ಓಮಿಕ್ರಾನ್ ಭೀತಿ: ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿರುವ ಬೆಂಗಳೂರು ಮಂದಿ
ಬೆಂಗಳೂರು, ಡಿ 1: ರಾಜ್ಯ ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಪರಿಪರಿಯಾಗಿ ಬೇಡಿಕೊಂಡರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಬೆಂಗಳೂರಿನ ಜನರು ಈಗ, ಲಸಿಕೆ ಕೇಂದ್ರದ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ.
ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಓಮಿಕ್ರಾನ್ ವೈರಸ್ ಪ್ರಭಾವದಿಂದ ಭಯಭೀತರಾಗಿರುವ ಜನರು, ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿರುವುದರಿಂದ ಲಸಿಕೆ ಕಾರ್ಯಕ್ರಮ ಮತ್ತೆ ವೇಗವನ್ನು ಪಡೆದುಕೊಂಡಿದೆ.
ದೂರದ ದಕ್ಷಿಣ ಆಫ್ರಿಕಾದಲ್ಲಿ ಈ ಹೊಸ ತಳಿಯ ವೈರಸ್ ಕಾಣಿಸಿಕೊಂಡಿದೆ. ವಿಶ್ವದ ಇತರ ಹದಿಮೂರು ರಾಷ್ಟ್ರಗಳಲ್ಲಿ ಇದು ಹರಡಿರುವುದರಿಂದ ಮತ್ತು ಟಿವಿ ಮಾಧ್ಯಮಗಳ ಅನಾವಶ್ಯಕ ಗೊಂದಲದಿಂದ ಜನರು ಅಲರ್ಟ್ ಆಗಿದ್ದಾರೆ.
ಪದೇಪದೇ ಲಾಕ್ ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದರು ಕೂಡಾ, ಡಿಸೆಂಬರ್ ಹದಿನೈದರ ನಂತರ ಲಾಕ್ ಡೌನ್ ಆಗುತ್ತೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲನೇ ಮತ್ತು ಎರಡನೇ ಡೋಸ್ ಪಡೆದುಕೊಂಡಿರುವವರ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿರುವುದು ಸರಕಾರಕ್ಕೆ ಚಿಂತೆಯ ವಿಷಯವಾಗಿದೆ.

ಓಮ್ರಿಕಾನ್ ವೈರಸ್ ಭಾರತದಲ್ಲಿ ಹರಡಿಲ್ಲ ಎಂದ ಕೇಂದ್ರ ಆರೋಗ್ಯ ಇಲಾಖೆ
ಓಮಿಕ್ರಾನ್ ವೈರಸ್ ಭಾರತದಲ್ಲಿ ಹರಡಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತ ಪಡಿಸಿದ್ದರೂ, ಕೊರೊನಾ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆ ಎಲ್ಲಾ ರಾಜ್ಯದ ಆರೋಗ್ಯ ಇಲಾಖೆಗೆ ಕೇಂದ್ರ ಸೂಚಿಸಿದೆ. ಇಲ್ಲಿ ಗಮನಿಸಬೇಕಾದ ವಿಚಾರವೇನಂದರೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಲಸಿಕೆ ಹಾಕಿಸಿಕೂಂಡವರ ಪ್ರಮಾಣ ಹೆಚ್ಚಿದೆ. ಹಿಮಾಚಲ ಪ್ರದೇಶದಲ್ಲಿ ಮೊದಲ ಡೋಸ್ ತೆಗೆದುಕೊಂಡವರು ನೂರಕ್ಕೆ ನೂರಾದರೆ, ಎರಡನೇ ಡೋಸ್ ತೆಗೆದುಕೊಂಡವರು ಶೇ. 91.9.

ಮೊದಲ ಡೋಸ್ ಶೇ. 90.9, ಎರಡನೇ ಡೋಸ್ ಶೇ. 59.1
ಈ ಪಟ್ಟಿಯಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ಮೊದಲ ಡೋಸ್ ಶೇ. 90.9 ಮತ್ತು ಎರಡನೇ ಡೋಸ್ ತೆಗೆದುಕೊಂಡವರ ಸಂಖ್ಯೆ ಶೇ. 59.1. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರ ಮುಗಿದಿದ್ದರೂ, ಇನ್ನೂ ಭಾರೀ ಪ್ರಮಾಣದಲ್ಲಿ ಜನರು ಎರಡನೇ ಡೋಸ್ ಜನರು ಹಾಕಿಸಿಕೊಂಡಿಲ್ಲ. ಕೆಲವೊಂದು ವರ್ಗದ ಜನರನ್ನು ಮನವೊಲಿಸುವುದೇ ಆರೋಗ್ಯ ಇಲಾಖೆಗೆ ಸವಾಲಿನ ಸಂಗತಿ ಆಗುತ್ತಿದೆ. ಈ ಸವಾಲನ್ನು ಓಮಿಕ್ರಾನ್ ಈಗ ದೂರ ಪಡಿಸುವತ್ತ ಸಾಗುತ್ತಿದೆ.

ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿರುವ ಬೆಂಗಳೂರು ಮಂದಿ
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 46ಲಕ್ಷ ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಓಮಿಕ್ರಾನ್ ಹರಡಲು ಆರಂಭಿಸಿದೆ ಎನ್ನುವ ಸುದ್ದಿ ಬರುತ್ತಿದ್ದಂತೆಯೇ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಯ ಮುಂದೆ ಕ್ಯೂ ನಿಂತಿದ್ದಾರೆ. ಸರಕಾರೀ ಮತ್ತು ಖಾಸಗಿ ಆಸ್ಪತ್ರೆಯ ಲಸಿಕೆ ವಿಭಾಗ ಬಣಗುಟ್ಟುತ್ತಿತ್ತು, ಈಗ ಅದು ಚಟುವಟಿಕೆಯ ಕೇಂದ್ರವಾಗಿದೆ. ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಮತ್ತೆ ಲಸಿಕೆಗಾಗಿ ಜನರು ಸರತಿಯಲ್ಲಿ ನಿಂತಿದ್ದಾರೆ.

ಓಮಿಕ್ರಾನ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ
ಸರಾಸರಿ ದಿನವೊಂದಕ್ಕೆ ಲಸಿಕೆ ಹಾಕಿಸಿಕೊಳ್ಳುತ್ತಿದ್ದವರ ಸಂಖ್ಯೆ ಎಂಟರಿಂದ ಹತ್ತು ಪಟ್ಟು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆಯನ್ನು ನೀಡಿದ್ದಾರೆ. ಲಾಕ್ ಡೌನ್ ವಿಚಾರದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿರುವವರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಗೋಗರೆದು ಕರೆದರೂ ಬರದು ಜನ ಈಗ ಓಮಿಕ್ರಾನ್ ಭೀತಿಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.












Click it and Unblock the Notifications