ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಕೊನೆಯ ಬೆಂಚ್ನಲ್ಲಿ, ಯಾಕೆ ಗೊತ್ತಾ?
Recommended Video

ಬೆಂಗಳೂರು, ಜು.4: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದೀಗ ವಿಧಾನಸಭೆಯಲ್ಲಿ ಕೊನೆಯ ಸಾಲಿನಲ್ಲಿ ಆಸನ ಪಡೆದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರೂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಆಸನ ಪಡೆಯುವಲ್ಲಿ ಕೆಲಮಟ್ಟಿಗೆ ಮುಜುಗರ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ.
ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದ ಮೊದಲ ದಿನವೇ ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಬಗೆಗೆ ವಿಶೇಷ ಗೌರವ ವ್ಯಕ್ತಪಡಿಸಿ, ಮೊದಲ ಸಾಲಿನಲ್ಲಿ ಮೂರನೇ ಆಸನ ನೀಡುವ ಪ್ರಸ್ತಾವ ಮುಂದಿಟ್ಟಿದ್ದರು.

ಆದರೆ ಸಿದ್ದರಾಮಯ್ಯ ಅವರೇ ಸ್ವತಃ ಅದನ್ನು ನಯವಾಗಿ ತಿರಸ್ಕರಿಸಿ, ಎರಡನೇ ಸಾಲಿನ ಮೊದಲ ಆಸನ (ಸಂಖ್ಯೆ 11) ಪಡೆದುಕೊಂಡಿದ್ದರು. ಆದರೆ ಎರಡನೇ ದಿನವಾದ ಮಂಗಳವಾರ ಏಕಾಏಕಿ ಕೊನೆಯ ಸಾಲಿನಲ್ಲಿ ಅವರೇ ಆಸನ ಕೇಳಿ ಪಡೆದುಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
ಜಿಟಿಡಿಗೂ, ಸಿದ್ದರಾಮಯ್ಯಗೂ ಸಮಸ್ಯೆ: ಜೆಡಿಎಸ್ ಪಕ್ಷದ ಉನ್ನತ ಮೂಲಗಳು ಹೇಳುವ ಪ್ರಕಾರ, ಸೋಮವಾರ ಸಿದ್ದರಾಮಯ್ಯ ಎರಡನೇ ಸಾಲಿನ ಮೊದಲ ಆಸನ ಪಡೆದಿದ್ದರು. ರಾಜ್ಯಪಾಲರ ಭಾಷಣ ಮುಗಿದ ನಂತರ ಸಂತಾಪ ಸೂಚನೆ ವೇಳೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮೊದಲ ಸಾಲಿನಲ್ಲಿ ಆಸನ ಪಡೆದಿರುವುದನ್ನು ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಆ ಹಿನ್ನೆಲೆಯಲ್ಲಿ ಮೊದಲ ಸಾಲಿನ ಸಂಖ್ಯೆ 8ರಲ್ಲಿದ್ದ ಜಿಟಿಡಿ ಅವರ ಆಸನ ಬದಲಿಸಿ, ಎರಡನೇ ಸಾಲಿನಲ್ಲಿದ್ದ 13ನೇ ಸಂಖ್ಯೆಯ ಆಸನಕ್ಕೆ ಅವರನ್ನು ಬದಲಿಸಲಾಯಿತು. ಆ ಪ್ರಕಾರ, ಜಿಟಿಡಿ ಅವರು ಮಂಗಳವಾರ ಬೆಳಗ್ಗೆ ವಿಧಾನಸಭೆಗೆ ಬಂದಾಗ ಅವರಿಗೆ ಮೀಸಲಿದ್ದ ಆಸನ ಸಂಖ್ಯೆ 13ಕ್ಕೆ ಹೋಗಿ ಆಸೀನರಾದರು.
ಆಗ 11ನೇ ಸಂಖ್ಯೆಯ ಆಸನದಲ್ಲಿದ್ದ ಸಿದ್ದರಾಮಯ್ಯನವರು ಮತ್ತೆ ಅಚ್ಚರಿಗೊಳಗಾದರು. ಹೀಗಾಗಿ ತಕ್ಷಣ ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿ, ತಮಗೆ ಕೊನೆಯ ಸಾಲಿನ ಆಸನ ಬೇಕೆಂದು ಕೇಳಿ ಪಡೆದುಕೊಂಡರು ಎನ್ನಲಾಗಿದೆ.











Click it and Unblock the Notifications