Namma Metro: ಪಿಲ್ಲರ್ ಕುಸಿತದ ಬಳಿಕ ಕಾಮಗಾರಿ ಸ್ಥಗಿತ, BMRCL ಕೈಗೊಂಡ ಸುರಕ್ಷತಾ ವಿಧಾನ ಇದು
ನಗರದಲ್ಲಿ ಮೆಟ್ರೋ ಪಿಲ್ಲರ್ ಕುಸಿತದಿಂದಾಗಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಡೆಸುತ್ತಿರುವ ವಿವಿಧೆಡೆಯ ಮೆಟ್ರೋ ಕಾಮಗಾರಿಗಳು ನಿಂತಿವೆ. ಗುತ್ತಿಗೆದಾರರು ಸೇರಿದಂತೆ ಕಾರ್ಮಿಕರು ಕೆಲಸ ಮುಂದುವರಿಸಲು ಭಯಪಡುತ್ತಿದ್ದಾರೆ
ಬೆಂಗಳೂರು, ಜನವರಿ 29: ನಗರದಲ್ಲಿ ಮೆಟ್ರೋ ಪಿಲ್ಲರ್ ಕುಸಿತದಿಂದಾಗಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಡೆಸುತ್ತಿರುವ ವಿವಿಧೆಡೆಯ ಮೆಟ್ರೋ ಕಾಮಗಾರಿಗಳು ನಿಂತಿವೆ. ಗುತ್ತಿಗೆದಾರರು ಸೇರಿದಂತೆ ಕಾರ್ಮಿಕರು ಕೆಲಸ ಮುಂದುವರಿಸಲು ಭಯಪಡುತ್ತಿದ್ದಾರೆ.
ನಗರದಲ್ಲಿ ಎಲ್ಲೆಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಅಲ್ಲಿ ಪರಿಣಾಮಕಾರಿ ಹಾಗೂ ಸುರಕ್ಷತಾ ವಿಧಾನ ಅನುಷ್ಠಾನಗೊಳಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಚಿಂತನೆ ನಡೆಸಿದೆ. ಈ ಮುಖ್ಯ ಕಾರಣದಿಂದಾಗಿ ಮೆಟ್ರೋ ಕಾಮಗಾರಿಗಳು ಸದ್ಯಕ್ಕೆ ಸ್ಥಗಿತಗೊಂಡಿವೆ.
ಕಳೆದ ಜನವರಿ 10ರಂದು ಹೆಣ್ಣೂರು ರಸ್ತೆಯಲ್ಲಿ ನಿರ್ಮಾಣದ ಹಂತದ ಮೆಟ್ರೋ ಕಾಮಗಾರಿಯಲ್ಲಿ ಕಾಂಕ್ರೀಟ್ ಹಾಕಲು ನಿಲ್ಲಿಸಲಾಗಿದ್ದ ಕಬ್ಬಿಣದ ಸರಳುಗಳ ಪಿಲ್ಲರ್ ರಸ್ತೆ ಕುಸಿದು ಅವಘಡ ಸಂಭವಿಸಿತ್ತು. ಘಟನೆಯಲ್ಲಿ ತಾಯಿ ತೇಜಸ್ವಿನಿ (25) ಹಾಗೂ ಅವರ ಎರಡೂವರೆ ವರ್ಷದ ಮಗು ವಿಹಾನ್ ಪ್ರಾಣ ಬಿಟ್ಟಿದ್ದರು. ಇದರ ಹಿಂದೆಯೇ ನಮ್ಮ ಮೆಟ್ರೋ (Namma Metro) ಕಾಮಗಾರಿ, ಗುಣಮಟ್ಟ ಬಗ್ಗೆ ಸಾರ್ವಜನಿಕವಾಗಿ ಆತಂಕ ಹೆಚ್ಚಾಯಿತು.
ಈ ಘಟನೆ ಬೆನ್ನಲ್ಲೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಎಚ್ಚೆತ್ತುಕೊಂಡಿದೆ. ಕಾಮಗಾರಿಗಳ ಪ್ರತಿ ಹಂತಕ್ಕೂ ಪ್ರಾಮಾಣಿಕೃತ ಕಾರ್ಯಾಚರಣೆ (SOP)ವಿಧಾನ ಅಂತಿಮಗೊಳಿಸಿದ ಬಳಿಕವೇ ಕಾಮಗಾರಿಗಳ ಪುನಾರಂಭಕ್ಕೆ ನಿರ್ಧರಿಸಿದೆ.
ಹೆಣ್ಣೂರು ರಸ್ತೆಯಲ್ಲಿ ದುರಂತ ಸಂಭವಿಸುವುದಕ್ಕೆ ಮುನ್ನವೇ ನಾಗವಾರದಿಂದ ಹೆಬ್ಬಾಳವರೆಗಿನ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ನಿರ್ಮಾಣಕ್ಕೆಂದು ಸ್ಟೀಲ್, ಕಬ್ಬಿಣದ ಸರಳುಗಳು/ಚೌಕಟ್ಟುಗಳನ್ನು ನಿಲ್ಲಿಸಲಾಗಿತ್ತು. ಘಟನೆ ಬಳಿಕ ಅವು ಹಾಗೇಯೇ ನಿಂತಿವೆ. ಇಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಇನ್ನೂ ಕಲ್ಯಾಣ ನಗರದಿಂದ ಎಚ್ಬಿಆರ್ ಲೇಔಟ್ ಮಧ್ಯದಲ್ಲಿನ ಸುಮಾರು 10ಕ್ಕೂ ಕಂಬಗಳು ಸಿದ್ಧವಾಗಿವೆ. ಆದರೆ ಎಚ್ಬಿಆರ್ ಲೇಔಟ್ನಿಂದ ಹೊರಮಾವುವರೆಗೆ 23 ಹಾಗೂ ಹೊರಮಾವಿನಿಂದ ಕಸ್ತೂರಿ ನಗರದವರೆಗೆ ಪಿಲ್ಲರ್ ನಿರ್ಮಾಣಕ್ಕಾಗಿ 12 ಕಡೆಗಳಲ್ಲಿ ಕಬ್ಬಿಣದ ಸರಳು ಹಾಕಿ ಬಿಡಲಾಗಿದೆ.
ಸದ್ಯ ನಗರದಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿಗಳ ಪ್ರತಿ ಹಂತಕ್ಕೂ ಪ್ರತ್ಯೇಕವಾಗಿ ಎಸ್ಒಪಿ ರೂಪುಗೊಳ್ಳಲಿದೆ. ಪ್ರತಿ ಪಿಲ್ಲರ್ ಗುಣಮಟ್ಟ, ಎತ್ತರ ಎಷ್ಟಿರಬೇಕು, ಕಂಬಗಳ ಬಲವರ್ಧನೆ, ಮೆಟ್ರೋ ಮಾರ್ಗ ಕಾಮಗಾರಿಯ ಪ್ರತಿ ಹಂತದಲ್ಲಿ ಸುರಕ್ಷತೆ ಈ ಎಲ್ಲವು ಈ ಎಸ್ಒಪಿ ವ್ಯಾಪ್ತಿಗೆ ಬಿಎಂಆರ್ಸಿಎಲ್ ತಂದು ಅಂತಿಮವಾದ ಬಳಿಕವೇ ಕಾಮಗಾರಿಗಳು ಮರು ಆರಂಭಗೊಳ್ಳಲಿವೆ. ಕಾರ್ಮಿಕರು, ಗುತ್ತಿಗೆದಾರರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.