ಬೆಂಗಳೂರಿನ ಈ ರಸ್ತೆಯಲ್ಲಿ ನವೆಂಬರ್ 8ರಿಂದ ವಾಹನ ಸಂಚಾರಕ್ಕೆ ನಿರ್ಬಂಧ-ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ಬೆಂಗಳೂರು, ನವೆಂಬರ್ 8: ಕಾಮಗಾರಿ ನಡೆಯುವಂತಹ ರಸ್ತೆಗಳಲ್ಲಿ ಸಾಮಾನ್ಯವಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಇಂದಿನಿಂದ ಅಂದರೆ ನವೆಂಬರ್ 08 ರಿಂದ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಪರ್ಯಾಯ ಮಾರ್ಗಗಳ ವಿವರನ್ನು ಇಲ್ಲಿ ತಿಳಿಯಿರಿ.
ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಬಿಬಿಎಂಪಿ ಮುಂದಾಗಿದೆ. ನಾಲಾ ರಸ್ತೆ ಜಂಕ್ಷನ್ನಿಂದ ಪುರಭವನ ಜಂಕ್ಷನ್ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯಲಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಇಂದಿ (ನೆವಂಬರ್ 08)ನಿಂದ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕಾಮಗಾರಿ ಮುಕ್ತಾಯಾಗುವವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರಲಿದೆ. ಹಾಗಾದರೆ ಪರ್ಯಾಯ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.

ಪರ್ಯಾಯ ಮಾರ್ಗಗಗಳ ವಿವರ: ಕಾಮಗಾರಿ ನಡೆಯುವ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಸಂಚಾರ ಪೊಲೀಸರು, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ. ವೈಟ್ ಟ್ಯಾಪಿಂಗ್ ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಹೊಸೂರು ರಸ್ತೆಯಿಂದ ಜೆಸಿ ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುವ ವಾಹನಗಳು ಲಾಲ್ಬಾಗ್ ಮುಖ್ಯದ್ವಾರದ ಬಳಿ ಬಲಕ್ಕೆ ತಿರುವು ಪಡೆದು ಕೆ.ಎಚ್. ರಸ್ತೆ, ಶಾಂತಿನಗರ, ರಿಚ್ಮಂಡ್ ಆರ್.ಆರ್.ರಸ್ತೆಯ ಮೂಲಕ ಹಡ್ಸನ್ ವೃತ್ತ ತಲುಪಬಹುದಾಗಿದೆ.
ಸೌತ್ ಎಂಡ್ ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು, ಮಿನರ್ವ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಲಾಲ್ಬಾಗ್ ಪೋರ್ಟ್ ರಸ್ತೆ ಹಾಗೂ ಕೆ.ಆರ್.ರಸ್ತೆಯ ಮೂಲಕ ಕೆ.ಆರ್.ಮಾರುಕಟ್ಟೆ ತಲುಪಿ, ಎಸ್.ಜೆ.ಪಿ.ರಸ್ತೆ, ಪುರಭವನ ಸಂಪರ್ಕ ಪಡೆಯಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಜೆಸಿ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಟ್ರಾಫಿಕ್ ಹೆಚ್ಚಾಗಿರುತ್ತದೆ. ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಇದೀಗ ಪರ್ಯಾಯ ಮಾರ್ಗದಲ್ಲಿ ಹೋಗಬೇಕಾಗಿದ್ದು, ಮತ್ತಷ್ಟು ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆಯಿದೆ.
ಆದ್ದರಿಂದ ವಾಹನ ಸವಾರರು ತುಸು ಬೇಗ ಕಚೇರಿಯಿಂದ ಬಿಟ್ಟರೆ ಒಳಿತು. ಮತ್ತೊಂದೆಡೆ ವೈಟ್ ಟ್ಯಾಪಿಂಗ್ ಕಾಮಗಾರಿ ಮುಗಿಯವವರೆಗು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರಿಗೆ ಟ್ರಾಫಿಕ್ ಬಿಸಿ ತಟ್ಟುವುದಂತೂ ಗ್ಯಾರಂಟಿ.
ಒಟ್ಟಿನಲ್ಲಿ ವಾಹನ ಸವಾರರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಮುಂಜಾಗ್ರತೆಯಿಂದ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಆದ್ದರಿಂದ ಬೇರೆ ಯಾವುದೇ ದಾರಿಯಿಲ್ಲದೆ, ಪೊಲೀಸರು ಸೂಚಿಸಿದ, ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರು ಇದೇ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ.












Click it and Unblock the Notifications