ಮೈಸೂರು ಕೋರ್ಟ್ ಸ್ಫೋಟ ಪ್ರಕರಣದ : ಶಂಕಿತ ಉಗ್ರನ ಅರ್ಜಿ ವಜಾ
ಬೆಂಗಳೂರು, ನವೆಂಬರ್ 23 : ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ಕೋರ್ಟ್ ವಜಾಗೊಳಿಸಿದೆ. 2016ರ ಆಗಸ್ಟ್ 1ರಂದು ಸ್ಫೋಟ ನಡೆದಿತ್ತು.
ತಮಿಳುನಾಡು ಮೂಲದ ಶಂಕಿತ ಉಗ್ರ ನೈನಾರ್ ಅಬ್ಬಾಸ್ ಅಲಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅವರು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನೈನಾರ್ ಅಬ್ಬಾಸ್ ಅಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಕೈಕೋಳ ತೊಡಿಸಬಾರದು, ಕುಟುಂಬದವರ ಜೊತೆ ಮಾತನಾಡಲು ಕೇಂದ್ರ ಕಾರಾಗೃಹದಲ್ಲಿ ತನಗೆ ಫೋನ್ ಸೌಲಭ್ಯ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಅಕ್ರಮ ಚಟುವಟಿಕೆ ತಡೆ ಕಾಯ್ದೆ, ಸಾರ್ವಜನಿಕರ ಹಿತಾಸಕ್ತಿ ಮತ್ತು ರಕ್ಷಣೆ ಮುಖ್ಯವಾದದ್ದು. ಆದ್ದರಿಂದ, ಪೋನ್ ಸೌಲಭ್ಯ ಮತ್ತು ಕೈಕೋಳ ತೊಡಿಸುವ ವಿಚಾರದಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
2016ರ ಆಗಸ್ಟ್ 1ರಂದು ಮೈಸೂರಿನ ನ್ಯಾಯಾಲಯದ ಆವರಣದಲ್ಲಿನ ಶೌಚಾಲಯದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ನೈನಾರ್ ಅಬ್ಬಾಸ್ ಅಲಿ ಬಂಧಿಸಲಾಗಿತ್ತು.












Click it and Unblock the Notifications