ಬಿಜೆಪಿ ಕಚೇರಿಯಲ್ಲಿ ಸುಮಲತಾ, ಮುಂದಿನ ನಡೆಯ ಬಗ್ಗೆ ಹೇಳಿದ್ದೇನು?
Recommended Video
ಬೆಂಗಳೂರು, ಜೂನ್ 08: "ನನಗೆ ಯಾರೆಲ್ಲ ಬೆಂಬಲಿಸಿದ್ದೆನೋ ಅವರಿಗೆಲ್ಲ ಕೃತಜ್ಞತೆ ಹೇಳುವುದು ನನ್ನ ಕರ್ತವ್ಯ. ಆದ್ದರಿಂದ ನಾನು ಬಿಜೆಪಿ ಕಚೇರಗೆ ಆಗಮಿಸಿದ್ದೇನೆ" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಶನಿವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿದ್ದ ಸುಮಲತಾ ಅವರು ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಸ್ಪಷ್ಟ ಪಡಿಸಿದರು.
ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಟ್ಟಿದೆಯೇ ಬಿಜೆಪಿ!?
ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಯೋಚನೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಬೆಂಬಲಿಸುವಂತೆ ಬಿಜೆಪಿಯೇನು ನನ್ನ ಕೇಳಿಲ್ಲ. ಈ ಬಗ್ಗೆ ನಾನೂ ಯೋಚಿಸಿಲ್ಲ. ಇನ್ನೇನಿದ್ದರೂ ಮಂಡ್ಯಕ್ಕೆ ತೆರಳಿ ಅಲ್ಲಿನ ಜನರ ಸೇವೆ ಮಾಡುವುದೇ ನನ್ನ ಮುಂದಿನ ದಾರಿ" ಎಂದು ಅವರು ಹೇಳಿದರು.
ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಅಸಹಜ ಅನ್ನಿಸಲಿಲ್ಲ, ಆದರೆ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದು ಸ್ವಲ್ಪ ಅಸಹಜ ಎನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಪತ್ರಕರ್ತರಿಗೆ ಉತ್ತರಿಸಿದ ಅವರು, "ಅದರಲ್ಲಿ ಅಸಹಜ ಎನ್ನುವಂಥದ್ದು ಏನಿದೆ? ನನಗೆ ಚುನಾವಣೆಯ ಸಮಯದಲ್ಲಿ ಯಾರೆಲ್ಲ ಬೆಂಬಲಿಸಿದ್ದರೋ ಅವರಿಗೆಲ್ಲ ಕೃತಜ್ಞತೆ ಹೇಳುವುದು ನನ್ನ ಕರ್ತವ್ಯವಾಗಿತ್ತು. ಆದ್ದರಿಂದ ಇಲ್ಲಿಗೆ ಆಗಮಿಸಿದ್ದೇನೆ. ಬಿ ಎಲ್ ಸಂತೋಷ್ ಅವರು ನನಗೆ ಮೊದಲು ಸಿಕ್ಕಿರಲಿಲ್ಲ, ಆದ್ದರಿಂದ ಇಂದು ಅವರನ್ನು ಭೇಟಿ ಮಾಡಿ ಕೃತಜ್ಞತೆ ಅರ್ಪಿಸಿದ್ದೇನೆ" ಎಂದು ಅವರು ಹೇಳಿದರು.