ಜಾತಿ ವಿಭಜನೆ, ಧರ್ಮ ವಿಭಜನೆ ವಿರುದ್ಧ ಮುನಿರತ್ನ ಗೆಲುವು: ಶಿವಕುಮಾರ್
ಬೆಂಗಳೂರು, ಮೇ 31: ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸಿನ ಮುನಿರತ್ನ ನಾಯ್ಡು ಗೆಲುವು ಸಾಧಿಸಿದ್ದಕ್ಕೆ ಡಿ.ಕೆ. ಸಹೋದರರು ಹರ್ಷ ವ್ಯಕ್ತಪಡಿಸಿದ್ದಾರೆ.
"ಎಲ್ಲಾ ಬೆಳವಣಿಗೆಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸಿ, ಇವತ್ತು ಐತಿಹಾಸಿಕ ತೀರ್ಪನ್ನು ರಾಜರಾಜೇಶ್ವರಿ ನಗರದ ಮತದಾರರು ನೀಡಿದ್ದಾರೆ. ನಮ್ಮ ಅಭ್ಯರ್ಥಿ ಜಾತಿ ಬೇಧ, ಪಕ್ಷ ಬೇಧ ಮರೆತು ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಸಂಸತ್ ಸದಸ್ಯರ ಜೊತೆ ಜೋಡಿ ಎತ್ತಿನಂತೆ ಕೆಲಸ ಮಾಡಲು ಜನರು ಅನುವು ಮಾಡಿಕೊಟ್ಟಿದ್ದಾರೆ," ಎಂದು ಸದಾಶಿವನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದರು.
"ಇಲ್ಲಿ ನಾವು ನಮ್ಮ ಅಭ್ಯರ್ಥಿ ಇದ್ದಾರೆ ನಮಗೆ ಕ್ಷೇತ್ರವನ್ನು ಬಿಟ್ಟುಕೊಡಿ ಎಂದು ಜೆಡಿಎಸ್ ಬಳಿ ಮನವಿ ಮಾಡಿಕೊಂಡಿದ್ದೆವು. ಆದರೆ ಅವರೇ ತೀರ್ಮಾನ ತೆಗೆದುಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಆದರೆ ಇವತ್ತು ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಇದು ತುಂಬಾ ಸಂತೋಷದ ವಿಷಯ," ಎಂದು ಅವರು ತಿಳಿಸಿದರು.

"ಅಭಿವೃದ್ಧಿ ಮಾಡುವ ಅಭ್ಯರ್ಥಿ ವಿರುದ್ಧ ಯಾರು ಏನೇ ಅಪಪ್ರಚಾರ ಮಾಡಿದರೂ ಜನರು ಕೈ ಹಿಡಿಯುತ್ತಾರೆ ಎಂಬುದಕ್ಕೆ ಈ ಫಲಿತಾಂಶ ಉದಾಹರಣೆ," ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
"ಕ್ಷೇತ್ರದಲ್ಲಿ ಒಬ್ಬರು ಧರ್ಮ ವಿಭಜನೆ ಮಾಡಿದರೆ, ಮತ್ತೊಬ್ಬರು ಜಾತಿ ವಿಭಜನೆ ಮಾಡಿ ಮತ ಗಿಟ್ಟಿಸುವ ಕುತಂತ್ರ ನಡೆಸಲು ಮುಂದಾಗಿದ್ದರು. ಆದರೆ ಇದಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಅಭಿವೃದ್ಧಿ ಪರ ಶಾಸಕರನ್ನು ಆಯ್ಕೆ ಮಾಡಿದ್ದಾರೆ," ಎಂದು ಸಂಸದ ಡಿ.ಕೆ. ಶಿವಕುಮಾರ್ ತಿಳಿಸಿದರು.
"ಅಭಿವೃದ್ಧಿ ಮಾಡಿದರೆ ಜನರು ಕೈ ಜೋಡಿಸುತ್ತಾರೆ ಎಂಬುದಕ್ಕೆ ಈ ಗೆಲುವು ಉದಾಹರಣೆ. ಇದು ನನ್ನ ಗೆಲುವಲ್ಲ ಡಿ.ಕೆ. ಸುರೇಶ್ ಅವರ ಗೆಲುವು," ಎಂದು ಗೆದ್ದ ಅಭ್ಯರ್ಥಿ ಮುನಿರತ್ನ ನಾಯ್ಡು ಹೇಳಿದರು.











Click it and Unblock the Notifications