ನಗರ ಮಧ್ಯೆ ಇದ್ದರೂ ಈ ಪ್ರದೇಶಕ್ಕೆ ಬಿಎಂಟಿಸಿ ಬಸ್ ಸೇವೆಯೇ ಇಲ್ಲ
ಬೆಂಗಳೂರು, ಜೂನ್ 13: ನಗರದ ಮಧ್ಯಭಾಗದಲ್ಲಿದ್ದರೂ ಈ ಪ್ರದೇಶಕ್ಕೆ ಬಿಎಂಟಿಸಿ ಬಸ್ ಸೇವೆ ಇಲ್ಲದಿರುವುದು ಬೇಸರದ ಸಂಗತಿಯೇ.
ಹಳ್ಳಿಗಳ ರೀತಿಯಲ್ಲಿ ಎರಡು ಕಿಲೋಮೀಟರ್ಗಳಷ್ಟು ನಡೆದು ಬಂದು ಬಸ್ ಹತ್ತುವ ಪರಿಸ್ಥಿತಿ ಲೊಟ್ಟಗೊಲ್ಲಹಳ್ಳಿಯಲ್ಲಿದೆ.ಸುಸಜ್ಜಿತ ತಂಗುದಾಣವಿದೆ, ರಸ್ತೆಯಿದೆ ಆದರೂ ಆದಾಯ ಕಡಿಮೆ ಎನ್ನುವ ಕಾರಣಕ್ಕೆ ಬರುತ್ತಿದ್ದ ಒಂದು ಬಸ್ಸನ್ನು ಕಳೆದ ನಾಲ್ಕೈದು ವರ್ಷದ ಹಿಂದೆಯೇ ನಿಲ್ಲಿಸಿದ್ದಾರೆ.
ಕೇಂದ್ರ ಸಚಿವ ಡಿವಿ ಸದಾನಂದಗೌಡ, ಎಂಎಎಲ್ ಬೈರತಿ ಬಸವರಾಜು ಅವರ ಕಚೇರಿ ಕೂಡ ಅಲ್ಲೇ ಇದೆ. ಆದರೆ ಈ ಸಮಸ್ಯೆಗೆ ಶಾಸಕರಾಗಲಿ ಯಾರೂ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಶಿವಾಜಿನಗರದಿಂದ ಲೊಟ್ಟಗೊಲ್ಲಹಳ್ಳಿ ಮಾರ್ಗವಾಗಿ ರಾಮಯ್ಯ ಆಸ್ಪತ್ರೆವರೆಗೆ ಈ ಬಸ್ಸು ಸಾಗುತ್ತಿತ್ತು, ಆದರೆ ಆದಾಯ ಕಡಿಮೆ ಬರುತ್ತದೆ ಎನ್ನುವ ಕಾರಣಕ್ಕೆ ಕೈಬಿಡಲಾಗಿದೆ.ಡಾಲರ್ಸ್ ಕಾಲೊನಿ, ಎಲ್ಐಜಿ ಬಡಾವಣೆ, ಆರ್ಎಂವಿ ಬಡಾವಣೆಗೆ ಹೊಂದಿಕೊಂಡಿದೆ.

500 ಕ್ಕೂ ಹೆಚ್ಚು ಮನೆಗಳಿವೆ, ಈ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ, ಬಸ್ ಹತ್ತಬೇಕಿದ್ದರೆ ರಾಮಯ್ಯ ಆಸ್ಪತ್ರೆ ಅಥವಾ ಎರಡು ಕಿ.ಮೀ ದೂರದಲ್ಲಿರುವ ನಾಗಶೆಟ್ಟಿ ಹಳ್ಳಿಗೆ ಬಂದು ಬಸ್ ಹತ್ತುವ ಪರಿಸ್ಥಿತಿ ಇದೆ.












Click it and Unblock the Notifications