Namma Metro: ನಮ್ಮ ಮೆಟ್ರೋದಲ್ಲೂ ಕನ್ನಡಿಗರ ಉದ್ಯೋಗ ಕಸಿಯಲು ಸಂಚು: ಏನಿದು ವಿವಾದ?
ಟಿಕೆಟ್ ದರ ಏರಿಸಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕಿದೆ ಎಂದು ನಮ್ಮ ಮೆಟ್ರೋ ವಿರುದ್ಧ ಜನ ಸಿಡಿಯುತ್ತಿದ್ದಾರೆ. ಇದೀಗ ಮೆಟ್ರೋ ಕನ್ನಡಿಗರಿಗೆ ಕಣ್ಣು ಕೆಂಪಾಗಿಸುವ ಮತ್ತೊಂದು ಕೆಲಸಕ್ಕೆ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿಯಿಂದ ಕನ್ನಡಿಗರಿಗೆ ಉದ್ಯೋಗಗಳು ಕೈತಪ್ಪುತ್ತಿವೆ ಎಂದು ಹಿಡಿಶಾಪ ಹಾಕುತ್ತಿದ್ದರೆ, ಈಗ ನಮ್ಮ ಮೆಟ್ರೋ ಕೂಡ ತನ್ನ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದ್ದು, ಕನ್ನಡಿಗರ ಉದ್ಯೋಗವಕಾಶಕ್ಕೆ ಮೆಟ್ರೋ ಕೊಳ್ಳಿ ಇಡುತ್ತಿದೆ. ಪರಭಾಷಿಕರಿಗೆ ಮಣೆ ಹಾಕುತ್ತಿದೆ ಎಂದು ಕನ್ನಡಿಗರು ಗರಂ ಆಗಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಕರೆದಿದೆ. ಇದರಲ್ಲಿ ಮೇಲ್ನೋಟಕ್ಕೆ ಕನ್ನಡಿಗರಿಗೆ ಆದ್ಯತೆ ಎಂದು ಹೇಳಲಾಗಿದೆ. ಆದರೆ. ಬಿಎಂಆರ್ಸಿಎಲ್ನ ಎಚ್ಆರ್ ವಿಭಾಗದಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನವರು ಇದ್ದು, ತಮ್ಮವರನ್ನೇ ಕೆಲಸಕ್ಕೆ ಕರೆದುಕೊಳ್ಳಲು ಸಂಚು ರೂಪಿಸಿದ್ದಾರೆ. ಕನ್ನಡ ಗೊತ್ತಿಲ್ಲದ ಪರಭಾಷಿಕರಿಗೂ ಇಲ್ಲಿ ಕೆಲಸ ನೀಡುವ ಹುನ್ನಾರ ನಡೆದಿದೆ ಎಂದು ಬಿಎಂಆರ್ಸಿಎಲ್ ನೌಕರರ ಸಂಘ ಆರೋಪಿಸಿದೆ.

ಕನ್ನಡದವರೇ ಇಲ್ಲಿ ಕೆಲಸಕ್ಕೆ ಬಂದರೆ ಯೂನಿಯನ್ ಮಾಡುತ್ತಾರೆ ಹಾಗೂ ನಮ್ಮ ಮಾತನ್ನು ಕೇಳಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಕೂಡಲೇ ಈ ನೇಮಕಾತಿ ನಿಲ್ಲಿಸಿ, ಕನ್ನಡಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಬೇಕು ಎಂದು ಸಂಘ ಆಗ್ರಹಿಸಿದೆ. ಸದ್ಯ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲ ವಲಯಗಳಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದ್ದು, ಮೊದಲು ಉನ್ನತ ಸ್ಥಾನಗಳಲ್ಲಿರುವ ಅವರನ್ನು ಕೆಲಸದಿಂದ ಮನೆಗೆ ಕಳಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ಮೆಟ್ರೋ ರೈಲು ಓಡಾಡಲ್ಲ ಹುಷಾರ್: ಕರವೇ
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ನಮ್ಮ ಮೆಟ್ರೊ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿರುವುದು ಎದ್ದು ಕಾಣಿಸುತ್ತಿದೆ ಎಂದಿದ್ದಾರೆ.

ಬ್ಯಾಂಕ್ ಮತ್ತು ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೊಗದಿಂದ ದೂರವಿಡಲು ನಿರಂತರವಾಗಿ ಕ್ರಮಕೈಗೊಳ್ಳಲಾಗುತ್ತಿದೆ, ಇದೀಗ ರಾಜ್ಯ ಸರಕಾರದ ಸಂಸ್ಥೆಯಲ್ಲೂ ಕನ್ನಡಿಗರನ್ನು ಕಡೆಗಣಿಸಲು ಕ್ರಮಕೈಗೊಳ್ಳುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕರವೇ ಮೊದಲಿನಿಂದಲೂ ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು ಎನ್ನುವ ನಿಲುವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಉದ್ಯೋಗದ ವಿಚಾರದಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ ಮತ್ತು ಹೊರಾಟದ ಮೂಲಕ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡಲು ಯಶಸ್ವಿಯಾಗಿದೆ ಎಂದು ಹೇಳಿದೆ.
ಈಗ ನಮ್ಮ ಮೆಟ್ರೋದಲ್ಲಿ ಅನ್ಯಭಾಷಿಕರಿಗೆ ಮಣೆ ಹಾಕಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದನ್ನು ಕರವೇ ಗಂಭೀರವಾಗಿ ಪರಿಗಣಿಸಲಿದೆ. ನಮ್ಮ ಮೆಟ್ರೋ ಸಂಸ್ಥೆ ಈಗ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆದು ಕನ್ನಡಿಗರು ಮಾತ್ರ ಆಯ್ಕೆಯಾಗುವಂತೆ ಅಧಿಸೂಚನೆ ಹೊರಡಿಸದಿದ್ದರೆ, ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಾಗುವುದು. ಕನ್ನಡಿಗರ ವಿರೋಧ ಕಟ್ಟಿಕೊಂಡರೆ, ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡುವುದು ಕಷ್ಟವಾಗುತ್ತದೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications