ಯಡಿಯೂರಪ್ಪ ಸರ್ಕಾರ ಬೀಳಿಸಲು ಹೋಗೊಲ್ಲ: ದೇವೇಗೌಡ
Recommended Video
ಬೆಂಗಳೂರು, ನವೆಂಬರ್ 5: ಸರ್ಕಾರ ಕೆಡುವುವುದು ದೇವೇಗೌಡರ ಕುಟುಂಬದ ಕೆಲಸ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಟಾಂಗ್ ನೀಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಚುನಾವಣೆ ಬೇಕಾಗಿರಬಹುದು. ಆದರೆ ನಮಗೆ ಈಗ ಚುನಾವಣೆ ಬೇಡ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ನಾಳೆ ಬೆಳಿಗ್ಗೆ ತೆಗೆದುಬಿಡಬೇಕು ಎಂಬ ಬಯಕೆ ನಮಗಿಲ್ಲ. ನನಗೆ ನನ್ನ ಪಕ್ಷವನ್ನು ಕಟ್ಟಬೇಕು ಅಷ್ಟೇ. ನಾಳೆ ಬೆಳಿಗ್ಗೆ ಏನಾದರೂ ಚುನಾವಣೆ ಘೋಷಣೆ ಆದರೆ ಎಲ್ಲ 224 ಕ್ಷೇತ್ರಗಳಿಗೂ ಅಭ್ಯರ್ಥಿ ಹಾಕುವ ಯೋಗ್ಯತೆ ಇದೆಯೇ ಎಂದು ಪರಾಮರ್ಶೆ ನಡೆಸುತ್ತೇವೆ. ಆ ಶಕ್ತಿ ಸಿದ್ದರಾಮಯ್ಯ ಅವರಿಗೆ ಇರಬಹುದು. ಏಕೆಂದರೆ ಅವರು ಅಹಿಂದ ನಾಯಕ. ನಾನು ಯಾವ ಹಿಂದ ಲೀಡರ್ ಎಂದು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಯಾರ ಜತೆಯೂ ಹೊಂದಾಣಿಕೆ ಇಲ್ಲ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾವು ಎಲ್ಲ ಕಡೆ ಸ್ಪರ್ಧಿಸುತ್ತೇವೆ. ಯಾರ ಜತೆ ಕೂಡ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ. ಈ ಬಾರಿ ನಗರಸಭೆ ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡುತ್ತಾರೆ. ಕನಕಪುರದಲ್ಲಿಯೇ ನಾವು ನಾಲ್ಕು ಕಡೆ ಸ್ಪರ್ಧೆ ಮಾಡುತ್ತೇವೆ. ಲೋಕಸಭೆ ಸದಸ್ಯರು ಮತ್ತು ಮಾಜಿ ಸಚಿವರು ಆ ಕ್ಷೇತ್ರವನ್ನು ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ. ಹೀಗಾಗಿ ನಮ್ಮ ಶಕ್ತಿ ನೋಡಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ.
ಕುಮಾರಸ್ವಾಮಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಂಡನ್ಗೆ ತೆರಳಿದ್ದಾರೆ. ಅವರು ನ.8ರಂದು ರಾಜ್ಯಕ್ಕೆ ಮರಳಲಿದ್ದಾರೆ. ಅವರು ಬಂದ ಬಳಿಕ ಮಾತನಾಡುತ್ತೇವೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಎಲ್ಲ ಕಡೆ ಸ್ಪರ್ಧೆ
ಉಪ ಚುನಾವಣೆಯಲ್ಲಿ ಎಲ್ಲ 17 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರಿಗೆ ನಿರಾಸೆಯಾಗದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸುವ ಬಗ್ಗೆ ಅಂತಿಮ ಚರ್ಚೆ ಆಗಿದೆ. ಶೇ 70ರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ಕಡೆ ಯುವಕರು ಮುಂದೆ ಬಂದಿದ್ದಾರೆ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಯೋಚಿಸುತ್ತಿದ್ದೇವೆ. ನಾವು ಸ್ವತಂತ್ರವಾಗಿಯೇ ಸ್ಪರ್ಧಿಸಿ ಗೆಲ್ಲುತ್ತೇವೆ.

