ನನ್ನ ವಿರುದ್ಧ ಯಾವ ಶಾಸಕರೂ ದೂರಿಲ್ಲ ಎಂದ ಪರಮೇಶ್ವರ
ಬೆಂಗಳೂರು, ಸೆ.26: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನನ್ನ ವಿರುದ್ಧ ಯಾವ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿಲ್ಲ ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹರಿಹಾಯ್ದಿದ್ದಾರೆ.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಕಿಮ್ಮತ್ತೇ ಇಲ್ಲ, ಅದಕ್ಕೆಲ್ಲ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರೇ ಕಾರಣ, ಅವರು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಚಿವರು ಹೇಳಿದಂತೆ ಕೇಳುತ್ತಾರೆ ಎಂಬುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಹರಿಹಾಯ್ದಿದ್ದಾರೆ ಎಂಬುದನ್ನು ಪರಮೇಶ್ವರ ಬಲವಾಗಿ ನಿರಾಕರಿಸಿದ್ದಾರೆ.
ಚಾಮರಾಜನಗರದ ಸಚಿವದ್ವಯರ ಮುಸುಕಿನ ಗುದ್ದಾಟ ಬೀದಿಗೆ ಬಂತು!
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನನ್ನ ವಿರುದ್ಧ ಯಾವ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿಲ್ಲ, ಇದು ಕೇವ ಮಾಧ್ಯಮಗಳ ಕಪೋಲಕಲ್ಪಿತ ವರದಿ ಎಂದು ಹರಿಹಾಯ್ದರು.
ಕಾಂಗ್ರೆಸ್ ಸಭೆಯಲ್ಲಿ ಶಾಸಕರು ತಮ್ಮ ಅಸಮಾಧಾನವನ್ನು ಸಿದ್ದರಾಮಯ್ಯ ಹಾಗೂ ಇತರೆ ನಾಯಕರ ಎದುರು ಹಂಚಿಕೊಂಡಿದ್ದಾರೆ, ಅವರವರ ಕ್ಷೇತ್ರಗಳ ಅಭಿವೃದ್ಧಿ ಮತ್ತಿತರೆ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಕುರಿತಂತೆಯೂ ಚರ್ಚೆ ನಡೆದಿದೆ.ಆದರೆ ನನ್ನ ವಿರುದ್ಧವೇ ಶಾಸಕರು ಮಾತನಾಡಿದ್ದಾರೆ ಎಂಬುದು ಸುಳ್ಳುಸುದ್ದಿ, ಯಾವುದೇ ಶಾಸಕರೂ ನನ್ನ ವಿರುದ್ಧ ಹರಿಹಾಯ್ದಿಲ್ಲ, ಬದಲಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರು ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸ್ಪಂದಿಸಿ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ನಾನೇ ಸಭೆಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಜನ್ಮ ಜಾಲಾಡಿ, ಪರಂ ಮೇಲೆ ಗೂಬೆ ಕೂರಿಸಿದ ಈಶ್ವರಪ್ಪ
ಮುಖ್ಯಮಂತ್ರಿಗಳನ್ನು ನೇರ ಭೇಟಿಯಾಗಲು ಸಾಧ್ಯವಾಗದಿದ್ದರೆ ನನ್ನನ್ನು ಸಂಪರ್ಕಿಸಿ, ನಿಮ್ಮ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸುವೆ ಎಂದು ಶಾಸಕರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.