ಮೋದಿ ಬೆಂಗಳೂರಿಗೆ ಬರಬೇಕಾಗಿಲ್ಲ : ಚಂಪಾ ಕಿಡಿ
Recommended Video
ಬೆಂಗಳೂರು, ಫೆಬ್ರವರಿ 2 : ರಾಜ್ಯದ ಕಳಸಾ ಬಂಡೂರಿ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ತೋರಿಸದ ಪ್ರಧಾನಿಗಳು ರಾಜ್ಯಕ್ಕೆ ಬರುವ (ಫೆ.4) ಅವಶ್ಯಕತೆಯಿಲ್ಲ ಎಂದು ಜನ ಸಾಮಾನ್ಯರ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸಾಹಿತಿ ಚಂಪಾ ಹೇಳಿದ್ದಾರೆ.
ನಗರದ ಪ್ರೀಡಂ ಪಾರ್ಕ್ನಲ್ಲಿ ಗುರುವಾರದಿಂದ ಪ್ರಾರಂಭವಾದ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳಸಾ ಬಂಡೂರಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಬಹಳ ತಾರತಮ್ಯ ತೋರಿಸುತ್ತಿವೆ ಎಂದು ಆರೋಪಿಸಿದರು.
ಫೆ.4ರಂದು ಅರಮನೆ ಮೈದಾನದಲ್ಲಿ ಮೋದಿ ಮೋಡಿ
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ತುಟಿಯನ್ನು ಬಿಚ್ಚದೇ ಇರುವುದು ಬಹಳ ಆಶ್ಚರ್ಯವನ್ನುಂಟು ಮಾಡುತ್ತಿದೆ. ಫೆಬ್ರವರಿ 4ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿಗಳು ಈ ವಿಷಯದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕಾದ ಅವಶ್ಯಕತೆ ಇದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಆರಂಭಿಸಿದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಫೆಬ್ರವರಿ 4ರಂದು, ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ 2 ಗಂಟೆಗೆ ಜರುಗಲಿರುವ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಂದೇ ಮಹದಾಯಿ ಹೋರಾಟಗಾರರು ಬೆಂಗಳೂರು ಬಂದ್ ಕೂಡ ಕರೆ ನೀಡಿದ್ದಾರೆ.
ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿರುವ ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ ಡಿ ಅಯ್ಯಪ್ಪ ಮಾತನಾಡಿ, ಕಳಸಾ ಬಂಡೂರಿ ನಾಲಾ ಯೋಜನೆ ಹಾಗೂ ಮಹದಾಯಿ ತಿರುವು ಯೋಜನೆಗಳು ಎರಡು ವಿಭಿನ್ನ. ಒಂದೇ ಪ್ರದೇಶದಲ್ಲಿವೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ಯೋಜನೆಗೆ ಬಹಳಷ್ಟು ವ್ಯತ್ಯಾಸವಿದೆ. ಮಹದಾಯಿ ಯೋಜನೆ ನದಿಗೆ ಸಂಬಂಧಿಸಿದ್ದು ಹಾಗೂ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಮಧ್ಯೆ ನೀರು ಹಂಚಿಕೆಯ ಬಗ್ಗೆ ಇನ್ನುವರೆಗೂ ಯಾವುದೇ ತಿರ್ಮಾನಗಳು ಆಗಿಲ್ಲ. ಈ ಹಿನ್ನಲೆಯಲ್ಲಿ ಈ ವಿವಾದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ.
ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಧಾನಿ ಮೋದಿಯವರು ನೀರಿಗೆ ಸಂಬಂಧಿಸಿದಂತೆ ಒಂದು ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ತುಟಿ ಬಿಚ್ಚದೇ ಇರುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ. ಕರ್ನಾಟಕದ ಸಮಸ್ಯೆಗೆ ಸ್ಪಂದಿಸದ ಪ್ರಧಾನಿಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕಾದ ಪ್ರಧಾನಿಗಳು ಬೆಂಗಳೂರಿಗೆ ಬರುವ ದಿನ ಬಂದ್ ಗೆ ಕರೆ ನೀಡಿ ಜನ ಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ. ಗಾಂಧೀಜಿವರು ಹುಟ್ಟಿದ ನಾಡಿನಲ್ಲಿ ಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆ. ನೆಲ ಜಲದ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ಎಲ್ಲರೂ ಪಕ್ಷಾತೀತವಾಗಿ ಹೋರಡುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಬಂದ್ ಗೆ ಕರೆ ನೀಡಿರುವ ನಾಯಕರುಗಳು ನಮ್ಮ ಜೊತೆ ಪ್ರತಿಭಟನೆಯಲ್ಲಿ ಕೈಜೋಡಿಸಬೇಕು. ಈ ಮೂಲಕ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಅಯ್ಯಪ್ಪ ಮನವಿ ಮಾಡಿದರು.
ಕಳಸಾ ಬಂಡೂರಿ ಹೋರಾಟ ಯುವ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಕಳಸಾ ಬಂಡೂರಿಯ ವಿಷಯವಾಗಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ನ್ಯಾಯಾಧಿಕರಣದ ಪರಿಧಿಯಿಂದ ಹೊರಗೆ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ. ಅಲ್ಲದೆ, ಈ ಪ್ರತಿಭಟನೆ ನಿರಪೇಕ್ಷಣಾ ಪತ್ರ ದೊರೆಯುವವರೆಗೂ ಮುಂದುವರೆಯಲಿದೆ ಎಂದರು. ಪ್ರಧಾನಿಗಳೇ ರಾಜಕೀಯ ಬಿಡಿ ನೀರು ಕೊಡಿ ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರುವುದು ಅವಶ್ಯಕತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಟಿ ವಿ ಸತೀಶ್, ಪಕ್ಷದ ವಕ್ತಾರರಾದ ನಾಗರಾಜ್ ಹೊಂಗಲ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಈ ಅಹೋರಾತ್ರಿ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಲಿದೆ.