'ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ
ಬೆಂಗಳೂರು, ಅ.20: ನಮ್ಮ ಮೆಟ್ರೋ ಬೇಗ ಕಟ್ರೋ ಎಂಬ ವಾಕ್ಯ ಬೆಂಗಳೂರಿಗರಿಗೆ ಚಿರಪರಿಚಿತ. ಕಳೆದ ಮೂರು ವರ್ಷಗಳಿಂದ ನಗರದ ಪ್ರತಿಷ್ಠಿತ ಸಾರಿಗೆ ವ್ಯವಸ್ಥೆಯಾಗಿ ಬೆಳೆದಿರುವ ಮೆಟ್ರೋಗೆ ಸೋಮವಾರ ಮೂರು ವರ್ಷದ ಹರೆಯ.
ಅಕ್ಟೋಬರ್ 20ರಂದು ಮೆಟ್ರೋಗೆ ಚಾಲನೆ ಸಿಕ್ಕಿ ಮೂರುವರ್ಷವಾಗುತ್ತದೆ. ಅದರೂ, ಮೆಟ್ರೋ ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ಅದರ ಪಾಡಿಗೆ ಅದು ಓಡಾಡಿಕೊಂಡಿದೆ ನಮಗೇನು ಅದರಿಂದ ಅಂಥಾ ಉಪಯೋಗವಾಗುತ್ತಿಲ್ಲ ಎಂಬ ಮಾತುಗಳಿಗೇನು ಕಡಿಮೆಯಿಲ್ಲ.
ಮೆಟ್ರೋ ಅವಘಡಗಳು, ವಿಳಂಬವಾದ ಯೋಜನೆ, ಹೆಚ್ಚಾಗುತ್ತಿರುವ ಯೋಜನಾ ವೆಚ್ಚ, ಮೆಟ್ರೋ ಮೇಲ್ಸೇತುವೆ ಕೆಳಭಾಗದ ಜಾಗ ಏನು ಮಾಡಬೇಕು ಎಂಬ ಯಕ್ಷ ಪ್ರಶ್ನೆ, ಇತ್ತೀಚೆಗೆ 'ಕಾವೇರಿ' ಸುರಂಗ ಕೊರೆದ ಸಾಧನೆ ಎಲ್ಲವೂ ಹಳಿಯ ಮೇಲೆ ಹಾಕಿಕೊಂಡು ಮೆಟ್ರೋ ಸಾಗುತ್ತಿದೆ. [ವೆಬ್ ಸೈಟ್ ನಲ್ಲಿ ಕನ್ನಡದ ಸೊಗಡು]
ಎಲ್ಲೆಲ್ಲಿ ಮೇಟ್ರೋ ಓಡಾಟ: ನಮ್ಮ ಮೆಟ್ರೋ ಭೈಯಪ್ಪನಹಳ್ಳಿ ಯಿಂದ ಇಂದಿರಾನಗರ (ರೀಚ್ 1), ಮಂತ್ರಿ ಸ್ಕ್ವೇರ್ ನಿಂದ ಪೀಣ್ಯ ಕೈಗಾರಿಕಾ ಪ್ರದೇಶ (ರೀಚ್ 3, 3ಎ) ಪ್ರತಿದಿನ ಸುಮಾರು 45,000 ಪ್ರಯಾಣಿಕರನ್ನು ಮೆಟ್ರೋ ಹೊತ್ತೊಯ್ಯುತ್ತಿದೆ.

ಬಾಕಿ ಇರುವ ಕಾಮಗಾರಿ: ರೀಚ್ 3ಬಿ : ಪೀಣ್ಯದಿಂದ ನಾಗಸಂದ್ರ;
ರೀಚ್ 4: ನ್ಯಾಷನಲ್ ಕಾಲೇಜ್ ನಿಂದ ಆರ್ ವಿ ರಸ್ತೆ
ರೀಚ್ 4ಎ: ಆರ್ ವಿ ರಸ್ತೆಯಿಂದ ಪುಟ್ಟೇನಹಳ್ಳಿ
ಸುರಂಗ ಮಾರ್ಗ: ಸಂಪಿಗೆ ರಸ್ತೆಯಿಂದ ನ್ಯಾಷನಲ್ ಕಾಲೇಜು
ಎರಡನೇ ಹಂತ: ಪುಟ್ಟೇನಹಳ್ಳಿಯಿಂದ ಅಂಜನಾಪುರ, ಹೆಸರಘಟ್ಟ ಕ್ರಾಸ್ ನಿಂದ ಬಿಐಇಸಿ
ಎರಡನೇ ಹಂತವನ್ನು ಗ್ರೀನ್ ಮೆಟ್ರೋ ಎಂದು ಕರೆಯಲಾಗುತ್ತಿದ್ದು, ಸರಿ ಸುಮಾರು 32 ಸ್ಟೇಷನ್ ಗಳು ತಲೆ ಎತ್ತಲಿವೆ. ಇದಕ್ಕೆಲ್ಲ ವಿದ್ಯುತ್ ಪೂರೈಕೆ ಮಾಡಲು ಪೀಣ್ಯ ಸಬ್ ಸ್ಟೇಷನ್ ಹಾಗೂ ಕೆಪಿಟಿಸಿಎಲ್ ಸಿದ್ಧವಾಗಿವೆ.[ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ]
ಸಮಯ/ದರ: ಗ್ರೀನ್ ಲೈನ್ ಮೆಟ್ರೋ ಬೆಳಗ್ಗೆ 6 ರಿಂದ ರಾತ್ರಿ 11 ರ ತನಕ ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿದ್ದು, 30 ನಿಮಿಷಗಳ ಕಾಲ ಸ್ಟೇಷನ್ ನಲ್ಲಿ ನಿಲುಗಡೆ ಮಾಡಲಿದೆ. ಒಮ್ಮೆಗೆ 975 ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಮೂರು ಕೋಚಿನ ರೈಲು ಇದಾಗಿದೆ. ಕನಿಷ್ಠ ಪ್ರಯಾಣ ದರ 10, ಗರಿಷ್ಠ 23 ರು.
ಬೆಂಗಳೂರು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಭಾಗಗಳನ್ನು ಸಂಪರ್ಕಿಸಲು ನೆರವಾಗುವ ಮೆಟ್ರೋ ಯೋಜನೆ ಮುಂದಿನ ವರ್ಷದಲ್ಲಿ ಸಂಪೂರ್ಣ ಕಾರ್ಯಗತವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್ ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಭರವಸೆ ನೀಡಿದ್ದಾರೆ.[ಮೆಟ್ರೋ ಮೇಲೆ ಹಿಂದಿ ಹೇರಿಕೆ ಏಕೆ?]

* ಪೂರ್ವ-ಪಶ್ಚಿಮ ಕಾರಿಡಾರ್ (ಪರ್ಪಲ್ ಲೈನ್) 18.10 ಕಿ.ಮೀ ಭೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ
* ಉತ್ತರ-ದಕ್ಷಿಣ ಕಾರಿಡಾರ್ (ಗ್ರೀನ್ ಲೈನ್) 24.20 ಕಿ.ಮೀ ನಾಗಸಂದ್ರದಿಂದ ಪುಟ್ಟೇನಹಳ್ಳಿ
* ಒಟ್ಟು ದೂರ: 42.30 ಕಿ.ಮೀ
* ಎಲಿವೇಟೆಡ್ ಮಾರ್ಗ: 33.48 ಕಿ.ಮೀ
* ಸುರಂಗ ಮಾರ್ಗ: 8.82 ಕಿ.ಮೀ
* ಪೂರ್ವ-ಪಶ್ಚಿಮ ಮಾರ್ಗ: ಕಬ್ಬನ್ ಪಾರ್ಕ್-ವಿಧಾನಸೌಧ-ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ-ಮೆಜೆಸ್ಟಿಕ್- ಸಿಟಿ ರೈಲ್ವೆ ಸ್ಟೇಷನ್-ಮಾಗಡಿ ರಸ್ತೆ-ಹೊಸಹಳ್ಳಿ-ವಿಜಯನಗರ-ಅತ್ತಿಗುಪ್ಪೆ-ದೀಪಾಂಜಲಿ ನಗರ-ಮೈಸೂರು ರಸ್ತೆ. [ತಲೆಎತ್ತಲಿದೆ ರಿಟೇಲ್ ಅಂಗಡಿಗಳು]
* ಉತ್ತರ-ದಕ್ಷಿಣ ಮಾರ್ಗ: ನಾಗಸಂದ್ರ-ದಾಸರಹಳ್ಳಿ-ಜಾಲಹಳ್ಳಿ-ಮೆಜೆಸ್ಟಿಕ್-ಚಿಕ್ಕಪೇಟೆ-ಕೆಆರ್ ಮಾರುಕಟ್ಟೆ-ನ್ಯಾಷನಲ್ ಕಾಲೇಜ್-ಲಾಲ್ ಬಾಗ್-ಸೌತ್ ಎಂಡ್ ಸರ್ಕಲ್-ಜಯನಗರ-ಆರ್ ವಿ ರಸ್ತೆ- ಬನಶಂಕರಿ-ಜೆಪಿ ನಗರ-ಪುಟ್ಟೇನಹಳ್ಳಿ
ಹೆಚ್ಚಿನ ಮಾಹಿತಿಗೆ ಬಿಎಂಆರ್ಸಿ ವೆಬ್ ತಾಣ ಸಂಪರ್ಕಿಸಬಹುದು












Click it and Unblock the Notifications