ಸಂಬಳ ಇಲ್ಲ, ರಜಾ ಇಲ್ಲ, ಪೌರಕಾರ್ಮಿಕರ ಗೋಳು ಕೇಳೋರಿಲ್ಲ
ಬೆಂಗಳೂರು, ಆಗಸ್ಟ್ 29: ಬೆಂಗಳೂರು ನಗರ ಸ್ವಚ್ಛವಾಗಿಡುವುದರಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರವಾದದ್ದು. ಆದರೆ ಅವರಿಗೆ ಸುರಕ್ಷತೆ ನೋಡಿಕೊಳ್ಳಲು ಅಗತ್ಯ ಸಲಕರಣೆಗಳು ನೀಡಿಲ್ಲ ಮತ್ತು ಅನಾರೋಗ್ಯದ ರಜಾ ನೀಡಿಲ್ಲ. ಇದೀಗ ಕಳೆದ ಮೂರು ತಿಂಗಳಿಂದ ಸಂಬಳವನ್ನು ಕೊಟ್ಟಿಲ್ಲ.
ಬಿಬಿಎಂಪಿಯ ಹಲವು ಪೌರಕಾರ್ಮಿಕರು ಮಂಗಳವಾರ ಬಿಬಿಎಂಪಿ ಕಚೇರಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಹಾಜರಿ ಪುಸ್ತಕದಲ್ಲಿ ನಮ್ಮ ಹೆಸರು ನಮೂದಿಸಿಲ್ಲ. ಈಗ ಸಂಬಳ ಕೊಡುವುದಕ್ಕೂ ನಿರಾಕರಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಹೇಳಿದರು.

ಕಳೆದ ಮೂರು ದಿನಗಳಿಂದ ನಮ್ಮನ್ನು ಕೆಲಸ ಮಾಡುವುದು ಬೇಡ, ಮನೆಗೆ ಹೋಗಿ ಅಂತಿದ್ದಾರೆ. ಕಸ ಸಾಗಿಸುವ ಟ್ರಕ್ ಗಳ ಚಾಲಕರಿಗೆ ಕೂಡ ಸಂಬಳ ಕೊಡ್ತಿಲ್ಲ ಎಂದು ಪೌರಕಾರ್ಮಿಕರೊಬ್ಬರು ಹೇಳಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿಂದ ನಮಗೆ ಸಂಬಳ ಕೊಟ್ಟಿಲ್ಲ. ಬಹಳ ಕಾಲ ಹೋರಾಟ ಮಾಡಿದ ಮೇಲೆ ಆರು ತಿಂಗಳ ಹಿಂದಷ್ಟೇ ನಮ್ಮ ಸಂಬಳವನ್ನು 12,440 ಮಾಡಿದ್ದರು. ನಮ್ಮಲ್ಲಿ ಹಲವರು ಮೂರು ತಿಂಗಳಿಂದ ಸಂಬಳ ತಗೊಂಡಿಲ್ಲ. ನಮ್ಮ ಕಾಂಟ್ರ್ಯಾಕ್ಟರ್ ನ ಕೇಳಿದರೆ ಬಿವಿಎಂಪಿಯಿಂದ ಬಿಲ್ ಆಗಿಲ್ಲ ಅಂತಾರೆ. ಆರೋಗ್ಯಾಧಿಕಾರಿ ಬಿಲ್ ಗೆ ಸಹಿ ಹಾಕಲ್ಲ ಅಂದಿದ್ದಾರಂತೆ ಎಂದು ಮತ್ತೊಬ್ಬ ಪೌರಕಾರ್ಮಿಕರು ಹೇಳುತ್ತಾರೆ.
ನಾವು ವಿದ್ಯುತ್ ಬಿಲ್ ಕಟ್ಟಿಲ್ಲ. ಟ್ಯಾಂಕರ್ ನೀರು ತಗೊಳೋಕೆ ದುಡ್ಡಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಹೇಳಿದರು.
ಶೂ, ಸ್ವಚ್ಛತಾ ಸಲಕರಣೆಗಳು, ಮುಖಗವಸು ಇವೆಲ್ಲವನ್ನು ಗುತ್ತಿಗೆದಾರರು ಕೊಡಬೇಕು. ಆದರೆ ಅವ್ಯಾವುದನ್ನೂ ನಮಗೆ ಒದಗಿಸಿಲ್ಲ ಎಂದು ದೂರಿದರು. ಎಲ್ಲರೂ ಗಣೇಶನ ಹಬ್ಬ ಮಾಡ್ತಿದ್ದರೆ ನಮಗೆ ಒಂದು ಕೇಜಿ ಅಕ್ಕಿ ತರುವುದಕ್ಕೂ ದುಡ್ಡಿರಲಿಲ್ಲ ಎಂದು ಅಲವತ್ತುಕೊಂಡರು.
ಎಲ್ಲಕ್ಕಿಂತ ಒಂದು ದಿನವೂ ರಜಾ ನೀಡುವುದಿಲ್ಲ. ಮೈ ಹುಷಾರಿಲ್ಲ ಅಂದರೂ ರಜಾ ನೀಡುವುದಿಲ್ಲ. ಒತ್ತಾಯ ಮಾಡಿ ಕೇಳಿದರೆ, ಕೆಲಸದಿಂದ ತೆಗೆದುಹಾಕ್ತೀವಿ ಎಂದು ಗುತ್ತಿಗೆದಾರರು ಬೆದರಿಸುತ್ತಾರೆ ಎಂದು ತಮ್ಮ ಸಂಕಟ ಹೇಳಿಕೊಂಡರು.












Click it and Unblock the Notifications