ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?
ಬೆಂಗಳೂರು, ಜೂನ್ 10: ಕೇಂದ್ರ ಸರ್ಕಾರದಿಂದ ದೊರೆಯುವ ಅನುದಾನಕ್ಕಾಗಿ ಕೈಚಾಚಲು ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ಭಾರಿ ಸಿದ್ಧತೆ ನಡೆಸಿದೆ. ಬಲವಂತವಾಗಿಯಾದರೂ ಬೆಂಗಳೂರಿಗೆ 'ಸ್ಮಾರ್ಟ್ ಸಿಟಿ' ಟ್ಯಾಗ್ ಹಾಕಲು ಶತಪ್ರಯತ್ನ ನಡೆಸಿರುವ ಬಿಬಿಎಂಪಿ ಇದಕ್ಕಾಗಿ ನಾಗರಿಕರ ಅತ್ಯಮೂಲ್ಯ ಸಮಯವನ್ನು ಬೇಡಿದ್ದಾರೆ.
ಮಾನ್ಯರೇ, ಮೊದಲಿಗೆ ಬೆಂಗಳೂರಿನ ನಾಗರಿಕರ ಸಮಸ್ಯೆ ಪರಿಹರಿಸಿ. ಮಳೆ ಎಂದರೆ ಬೆಂಗಳೂರಲ್ಲಿ ಭಯ ಹುಟ್ಟುತ್ತದೆ. [ಸ್ಮಾರ್ಟ್ ಸಿಟಿ ಅಪ್ಲಿಕೇಷನ್ ಹೊರ ಬಿಟ್ಟ ಬಿಬಿಎಂಪಿ]
ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗಿದ್ದು, ಕರ್ನಾಟಕದ ಕರಾವಳಿಯಲ್ಲಿ ಈಗಾಗಲೇ ಮುಂಗಾರು ಮಾರುತಗಳ ವಾಸನೆ ಬಡಿದಿದೆ. ಇನ್ನೇನು ರಾಜ್ಯದೆಲ್ಲೆಡೆ ಮುಂಗಾರು ಮಳೆ ಹನಿ ಬೀಳಲು ಆರಂಭವಾಗುತ್ತದೆ. [ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಬಿಬಿಎಂಪಿ]
ಆದರೆ, ರಾಜಧಾನಿ ಬೆಂಗಳೂರಿನ ಕಥೆಯೇ ಬೇರೆ, ಮುಂಗಾರು ಮಳೆಯ ಜೊತೆಗೆ ಚೆನ್ನೈನಲ್ಲಿ ವಾಯುಭಾರ ಕುಸಿತ ಕಂಡರೂ ಇಲ್ಲಿ ಮಳೆ ಸುರಿಯುತ್ತದೆ. ಮಳೆ ಸುರಿಯಲಿ ಅಡ್ಡಿ ಇಲ್ಲ. ಆದರೆ, ಸರ್ಕಾರಿ ಇಲಾಖೆಗಳು ಎಷ್ಟರ ಮಟ್ಟಿಗೆ ಸೇವೆ ಒದಗಿಸಲು ಸಿದ್ಧವಾಗಿವೆ?
ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ ಬಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಸ್ಕಾಂ, ಬಿಎಂಟಿಸಿ ಸಂಸ್ಥೆಗಳ ಜೊತೆಗೆ ನಾಗರಿಕರು ಕೂಡಾ ಕೈಜೋಡಿಸುವ ಅಗತ್ಯವಿದೆ. ಮುಖ್ಯವಾಗಿ ದಿನನಿತ್ಯ ಹೆಚ್ಚು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುವ ಉದ್ಯೋಗಿಗಳು ನೆರವಾಗಬೇಕಿದೆ.

ಸ್ಮಾರ್ಟ್ ಸಿಟಿಯಾಗಲು ನಾಗರಿಕರು ಸ್ಮಾರ್ಟ್ ಆಗಬೇಕು
ಕಚೇರಿಗಳ ವೇಳೆ ಬದಲು, ಬದಲಿ ಮಾರ್ಗ ಅಳವಡಿಕೆ, ಕಾರ್ ಪೂಲಿಂಗ್ ಬಳಕೆ ಉತ್ತಮ. ಒಟ್ಟಾರೆ, ಸರ್ಕಾರಿ ಕಚೇರಿಗಳ ಜೊತೆಗೆ ನಾಗರಿಕರೂ ಕೂಡಾ ಮಳೆಗಾಲದಲ್ಲಿ ಬದಲಾಗಿ ವರ್ತಿಸಿದರೆ ನಮ್ಮ ಬೆಂಗಳೂರು ಸ್ಮಾರ್ಟ್ ಆಗಲಿದೆ. ಮೊಬೈಲ್ ಅಪ್ಲಿಕೇಷನ್ ತೆಗೆದುಕೊಂಡು ವೋಟ್ ಮಾಡಿದರೆ ಸರ್ಕಾರದ ಜೋಳಿಗೆ ತುಂಬುತ್ತದೆ ಅಷ್ಟೆ. ಸ್ಮಾರ್ಟ್ ಸಿಟಿ ಟ್ಯಾಗ್ ಕೇಳಿ ಪಡೆಯುವ ಬದಲು ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿ, ನಾಗರಿಕರೆಲ್ಲರೂ ಸ್ಮಾರ್ಟ್ ಆದರೆ, ಸಿಟಿ ಸ್ಮಾರ್ಟ್ ಆಗುತ್ತದೆ.

