ಮೈಸೂರು ಒಡೆಯರ್ ಗೆ ರಿಲೀಫ್ ಕೊಟ್ಟ ಸುಪ್ರೀಂ ತೀರ್ಪು
ಮೈಸೂರು, ಸೆ. 28: ಸುಮಾರು ಮೂವತ್ತೆಂಟು ವರ್ಷಗಳಿಂದ ನಡೆಸುತ್ತಿದ್ದ ನ್ಯಾಯಾಂಗ ಹೋರಾಟದಲ್ಲಿ ಜಯ ಸಿಕ್ಕಿದ್ದಕ್ಕೆ ಮೈಸೂರು ಒಡೆಯರ್ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಅದರೆ, ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬದುಕಿದ್ದಾಗಲೇ ಈ ತೀರ್ಪು ಬಂದಿದ್ದರೆ ಚೆನ್ನಾಗಿತ್ತು ಎಂದು ಪ್ರಮೋದಾ ದೇವಿ ಅಭಿಪ್ರಾಯಪಟ್ಟಿದ್ದಾರೆ.
1977 ಮತ್ತು 1986ರ ನಡುವಣ ಅವಧಿಯಲ್ಲಿ ಬೆಂಗಳೂರು ಅರಮನೆಯ ಸುತ್ತಲಿದ್ದ ಖಾಲಿ ಜಾಗಕ್ಕೆ ಹೇರಿದ್ದ ಆಸ್ತಿ ತೆರಿಗೆಯ ವಿರುದ್ಧ ಒಡೆಯರ್ ಹಾಗೂ ಸರ್ಕಾರದ ನಡುವೆ ವ್ಯಾಜ್ಯ ನಡೆದಿತ್ತು. ಈ ಕಾನೂನು ಹೋರಾಟ ಕೊನೆಗೂ ಅಂತ್ಯ ಕಂಡಿದ್ದು, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮೈಸೂರು ಒಡೆಯರ್ ಮನೆತನದ ಪರ ಬಂದಿದೆ.

ಬೆಂಗಳೂರು ಅರಮನೆ ಸುತ್ತಲಿನ ಖಾಲಿ ಜಮೀನಿನ ಒಟ್ಟು ಮಾರ್ಕೆಟ್ ಮೌಲ್ಯ ರು.2 ಲಕ್ಷ ಎಂದು ಪರಿಗಣಿಸಿ 1976ರ ಯುಎಲ್ ಸಿಆರ್ ಕಾಯ್ದೆ ಅನ್ವಯ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೂ ಇದನ್ನೇ ಗರಿಷ್ಠ ಪರಿಹಾರ ಮೊತ್ತವನ್ನಾಗಿ ತೆಗೆದುಕೊಳ್ಳಬೇಕು ಎಂದಿದೆ.
ಆದರೆ ತೆರಿಗೆ ಅಧಿಕಾರಿಗಳು ಈ ಮೊದಲು ಈ ಜಾಗದ ಮಾರುಕಟ್ಟೆ ಮೌಲ್ಯವನ್ನು 1977 ರಿಂದ 1986 ತನಕ ರು.13 ಕೋಟಿಯಿಂದ ರು.31 ಕೋಟಿ ಎಂದು ಪರಿಗಣಿಸಿ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಿದ್ದರು.
ತೆರಿಗೆ ಅಧಿಕಾರಿಗಳ ಲೆಕ್ಕಾಚಾರ ಮತ್ತು 2005ರ ಹೈಕೋರ್ಟ್ ವ್ಯಾಲ್ಯುಯೇಶನ್ ಎರಡಕ್ಕೂ ಸುಪ್ರೀಂ ಕೋರ್ಟ್ ಅಸಮ್ಮತಿ ವ್ಯಕ್ತಪಡಿಸಿ ಯುಎಲ್ ಸಿಆರ್ ಕಾಯ್ದೆ ಅನ್ವಯ ಆಸ್ತಿ ತೆರಿಗೆ ಲೆಕ್ಕಾಚಾರ ಸರಿಪಡಿಸಿ ಮೌಲ್ಯವನ್ನು ನಿಗದಿಪಡಿಸಿದೆ.
ವಸತಿ ಹಾಗೂ ವಸತಿ ರಹಿತ ಜಾಗಕ್ಕೆ ಆಸ್ತಿ ತೆರಿಗೆ ಕಟ್ಟಿದ್ದರೂ ಕೇವಲ ಖಾಲಿ ಜಾಗದ ಮೇಲಿನ ಆಸ್ತಿ ತೆರಿಗೆ ಬಗ್ಗೆ 38 ವರ್ಷದಿಂದ ಹೋರಾಟ ನಡೆದಿತ್ತು. ನ್ಯಾ.ಎ.ಕೆ. ಸಿಕ್ರಿ ಮತ್ತು ನ್ಯಾ.ರೋಹಿಂಟನ್ ಫಾಲಿ ನಾರಿಮನ್ ಹಾಗೂ ಇನ್ನಿತರರಿದ್ದ ಪೀಠ ಮಾರಾಟ ಬೆಲೆಯ ಮೇಲೆ ವೆಲ್ತ್ ಟ್ಯಾಕ್ಸ್ ನಿಗದಿಪಡಿಸಿದ್ದಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿ ಯುಸಿಎಲ್ ಆರ್ ಕಾಯ್ದೆಯನ್ನು ಉಲ್ಲೇಖಿಸಿ ರು.2 ಲಕ್ಷಕ್ಕೆ ಮಿತಿಗೊಳಿಸಿ ಆದೇಶ ಹೊರಡಿಸಿದರು.












Click it and Unblock the Notifications