Breaking; ಬೆಂಗಳೂರಿಗೆ ಅಮಿತ್ ಶಾ, ಬರಮಾಡಿಕೊಂಡ ಕಟೀಲ್
ಬೆಂಗಳೂರು, ಆಗಸ್ಟ್ 04; ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಒಂದು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬುಧವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಮಿತ್ ಶಾ ಬರಮಾಡಿಕೊಂಡರು.
ಗುರುವಾರ ಬೆಂಗಳೂರಿನಲ್ಲಿ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ಸಾಂಸ್ಕೃತಿಕ ಇಲಾಖೆ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಮದರ್ ಡೈರಿಗೆ ಭೇಟಿ ನೀಡಲಿದ್ದಾರೆ. ಎರಡು ಕಾರ್ಯಕ್ರಮಗಳ ಬಳಿಕ ಅರ್ಧಗಂಟೆಗಳ ಕಾಲ ರಾಜ್ಯದ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾತ್ರ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಅಮಿತ್ ಶಾ ರಾಜ್ಯ ಭೇಟಿ ಬಿಜೆಪಿ ನಾಯಕರು, ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ.
ಕಾಂಗ್ರೆಸ್ ಲೇವಡಿ; ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಬೆಂಗಳೂರು ಭೇಟಿ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಲೇವಡಿ ಮಾಡಿದೆ. ಈ ಕುರಿತು ಸರಣಿ ಟ್ವೀಟ್ಗಳನ್ನು ಪಕ್ಷ ಮಾಡಿದೆ.
#ಜನಅಕ್ರೋಶ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾಗಿದ್ದು, ಕಾರ್ಯಕರ್ತರ ಆಕ್ರೋಶವನ್ನೂ ಎದುರಿಸುತ್ತಿರುವ ಬಿಜೆಪಿ ಸರ್ಕಾರ ICU ಸೇರಿರುವುದಕ್ಕೆ ಅಮಿತ್ ಶಾ ಅವರು ಆತಂಕದಲ್ಲಿ ಓಡೋಡಿ ಬರುತ್ತಿದ್ದಾರಂತೆ ಎಂದು ಹೇಳಿದೆ.
ಅಮಿತ್ ಶಾ ಭೇಟಿ ಬಳಿಕ ಯಾರ ತಲೆದಂಡವಾಗಬಹುದು? ಎಂದು ಕರ್ನಾಟಕ ಬಿಜೆಪಿಯನ್ನು ಪ್ರಶ್ನಿಸಿದೆ. ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯಾಧ್ಯಕ್ಷ ಈ ಮೂವರಲ್ಲಿ ಯಾರ ಕುರ್ಚಿ ಕುಸಿಯಲಿದೆ? ಎಂದು ಕಾಂಗ್ರೆಸ್ ಕೇಳಿದೆ.
ಮತ್ತೊಂದು ಟ್ವೀಟ್ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಧಿಡೀರ್ ಭೇಟಿ ಹಿಂದಿರುವ ಉದ್ದೇಶವೇನು?. ಕಾನೂನು ಅವ್ಯವಸ್ಥೆಯನ್ನ ಕಣ್ತುಂಬಿಕೊಳ್ಳುವುದಕ್ಕೋ?. ICU ನಲ್ಲಿರುವ ಬಿಜೆಪಿ ಕರ್ನಾಟಕದ ಕೊನೆಯ ದರ್ಶನ ಮಾಡುವುದಕ್ಕೋ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಗೆ ಇನ್ನಷ್ಟು 'ಶವ ರಾಜಕೀಯ'ದ ಟಾಸ್ಕ್ ಕೊಡುವುದಕ್ಕೋ?. ಕದ್ದುಮುಚ್ಚಿ ಆಗಮಿಸುತ್ತಿರುವುದರ ಹಿಂದಿನ ಅಜೆಂಡಾವೇನು? ಎಂದು ಬಿಜೆಪಿಗೆ ಪ್ರಶ್ನೆ ಎಸೆದಿದೆ.












Click it and Unblock the Notifications