ಒಳಚರಂಡಿ ವ್ಯವಸ್ಥೆ ಎಲ್ಲಾ ಕಡೆ ಸರಿ ಇದೆಯೇ?
ಒಳಚರಂಡಿ ವ್ಯವಸ್ಥೆ ಎಲ್ಲಾ ಕಡೆ ಸರಿ ಇದೆಯೇ? ಇಲ್ಲ, ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಾಣಸವಾಡಿಯ ಶಿಕ್ಷಕಿಯೊಬ್ಬರು ಬಲಿಯಾದರು. ಮಳೆ ಬಂದಾಗ ರಸ್ತೆಗಿಳಿಯಲು ಭಯವಾಗಲು ಕಾರಣ ಅವೈಜ್ಞಾನಿಕ ಹಂಪ್ಸ್, ರಸ್ತೆಗುಂಡಿಗಳು, ತೆರೆದ ಮ್ಯಾನ್ ಹೋಲ್ ಗಳು (2 ಲಕ್ಷಕ್ಕೂ ಅಧಿಕ ಇವೆ). ಹೋಗಲಿ ಮರದ ಕೆಳಗೆ ನಿಲ್ಲೋಣ ಎಂದರೆ ಮರ ಯಾವಾಗ ತಲೆ ಮೇಲೆ ಬೀಳುತ್ತದೆಯೋ ಎಂಬ ಭಯ.

ಬೆಸ್ಕಾಂಗೆ ಸಹಯೋಗದ ಸಮಸ್ಯೆ
ಮರದ ಕೊಂಬೆ ಬಿದ್ದು ಪವರ್ ಕಟ್ ಸಮಸ್ಯೆಯಾಗುವುದನ್ನು ಪರಿಹರಿಸಲು ಬೆಂಗಳೂರಿನ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ತಂಡಗಳನ್ನು ರಚಿಸಲಾಗಿದೆ. ಖಾಸಗಿ ಸಂಸ್ಥೆ ಸಹಭಾಗಿತ್ವ ಇದಕ್ಕಿದೆ.ಮರದ ಕೊಂಬೆಯೊಂದು ಬಿದ್ದರೆ, ಆ ರಸ್ತೆಯ ಎಲ್ಲಾ ಕೊಂಬೆಗಳಿಗೆ ಕತ್ತರಿ ಬೀಳುತ್ತದೆ. ಬೆಸ್ಕಾಂ, ಬಿಬಿಎಂಪಿ ಸಹಯೋಗದಿಂದ ಮರ ಹನನ ಕಾರ್ಯ ನಿರಂತರವಾಗಿ ಸಾಗಿದೆ.
'ನಾಲ್ಕು ಹನಿ ಬಿದ್ದರೆ ಸಾಕು, ಪವರ್ ಕಟ್ ಮಾಮೂಲಿ'ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ಇದೆ ಎಂದು ಬೆಸ್ಕಾಂ ಎಂಡಿ ಪಂಕಜ್ ಕುಮಾರ್ ಪಾಂಡೆ ಹೇಳುತ್ತಾರೆ.

ಸಾರಿಗೆ ಬಹುದೊಡ್ಡ ಸಮಸ್ಯೆ
ಖಾಸಗಿ ವಾಹನ ಬದಲಿಗೆ ಸರ್ಕಾರಿ ಬಸ್ ಬಿಎಂಟಿಸಿ ಹತ್ತೋಣ ಎಂದರೆ ಮಳೆಗಾಲದಲ್ಲಿ ಬಸ್ ಗಳು ಸರಿಯಾಗಿ ಸರಿಯಾದ ಸಮಯಕ್ಕೆ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ಜೊತೆಗೆ ಮಳೆ ಬಂದರೆ ಸೋರುವ ಬಸ್ ಗಳಿಗೇನು ಕಡಿಮೆ ಇಲ್ಲ. ಇರೋದರಲ್ಲಿ ಬಸ್ ನಲ್ಲಿ ಹೋಗುವುದು ಉತ್ತಮ.
ಟ್ರಾಫಿಕ್ ಜಾಮ್ ಗಳನ್ನು ಪರಿಹರಿಸಲು ತಂತ್ರಜ್ಞಾನ ಬಳಕೆ ಮಾಡುವ ನಮ್ಮ ಪೊಲೀಸರು ಹಾಗೂ ನಾಗರಿಕರು ಮೊದಲಿಗೆ ಸಾಮಾನ್ಯ ಜ್ಞಾನ ಬಳಸಿಕೊಂಡು ಮಳೆಗಾಲದಲ್ಲಿ ಜಾಗ್ರತೆ ವಹಿಸಿದರೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.

ಬಿಬಿಎಂಪಿ ಕಂಡು ಕೊಂಡಿರುವ ಪರಿಹಾರಗಳು
- ಬಿಬಿಎಂಪಿ 225 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದೆ. ಮುಂಗಾರು ಮಳೆ ವೀಕ್ಷಣ ಸಮಿತಿ, ಸಂಚಾರ ನಿಯಂತ್ರಣ ಕೇಂದ್ರ ನೇಮಿಸಿದೆ.
- 10 ಕಂಟ್ರೋಲ್ ರೂಮ್ ಗಳಿವೆ, 24X7 ಅವಧಿ ಕಾರ್ಯನಿರ್ವಹಿಸುತ್ತದೆ.
- ವಿಪತ್ತು ನಿರ್ವಹಣಾ ತಂಡ ಈ ಬಾರಿ ಮಳೆ ಕಾರಣ ಬೀಳುವ ಮರಗಳ ಲೆಕ್ಕ ಹಾಕಲು ತೊಡಗಿವೆ. ಇದಕ್ಕಾಗಿ 13 ತಂಡಗಳಿವೆ.
ಬಿಬಿಎಂಪಿ ಸಹಾಯವಾಣಿ ಸಂಖ್ಯೆ ಈ ಲಿಂಕ್ ನಲ್ಲಿ ಲಭ್ಯ: http://bbmp.gov.in/zones











Click it and Unblock the Notifications