೆಸೇಜ್ ಮಾಡಿದ ಎಂದು ಚಪ್ಪಲಿಯಲ್ಲಿ ಹೊಡೆದು ವಾಪಸ್ ಬಂದೆ' ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡಗೆ ಪಶ್ಚಾತ್ತಾಪ
ಇನ್ನು ಬಂಧನವಾದ ದಿನದಿಂದಲೂ ಪವಿತ್ರಾ ಗೌಡ ಪಶ್ಚಾತ್ತಾಪದಿಂದ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ. ಸ್ಥಳ ಮಹಜರು ವೇಳೆಯೂ ಪವಿತ್ರಾ ಗೌಡ, ದರ್ಶನ್ ಬಳಿ ನಿಂತು ಕಣ್ಣೀರು ಹಾಕುತ್ತಿದ್ದರು. ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಗೌಡ, 'ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಹೇಳಿ ತಪ್ಪು ಮಾಡಿದೆ' ಎಂದು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
'ಕೊಲೆಯಾದ ರೇಣುಕಾಸ್ವಾಮಿ ನನಗೆ ಕಳುಹಿಸುತ್ತಿದ್ದ ಮೆಸೇಜ್ಗಳ ಬಗ್ಗೆ ದರ್ಶನ್ಗೆ ಹೇಳಿ ತಪ್ಪು ಮಾಡಿದೆ. ಅಶ್ಲೀಲ ಮೆಸೇಜ್ ತೋರಿಸಿ, ಹೇಳಿದ್ದಕ್ಕೆ ಇಷ್ಟೆಲ್ಲಾ ಆಯ್ತು. ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ದರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದು ತಪ್ಪಾಯಿತು. ಅಶ್ಲೀಲ ಮೆಸೇಜ್ಗಳನ್ನು ಅವರಿಗೆ ತೋರಿಸಿ ಹೇಳಬಾರದಿತ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತದೆ ಅಂತಾ ಅಂದುಕೊಂಡಿರಲಿಲ್ಲ' ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications