ರಾಜಕಾಲುವೆ ಒತ್ತುವರಿ: ಒರಾಯನ್ ಮಾಲ್ ಹೇಳುವುದೇನು?
ಬೆಂಗಳೂರು, ಆಗಸ್ಟ್, 24: ಐಡಿಯಲ್ ಹೋಂ ನಂತರ ಇದೀಗ ಒರಾಯನ್ ಮಾಲ್ ರಾಜಕಾಲುವೆ ಒತ್ತುವರಿ ಆರೋಪ ಸಂಬಂಧ ಸ್ಪಷ್ಟನೆ ನೀಡಿದೆ. ನಾಲಾ ಅಥವಾ ರಾಜಕಾಲುವೆಯನ್ನು ನಾವು ಒತ್ತುವರಿ ಮಾಡಿಕೊಂಡಿಲ್ಲ ಎಂದು ಒರಾಯನ್ ಮಾಲ್ ನಿರ್ವಹಣೆ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶಾಲ್ ಮಿರ್ಚಂದಾನಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಮಾಲ್, ನಮ್ಮ ಸಂಸ್ಥೆ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಸಂಸ್ಥೆಯಿಂದ ಭೂಮಿ ಖರೀದಿ ಮಾಡಿತ್ತು. 1950ರ ದಶಕದಲ್ಲಿ ಆಗಿನ ನಗರ ಯೋಜನೆ ಮಂಡಳಿ (ಈಗಿನ ಬಿಡಿಎ) ಈ ಭೂಮಿಯನ್ನು ಕಿರ್ಲೋಸ್ಕರ್ ಎಲೆಕ್ಟ್ರಿಕ್ ಸಂಸ್ಥೆಗೆ ಮಂಜೂರು ಮಾಡಿತ್ತು ಎಂದು ವಿವರಣೆ ನೀಡಿದ್ದಾರೆ.[ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?]

ದೇಶದ ಸ್ವಾತಂತ್ರ್ಯಕ್ಕೂ ಮುನ್ನ ಮೈಸೂರು ಸರ್ಕಾರ ರಾಜಾಜಿನಗರದ ಈ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ 350 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿತ್ತು. ಮಾಲ್ ಇರುವ ನಿವೇಶನ ಆ ಪ್ರದೇಶದ ಭಾಗವಾಗಿದೆ ಎಂದು ಹೇಳಿದ್ದಾರೆ.
1904ರ ಗ್ರಾಮನಕ್ಷೆ ಆಧಾರದ ಮೇಲೆ ಆರೋಪ ಮಾಡಲು ಹೊರಟರೆ ಬಿಡಿಎಯೇ ನಿರ್ಮಾಣ ಮಾಡಿದ ಇಂದಿರಾನಗರ, ಜಯನಗರ,ಆರ್ಎಂವಿ ಬಡಾವಣೆ ಸೇರಿದಂತೆ ಹಲವು ಪ್ರದೇಶಗಳ ಪ್ರಮುಖ ಆಸ್ತಿಗಳಿಗೂ ಅದು ಅನ್ವಯವಾಗಲಿದೆ. ಒರಾಯನ್ ಮಾಲ್ ಮುಂಭಾಗದ ಇಸ್ಕಾನ್ ದೇವಾಲಯ, ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟಡ ಸಹ ಒತ್ತುವರಿ ಅಡಿಯಲ್ಲೇ ಬರುತ್ತದೆ ಎಂದು ಹೇಳಿದ್ದಾರೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈಟ್ನಲ್ಲಿ ಲಭ್ಯ]
ಭೂದಾಖಲೆಗಳು ಹಾಗೂ ಸರ್ವೇ ಇಲಾಖೆಯ ನಿರ್ದೇಶಕರಿಂದ ನಾವು 1995ರಲ್ಲಿ ಪಡೆದ ನಿವೇಶನದ ನಕ್ಷೆಯಲ್ಲಿ ನಾಲಾ ಇಲ್ಲವೆ ರಾಜಕಾಲುವೆ ಇಲ್ಲ. ಆ ದಾಖಲೆ ನಮ್ಮ ಬಳಿಯಿದ್ದು ಯಾರು ಬೇಕಾದರೂ ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ.
ಒತ್ತುವರಿ ಆರೋಪ ಎದುರಿಸುತ್ತಿರುವ ಐಡಿಯಲ್ ಹೋಂ ಸಂಸ್ಥೆ ಸಹ ವಿವರಣೆ ನೀಡಿ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬಿಬಿಎಂಪಿ ಯಾವ ಆಧಾರದಲ್ಲಿ ತೆರವು ಮಾಡುತ್ತದೆ ಎಂದು ಪ್ರಶ್ನೆ ಮಾಡಿತ್ತು.












Click it and Unblock the Notifications