ಮಧ್ಯರಾತ್ರಿ ಮಹಿಳೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಓಲಾ ಚಾಲಕ
ಬೆಂಗಳೂರು, ಅಕ್ಟೋಬರ್ 3: ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆಯನ್ನು ಮಧ್ಯರಾತ್ರಿ ನಡುರಸ್ತೆಯಲ್ಲೇ ಇಳಿಸಿ ಹೋದ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ.
ಸಾಫ್ಟ್ವೇರ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿರುವ ಮಹಿಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮನೆಗೆ ತೆರಳುವಾಗ ಘಟನೆ ನಡೆದಿದ್ದು, ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಬೇಗೂರು ರಸ್ತೆಯಲ್ಲಿ ಇಳಿಸಿಹೋಗಿದ್ದಾನೆ.
ಕೊಲ್ಕತ್ತ ಮಾಡೆಲ್ ಕೊಲೆಯಾಗಿ ಒಂದು ತಿಂಗಳೊಳಗೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಮಾರ್ಗ ಬೇಗೂರು ಸಮೀಪವೇ ಮಾಡೆಲ್ ಕೊಲೆಯಾಗಿತ್ತು.

ಮಹಿಳೆಯು ಕೊಲಂಬೋದಿಂದ ಬೆಂಗಳೂರಿಗೆ ಮಧ್ಯರಾತ್ರಿ ಸುಮಾರು 3.18ರ ವೇಳೆಗೆ ಬಂದಿದ್ದಾರೆ. ತಕ್ಷಣವೇ ಓಲಾ ಕ್ಯಾಬ್ ಬುಕ್ ಮಾಡಿ ಹತ್ತಿದ್ದಾರೆ.
ಹತ್ತು ನಿಮಿಷದ ಬಳಿಕ ಆತ ಎನ್ಎಚ್-14 ಹೋಗುವ ಬದಲು ಬೇಗೂರು ರಸ್ತೆಯಲ್ಲಿ ಹೋಗುತ್ತಿದ್ದ.
ಆಗ ಮಹಿಳೆ ವಿಚಾರಿಸಿದಾಗ ನಾನು ಮ್ಯಾಪ್ ಪ್ರಕಾರ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಆದರೆ ಇದು ನಾನು ಇರುವ ಕಡೆಗೆ ಹೋಗುವದಾರಿ ಅಲ್ಲ ಎಂದು ಮಹಿಳೆ ಎಷ್ಟೇ ಹೇಳಿದರೂ ಆತ ಕ್ಯಾಬ್ ಚಲಾಯಿಸುತ್ತಲೇ ಇದ್ದ.
ಆಗ ಮಹಿಳೆ ಓಲಾ ಎಮರ್ಜೆನ್ಸಿ ಬಟನ್ ಪ್ರೆಸ್ ಮಾಡಿದಾಗ ಆತ ಗಾಡಿ ನಿಲ್ಲಿಸಿ ಇಲ್ಲೇ ಇಳಿಯುವಂತೆ ಬೆದರಿಕೆ ಹಾಕಿದ ಬಳಿಕ ಆಕೆಯನ್ನು ರಾತ್ರಿ ನಡುರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ.
ಆ ಪ್ರದೇಶದಲ್ಲಿ ಸ್ಟ್ರೀಟ್ ಲೈಟ್ ಕೂಡ ಇರಲಿಲ್ಲ, ನಿರ್ಜನ ಪ್ರದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಬಳಿಕ ವಿಮಾನದಲ್ಲಿ ಜೊತೆಗೇ ಬಂದಿದ್ದ ಸ್ನೇಹಿತರೊಬ್ಬರಿಗೆ ಪಿಕ್ ಅಪ್ ಮಾಡಲು ಹೇಳಿ ಮನೆ ಸೇರಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಎಮರ್ಜೆನ್ಸಿ ನಂಬರ್ನಿಂದ ಕಾಲ್ ಬಂದಿದ್ದರೂ ಕೂಡ ಹೋಲ್ಡ್ ಮಾಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಓಲಾ ಚಾಲಕರ ಮೇಲೆ ದೂರು ದಾಖಲಾಗುತ್ತಲೇ ಇದೆ, ಓಲಾ ಕಂಪನಿಯು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರದಿದ್ದರೆ, ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ.












Click it and Unblock the Notifications