ಗೌರಿ ದಿನ: ಗೌರಿ ನೆನಪಿನ ಜೊತೆ ಮೋದಿ ವಿರುದ್ಧ ಗುಡುಗು
ಬೆಂಗಳೂರು, ಸೆಪ್ಟೆಂಬರ್ 05: ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ನೆನಪಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಗೌರಿ ದಿನ ಆಚರಿಸಿ ಹಲವರು ನಗರದಲ್ಲಿ ಮೆರವಣಿಗೆ ಮಾಡಿದರು.
ಗೌರಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಸ್ವಾಮಿ ಅಗ್ನಿವೇಶ್, ಪ್ರಕಾಶ್ ರೈ, ರಹಮತ್ ತರಿಕೆರೆ, ಕವಿತಾ ಲಂಕೇಶ್, ಚಂಪಾ, ಬೋಳುವಾರ ಕುಂಙ, ಮರುಳಸಿದ್ದಪ್ಪ, ದೊರೆಸ್ವಾಮಿ ಹಲವು ಚಿಂತಕರು ಭಾಗವಹಿಸಿದ್ದರು.
ಮೊದಲಿಗೆ ಗೌರಿ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅಲ್ಲಿಂದ ರಾಜಭವನ ಚಲೋ ಕಾರ್ಯಕ್ರಮಕ್ಕೆ ಸ್ವಾಮಿ ಅಗ್ನಿವೇಶ್ ಚಾಲನೆ ನೀಡಿದರು. ದಾರಿಯುದ್ದಕ್ಕೂ ಗೌರಿ ಪರ ಘೋಷಣೆಗಳನ್ನು ಕೂಗಲಾಯಿತು. ಮೆರವಣಿಗೆಯಲ್ಲಿ ಇದ್ದವು ಕೈಗೆ ಕೆಂಪು ಪಟ್ಟಿ ಧರಿಸಿ ಭಾಗವಹಿಸಿದ್ದರು.

ಸಮಾವೇಶದಲ್ಲಿ ಮಾತನಾಡಿದ ಸ್ವಾಮಿ ಅಗ್ನಿವೇಶ್, ಸನಾತನ ಸಂಸ್ಥೆ ಸಾಮಾನ್ಯ ಸಂಸ್ಥೆ ಅಲ್ಲ ಅದೊಂದು ಭಯೋತ್ಪಾದಕ ಸಂಸ್ಥೆ ಅದರ ಮೇಲೆ ನಿಗಾ ಇಡಬೇಕು ಎಂದರು.
ರಹಮತ್ ತರಿಕೆರೆ ಮಾತನಾಡಿ, ದ್ವೇಷ ಮತ್ತು ಹಿಂಸಿಗೆ ಪ್ರಭುತ್ವದ ಬೆಂಬಲ ಸಿಕ್ಕಿದೆ. ಪ್ರಭುತ್ವಕ್ಕೆ ಧರ್ಮ ರಕ್ಷಣೆ ಎಂಬ ಬೆಂಬಲ ಸಿಗುತ್ತಿದೆ. ನಾವು ತಿನ್ನುವ ಆಹಾರವನ್ನೂ ಹೆದರಿಕೊಂಡು ತಿನ್ನಬೇಕಾಗಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಬಿ.ಟಿ.ಲಲಿತಾನಾಯಕ್, ವಿಜಯಮ್ಮ, ಬಿ.ವಿ.ಶ್ರೀರಾಮರೆಡ್ಡಿ, ಎಸ್.ಆರ್.ಹಿರೇಮಠ ಇನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿರುವ ಪರಿಸ್ಥಿತಿಯ ವಿರುದ್ಧ ಹರಿಹಾಯ್ದರು. ಹಲವರು ಮೋದಿ ಅವರ ವಿರುದ್ಧ ಗುಡುಗಿದರು.












Click it and Unblock the Notifications