ಶಕ್ತಿ ಇದ್ದಷ್ಟು ಹೋರಾಟ
ಬಿಜೆಪಿ, ಕಾಂಗ್ರೆಸ್ ಜತೆ ಮೈತ್ರಿಯಾಗಿ ನಮಗೆ ಕಹಿ ಅನುಭವ ಉಂಟಾಗಿದೆ. ಹಾಗಾಗಿ ಯಾರ ಜತೆಗೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಶಕ್ತಿ ಎಷ್ಟಿದೆಯೋ ಅಷ್ಟು ಹೋರಾಟ ಮಾಡುತ್ತೇವೆ. ಸೋಲು ಗೆಲುವು ಇದ್ದಿದ್ದೇ. ಅದನ್ನು ಫಲಿತಾಂಶದ ಬಳಿಕ ನೋಡೋಣ ಎಂದರು.

ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟ
ನಗರ ಪಾಲಿಕೆ, ನಗರಸಭೆ, ಪುರಸಭೆ ಚುನಾವಣೆಗಳಲ್ಲಿ ನಾವು ಎಲ್ಲ ಕಡೆಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮಂಗಳೂರು, ದಾವಣಗೆರೆ ನಗರ ಪಾಲಿಕೆಗಳಲ್ಲಿ ಸಂಪೂರ್ಣವಾಗಿ ಅಭ್ಯರ್ಥಿಗಳನ್ನು ಹಾಕಿಲ್ಲ. ಮಂಗಳೂರಿನಲ್ಲಿ 15 ಅಭ್ಯರ್ಥಿಗಳಿದ್ದಾರೆ. ನಾವು ಯಾರೊಂದಿಗೂ ಸಂಬಂಧ ಇಟ್ಟುಕೊಳ್ಳದೆ ಕಾಂಗ್ರೆಸ್, ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಬೆಳಿಗ್ಗೆಯೇ ಜೆಡಿಎಸ್ ಕಥೆ ಮುಗಿದು ಹೋಯ್ತು ಎಂಬ ಚರ್ಚೆ ಆಗುತ್ತಿದೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೂ ಆಸ್ಪದ ನೀಡುವುದಿಲ್ಲ. ಪರಿಷತ್ ಸದಸ್ಯರ ಜತೆ ಕುಳಿತು ಅವರಲ್ಲಿ ಇರುವ ಭಿನ್ನಾಭಿಪ್ರಾಯದ ಕುರಿತು ಸಮಾಲೋಚನೆ ನಡೆಸುತ್ತೇನೆ ಎಂದರು.

ಸಿಎಂ ಮನೆ ಮುಂದೆ ಧರಣಿ
ಗುರುಮಿಠಕಲ್ನಲ್ಲಿ ಜೆಡಿಎಸ್ ಕಾರ್ಯಕರ್ತನ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ದೇವೇಗೌಡ, ನಮ್ಮ ಪಕ್ಷದ ಯುವ ಮುಖಂಡನ ಬಾಯಿಗೆ ಪಿಸ್ತೂಲು ಇಟ್ಟು ಹಿಂಸಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು. ಇಲ್ಲದಿದ್ದರೆ ಸಿಎಂ ಮನೆ ಎದುರು ನಾನೇ ನ.15ರಂದು ಧರಣಿ ಮಾಡುತ್ತೇನೆ. ರಾಜ್ಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇದೆ ಎಂದು ಆರೋಪಿಸಿದರು.

ಆಡಿಯೋ ಪ್ರಕರಣದ ಬಗ್ಗೆ ಮಾತನಾಡೊಲ್ಲ
ಇಂದು ಅನರ್ಹ ಶಾಸಕರ ಅರ್ಜಿಯ ಕುರಿತಾದ ತೀರ್ಪು ಪ್ರಕಟವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಾದದ ಕಾರಣ ಅದು ಮುಂದೆ ಹೋಗಿದೆ. ಈ ಆಡಿಯೋ ಬಗ್ಗೆ ನ್ಯಾಯಾಲಯ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ. ಈ ಆಡಿಯೋ ಪ್ರಕರಣದ ಕುರಿತು ನಾನು ಮಾತನಾಡುವುದಿಲ್ಲ ಎಂದರು.












Click it and Unblock the Notifications