ಹೆಬ್ಬಾಳ-ಸಿಲ್ಕ್ಬೋರ್ಡ್ ಟನಲ್ ರಸ್ತೆಗೆ ಎಷ್ಟು ಕಮೀಷನ್ ತಗೊಂಡಿದ್ದೀರಿ ಶಿವಕುಮಾರಣ್ಣ?
ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಿಸುವ ಉದ್ದೇಶದೊಂದಿಗೆ 17,000 ಕೋಟಿ ರೂ. ವೆಚ್ಚದಲ್ಲಿ ನಗರದ ಹೆಬ್ಬಾಳದಿಂದ ಸಿಲ್ಕ್ಬೋರ್ಡ್ವರೆಗೆ ಸುರಂಗ ರಸ್ತೆ ಮಾರ್ಗ ನಿರ್ಮಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರಸ್ತೆ ಮಾಡಲು ಎಷ್ಟು ಕಮೀಷನ್ ತೆಗೆದುಕೊಂಡಿದ್ದೀರಿ ಶಿವಕುಮಾರಣ್ಣ? ಎಂದು ವೇದಿಕೆಯಲ್ಲೇ ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರಣ್ಣ ಅವರೇ, ಹೆಬ್ಬಾಳದಿಂದ ಸಿಲ್ಕ್ಬೋರ್ಡ್ವರೆಗೆ ಸುರಂಗ ರಸ್ತೆ ಮಾರ್ಗ ಮಾಡಲು 17,000 ಕೋಟಿ ಖರ್ಚ ಮಾಡತಿದ್ದಿರಿಲ್ಲ? ಎಷ್ಟು ಕಮಿಷನ್ ತೊಗೊಂಡಿದ್ದಿರಣ್ಣ? ರಾಜ್ಯದ ಜನರ ಮುಂದೆ ಶ್ವೇತಪತ್ರ ಹೊರಡಿಸಿ ಎಂದು ನಿಖಿಲ್ ಸವಾಲ್ ಹಾಕಿದ್ದಾರೆ. ಕಮಿಷನ್ ಮುಕ್ತ ಆಡಳಿತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಏನ್ ಮಾಡುತ್ತಿದ್ದೀರಿ? ಆ ನಿಮ್ಮ ಸುರಂಗ ಮಾರ್ಗದಲ್ಲಿ ಯಾರಾದರೂ ಬಡವರು ಸಂಚಾರ ಮಾಡಲು ಸಾಧ್ಯವೇ ಶಿವಕುಮಾರಣ್ಣ? ಎಂದು ವ್ಯಂಗ್ಯವಾಡಿದ್ದಾರೆ.

ಸಾಬೀತಾದ್ರೆ ಜಮೀನು ರೈತರಿಗೆ ದಾನ
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ರೈತರ ಮುಂದೆ ಅಪಪ್ರಚಾರ ಮಾಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನನ್ನ ತಾಯಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಹೆಸರಿನಲ್ಲಿರುವ ಕೃಷಿ ಜಮೀನಿಗೆ ಉತ್ತಮ ಪರಿಹಾರ ನೀಡಿ ಎಂದು ಅರ್ಜಿ ಬರೆದಿದ್ದರೆ ಅವರ ಹೆಸರಿನಲ್ಲಿರುವ ಕೃಷಿ ಜಮೀನನ್ನು ತಾಲ್ಲೂಕಿನ ಬಡವರಿಗೆ, ರೈತರಿಗೆ ದಾನ ಮಾಡುತ್ತೇವೆ ಎಂದೂ ಚಾಲೆಂಜ್ ಹಾಕಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ರೈತರಿಗೆ ಮಾಡುತ್ತಿರುವ ಅನ್ಯಾಯ, ಕಲ್ಯಾಣ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಹಾಗೂ ಸಂತ್ರಸ್ತರ ಅಳಲನ್ನು ಕೇಳದೆ ನಿದ್ರೆಗೆ ಜಾರಿರುವ ಸರ್ಕಾರವನ್ನು ನಾವೆಲ್ಲರೂ ಬಡಿದೆಬ್ಬಿಸೋಣ. ಮುಂಬರುವ ದಿನಗಳಲ್ಲಿ ಬಡವರು, ರೈತಪರ. ಯುವಕರ ಪರ ಸರ್ಕಾರದ ರಚನೆ ಮಾಡಲು ತಾವೆಲ್ಲರೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಉಸಿರಾಡುವ ಗಾಳಿಯನ್ನು ಹೊರತುಪಡಿಸಿ ಉಳಿದ ಪ್ರತಿಯೊಂದಕ್ಕೂ ತೆರಿಗೆ ಮೇಲೆ ತೆರಿಗೆ ಹಾಕುವ ಮೂಲಕ ರಾಜ್ಯದ ಜನತೆಯನ್ನು ಕಿತ್ತು ತಿನ್ನುತ್ತಿದೆ. ಒಂದು ಹತ್ತು ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡದೆ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಬಡವರ ವಿರೋಧಿ ಮತ್ತು ರೈತ ವಿರೋಧಿ ನೀತಿಗಳು ಖಂಡನೀಯ ಎಂದಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಸೇರಿದಂತೆ ನಾಡಿಗೆ ನೀಡಿದ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿ, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ ಎಂದು ಹೇಳಿದ್ದಾರೆ.












Click it and Unblock the Notifications