ಬಿಎಂಟಿಸಿ ಬಸ್ನಲ್ಲಿ ಸಂಚಾರ ವೇಳೆ ಮೂಳೆ ಮುರಿತ:ದೂರು
ಬೆಂಗಳೂರು, ಫೆಬ್ರವರಿ 23 : ಬಿಎಂಟಿಸಿ ಬಸ್ಸು ಚಾಲಕನ ನಿರ್ಲಕ್ಷ್ಯದಿಂದಾಗಿ ತನ್ನ ಬೆನ್ನು ಮೂಳೆ ಮುರಿದಿದೆ ಎಂದು ಶೇಷಾದ್ರಿ ಎಂಬುವವರು ದೂರು ನೀಡಿದ್ದಾರೆ.
ಫೆ.14 ರಂದು ಸಹಕಾರ ನಗರದಿಂದ ಮೆಜೆಸ್ಟಿಕ್ ಗೆ ಕೆಎ 57 ಎಫ್ 510 ಬಸ್ಸಿನಲ್ಲಿ ಶೇಷಾದ್ರಿಯವರು ಪ್ರಯಾಣಿಸುತ್ತಿದ್ದಾಗ 2.45 ರ ಸುಮಾರಿಗೆ ಚಾಲಕ ದಿಢೀರ್ ಎಂದು ಬ್ರೇಕ್ ಹಾಕಿದ್ದಾರೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶೇಷಾದ್ರಿ ಅವರ ಬೆನ್ನುಮೂಳೆ ಇದೇ ಕಾರದಿಂದ ಮುರಿದಿದೆ ಎಂಬುದು ಆರೋಪವಾಗಿದೆ. ಈ ಸಂಬಂಧ ಶೇಷಾದ್ರಿ ಅವರ ಪುತ್ರ ನವೀನ್ ಬಿಎಂಟಿಸಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಬಿಎಂಟಿಸಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು
ತನ್ನ ತಂದೆ ತೀವ್ರ ನೋವಿನಿಂದ ಬಳಲುತ್ತಿದ್ದರು. ಚಾಲಕನಿಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿತ್ತು. ಅದನ್ನು ನಿರಾಕರಿಸಿದ ಚಾಲಕ ಮೆಜೆಸ್ಟಿಕ್ ವರೆಗೂ ಬಸ್ ನಲ್ಲಿ ಕರೆದೊಯ್ದಿದ್ದಾನೆ. ನನ್ನ ತಂದೆ ಸ್ಥಿತಿಗೆ ಬಸ್ ಚಾಲಕನೇ ಕಾರಣ ಎಂದು ಆರೋಪಿಸಿದ್ದಾರೆ.
ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ತಂದೆ ಮೆಜೆಸ್ಟಿಕ್ ನಲ್ಲಿ ಇಳಿದು ಇನ್ನೊಂದು ಬಸ್ ಹಿಡಿದು ಈಸ್ಟ್ ಎಂಡ್ ಸ್ಟಾಪ್ ತಲುಪಿದ್ದರು. ಬಳಿಕ ನನ್ನನ್ನು ಕರೆ ಮಾಡಿ ಕರೆಸಿಕೊಂಡಿದ್ದರು. ಆಂಬುಲೆನ್ಸ್ ನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿನ ಆಸ್ಪತ್ರೆಗೆ ಕೊರೆದೊಯ್ದಾಗ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶೇಷಾದ್ರಿ ಚಿಕಿತ್ಸೆಗೆ 3.5 ಲಕ್ಷ ರೂ ವೆಚ್ಚವಾಗಿದೆ. ಬಿಎಂಟಿಸಿಯ ಸ್ಪಂದನೆ ನೋಡಿದ ಬಳಿಕ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನವೀನ್ ಹೇಳಿದ್ದಾರೆ. ಈಘಟನೆ ಬಗ್ಗೆ ದೂರು ಬಂದಿದ್ದು, ಸಂತ್ರಸ್ತರು ಪರಿಹಾರ ಕೋರಿದ್ದಾರೆ. ತನಿಖೆ ನಡೆಸುತ್ತೇವೆ ಎಂದು ಬಿಎಂಟಿಸಿ ಕಾರ್ಯನಿರ್ವಾಹಕ ಪೊನ್ನುರಾಜ್ ಹೇಳಿದ್ದಾರೆ.