40 ದಿನಗಳಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಚ್ಎಎಲ್ ಅಂಡರ್ಪಾಸ್
ಬೆಂಗಳೂರು, ಆಗಸ್ಟ್ 21: ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗ ಎಚ್ಎಎಲ್ ಮುಖ್ಯ ಗೇಟ್ ಜಂಕ್ಷನ್ನಲ್ಲಿ ತನ್ನ ಬಹುನಿರೀಕ್ಷಿತ ಅಂಡರ್ಪಾಸ್ ಅನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದ್ದು, ಓಡಾಟಕ್ಕೆ ಮುಕ್ತವಾಗಲಿದೆ.
ಈ ಅಂಡರ್ಪಾಸ್ ಸಂಚಾರಕ್ಕೆ ಮುಕ್ತವಾದರೆ, ವೈಟ್ಫೀಲ್ಡ್ನಿಂದ ಎಚ್ಎಎಲ್ ಹಳೆ ಏರ್ಪೋರ್ಟ್ ರಸ್ತೆವರೆಗಿನ ಮಿತಿಮೀರಿದ ಟ್ರಾಫಿಕ್ ತಗ್ಗಲಿದ್ದು, ವಾಹನ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
"ಇತ್ತೀಚೆಗೆ 19 ಕೋಟಿ ವೆಚ್ಚದ ಕುಂದಲಹಳ್ಳಿ ಅಂಡರ್ಪಾಸ್ನ್ನು ತೆರೆದಿದ್ದು, ಮಾರತ್ತಹಳ್ಳಿ ಮತ್ತು ವರ್ತೂರು ಬಳಿ ಸಂಚಾರ ಸುಗಮಗೊಳಿಸಿದೆ. ಎಚ್ ಎಎಲ್ ಅಂಡರ್ ಪಾಸ್ ನಲ್ಲಿ ರ್ಯಾಂಪ್ ಹಾಗೂ ಸೆಂಟ್ರಲ್ ಬಾಕ್ಸ್ ಗಳ ಕಾಮಗಾರಿ ಬಾಕಿ ಉಳಿದಿದ್ದು, 40 ದಿನಗಳಲ್ಲಿ ಪೂರ್ಣಗೊಳ್ಳಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಲವು ಪ್ರಮುಖ ಕಾಮಗಾರಿಗಳ ಮುಕ್ತಾಯಕ್ಕೆ ಅಡ್ಡಿಯಾದ ಮಳೆ
ಯೋಜನೆಗಳ ಮುಖ್ಯ ಇಂಜಿನಿಯರ್ ಎಂ. ಲೋಕೇಶ್ ಮಾತನಾಡಿ, "ಕೆಲಸವು ಎಚ್ಎಎಲ್ ಪ್ರದೇಶದಲ್ಲಿ ಭರದಿಂದ ಸಾಗುತ್ತಿದೆ. ನಾವು ಒಳಚರಂಡಿ ಕಾಮಗಾರಿ ಮತ್ತು ಪೈಪ್ಗಳ ಅಳವಡಿಕೆಯನ್ನು ಪೂರ್ಣಗೊಳಿಸಿದ್ದೇವೆ. ಮಳೆಯಿಂದಾಗಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಸಮಯ ಹಿಡಿಯುತ್ತಿದೆ, ಆದರೆ ಈಗ 35 ರಿಂದ 40 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ" ಎಂದು ಭರವಸೆ ವ್ಯಕ್ತಪಡಿಸಿದರು.
ಎಚ್ಎಲ್ ಬಳಿ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗುತ್ತದೆ
ಯೋಜನೆಯು ಕುಂದಲಹಳ್ಳಿ ಅಂಡರ್ಪಾಸ್ ಮಾದರಿಯಲ್ಲಿತ್ತು, ಮತ್ತು 2018 ರಲ್ಲಿ ಪ್ರಾರಂಭವಾಯಿತು. ಒಮ್ಮೆ ಪೂರ್ಣಗೊಂಡ ನಂತರ, ವೈಟ್ಫೈಲ್ಡ್ ಮತ್ತು ದೊಮ್ಮಲೂರಿನಿಂದ ಬರುವ ವಾಹನಗಳು ಎಚ್ಎಲ್ ಹಳೆ ವಿಮಾನ ನಿಲ್ದಾಣ ಸಮೀಪ ಸಿಗ್ನಲ್ನಲ್ಲಿ ನಿಲ್ಲದೆ ಮುಕ್ತವಾಗಿ ಹಾದು ಹೋಗುವುದರಿಂದ ಸಂಚಾರ ಸುಗಮವಾಗಲಿದೆ.
ಅದೇ ರೀತಿ, ಹಳೆ ಮದ್ರಾಸ್ ರಸ್ತೆಯಿಂದ ಬರುವ ವಾಹನಗಳು ಎಚ್ಎಎಲ್ ಮುಖ್ಯ ಗೇಟ್ ಜಂಕ್ಷನ್ನಿಂದ ದೊಮ್ಮಲೂರು ಅಥವಾ ಮಾರತ್ತಹಳ್ಳಿ ಕಡೆಗೆ ಹೋಗಲು ಸುಲಭವಾಗುತ್ತದೆ.
ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತ
ದಿಢೀರ್ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ ಪುರಂ ಹಾಗೂ ಮಹದೇವಪುರ ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿ ಕುಂದಲಹಳ್ಳಿಯಲ್ಲಿ ಅಂಡರ್ ಪಾಸ್ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರಿಂದ ಅಧಿಕೃತ ಉದ್ಘಾಟನೆಗೆ ಕಾಯುವ ಬದಲು ಬಿಬಿಎಂಪಿ ಒಂದು ತಿಂಗಳ ಹಿಂದೆಯೇ ಅಂಡರ್ಪಾಸ್ನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದೆ.
"19.5 ಕೋಟಿ ವೆಚ್ಚದಲ್ಲಿ ಕುಂದಲಹಳ್ಳಿ ಅಂಡರ್ಪಾಸ್ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಹೇಳಿದ್ದು, ಅದೇ ವೆಚ್ಚದಲ್ಲಿ ಎಚ್ಎಎಲ್ ಅಂಡರ್ಪಾಸ್ ಕೂಡ ನಿರ್ಮಾಣವಾಗಲಿದೆ" ಎಂದು ಎಂಜಿನಿಯರ್ ಹೇಳಿದ್ದಾರೆ.
ಹಲವು ಕಾಮಗಾರಿ ಮುಗಿಸಲು ಅಡ್ಡಿಯಾದ ಮಳೆ
ಸ್ವಾತಂತ್ಯ್ರ ಅಮೃತ ಮಹೋತ್ಸವದ ವೇಳೆಗೆ ಹಲವು ಕಾಮಗಾರಿಗಳನ್ನು ಮುಗಿಸಿ ಲೋಕಾರ್ಪಣೆಗೊಳಿಸುವ ಉದ್ದೇಶಹೊಂದಿದ್ದ ಬಿಬಿಎಂಪಿಗೆ ಮಳೆ ಅಡ್ಡಿಯಾಯಿತು. ಬೆಂಗಳೂರಿನಲ್ಲಿ ಎಡಬಿಡದೆ ಸುರಿದ ಮಳೆ ಬಿಬಿಎಂಪಿಗೆ ತಲೆನೋವಾಯಿತು. ಮಳೆ ಡಾಂಬರೀಕರಣ ಕೆಲಸಕ್ಕೆ ಅಡ್ಡಿ ಮಾಡಿದ ನಂತರ, ಬಹುನಿರೀಕ್ಷಿತ ಶಿವಾನಂದ ಸರ್ಕಲ್ನ ಉಕ್ಕಿನ ಮೇಲ್ಸೇತುವೆ ಕೂಡ ಆಗಸ್ಟ್ 15ರಂದು ಉದ್ಘಾಟನೆಯಾಗಲಿಲ್ಲ. ಈಗ ಸ್ಟೀಲ್ ಬ್ರಿಡ್ಜ್ನ ಒಂದು ಬದಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಬಸವೇಶ್ವರನಗರದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕೂಡ ನಿಧಾನವಾಗುವ ಸಾಧ್ಯತೆ ಇದೆ. ಕೋರಮಂಗಲ ವ್ಯಾಲಿಯಿಂದ ಬೆಳ್ಳಂದೂರು ಕೆರೆಗೆ ನೀರು ಹರಿಯಲು ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕೂಡ ವಿಳಂಬವಾಗಿದೆ.
ಚುನಾವಣೆ ಹಿನ್ನೆಲೆ ಕಾಮಗಾರಿಗೆ ವೇಗ ಸಾಧ್ಯತೆ
ಬೆಂಗಳೂರು ನಾಗರಿಕರು ಈಗಾಗಲೇ ಮಿತಿಮೀರಿದ ಟ್ರಾಫಿಕ್, ಹಾಳಾದ ರಸ್ತೆಗಳು, ರಸ್ತೆ ಗುಂಡಿಗಳ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಇದೇ ವಿಚಾರಗಳೇ ಮುಖ್ಯವಾಗಲಿದ್ದು, ಹಲವು ಕಡೆ ಕಾಮಗಾರಿಗಳನ್ನು ಮುಗಿಸಿ, ಟ್ರಾಫಿಕ್ ಕಿರಿಕಿರಿಯನ್ನು ಕೊಂಚ ಕಡಿಮೆ ಮಾಡಿದರೆ ಚುನಾವಣೆಯಲ್ಲಿ ಮತ ಕೇಳಲು ಸುಲಭವಾಗಲಿದೆ ಎನ್ನುವ ಆಲೋಚನೆ ಸರ್ಕಾರದ್ದಾಗಿದೆ. ಮಳೆ ಕೂಡ ಬಿಡುವು ನೀಡಿರುವುದರಿಂದ ಕಾಮಗಾರಿಗಳು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.