ಪತ್ರಕರ್ತ ರವಿ ಬೆಳಗೆರೆ ಶಿಕ್ಷೆ ಹಿಂಪಡೆದಿಲ್ಲ: ಸ್ಪೀಕರ್ ಕೋಳಿವಾಡ
ಬೆಂಗಳೂರು, ಜೂನ್ 29 : ಪತ್ರಕರ್ತ-ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆ ಅವರಿಗೆ ಸದನ ಸಮಿತಿಯಿಂದ ವಿಧಿಸಿದ್ದ ಶಿಕ್ಷೆಯನ್ನು ವಾಪಸ್ ಪಡೆದಿಲ್ಲ ಎಂದು ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಈ ರೀತಿ ನಾನು ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ಅಧಿವೇಶನ ಕರೆದು, ಎಲ್ಲ ಪಕ್ಷದವರ ಒಪ್ಪಿಗೆ ಪಡೆದ ನಂತರವಷ್ಟೇ ಶಿಕ್ಷೆ ಹಿಂಪಡೆಯುವುದಕ್ಕೆ ಸಾಧ್ಯ. ಅದಕ್ಕಾಗಿಯೇ ನಿಯಮಾವಳಿಗಳು ಇವೆ. ಅದನ್ನು ಪಾಲಿಸಬೇಕು. ಹಾಗೆ ಏಕಾಏಕಿ ನಿರ್ಧಾರ ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗಿದ್ದರೆ ಅದು ತಪ್ಪು ಅಥವಾ ಸುಳ್ಳು. ನಾನು ಅಂಥ ಯಾವ ಆದೇಶವನ್ನು ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ಶಿಕ್ಷೆ ಆದೇಶವನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಮಾನಹಾನಿ ಕಾರಕ ವರದಿ ಪ್ರಕಟಿಸಿದ್ದಾರೆ ಎಂಬ ಕಾರಣಕ್ಕೆ ಹಾಯ್ ಬೆಂಗಳೂರ್ ಸಂಪಾದಕರಾದ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸ್ ಪತ್ರಿಕೆಯ ಅನಿಲ್ ರಾಜ್ ಅವರಿಗೆ ಸದನ ಸಮಿತಿಯ ಶಿಫಾರಸಿನ ಮೇಲೆ ವಿಧಿಸಿದ್ದ ಒಂದು ವರ್ಷ ಜೈಲು ಹಾಗೂ ಹತ್ತು ಸಾವಿರ ರುಪಾಯಿ ದಂಡ ಶಿಕ್ಷೆಯನ್ನು ಹಿಂಪಡೆಯಲಾಗಿದೆ ಎಂದು ವಿವಿಧ ಮಾಧ್ಯಮಗಳಲ್ಲಿ ಆದ ವರದಿ ಆಧರಿಸಿ ಒನ್ ಇಂಡಿಯಾ ಕನ್ನಡದಲ್ಲಿ ವರದಿ ಪ್ರಕಟವಾಗಿತ್ತು.












Click it and Unblock the Notifications