ಮಳೆಯೂ ಇಲ್ಲ, ಗಾಳಿಯೂ ಇಲ್ಲ; ಬೆಂಗಳೂರಲ್ಲಿ ನೆಲಕ್ಕುರುಳಿದ 20ಕ್ಕೂ ಹೆಚ್ಚು ಕಂಬಗಳು
ಬೆಂಗಳೂರು, ಆಗಸ್ಟ್ 24: ನಿನ್ನೆ ಮಳೆಯೂ ಸುರಿಯಲಿಲ್ಲ, ಜೋರಾದ ಗಾಳಿಯೂ ಬೀಸಲಿಲ್ಲ. ಆದರೆ, ಚಿಕ್ಕಬಾಣಾವರ ಹಾಗೂ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ನೋಡುವಷ್ಟರಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ಉರುಳಿ ಬಿದ್ದಿದ್ದವು. ಇದನ್ನು ಕಂಡ ಸ್ಥಳೀಯರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇದೇನಪ್ಪಾ ಆಯ್ತು? ಅಂತ ಮೊದಲಿಗೆ ತಲೆಕೆಡಿಸಿಕೊಂಡಿದ್ದರು. ಕೊನೆಗೆ ಗೊತ್ತಾಗಿದ್ದು, ಇದು ಲಾರಿ ಚಾಲಕನೊಬ್ಬ ಮಾಡಿರುವ ಅವಾಂತರ ಎಂದು.
ರಾತ್ರಿ ಇದ್ದಕ್ಕಿದ್ದಂತೆ ನೂರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಧ್ಯರಾತ್ರಿ ಸುಮಾರಿಗೆ ಚಿಕ್ಕಬಾಣಾವರ ಹಾಗೂ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿ ದೊಡ್ಡ ಫಜೀತಿಯನ್ನೇ ತಂದಿಟ್ಟಿದೆ. ಇದರಿಂದ ಇಲ್ಲಿನ ನಿವಾಸಗಳಿಗೆ ಕತ್ತಲಿನ ಭಾಗ್ಯವೂ ಸಿಕ್ಕಿದೆ.

ನಿನ್ನೆ ತಡರಾತ್ರಿ ಸುಮಾರು 1:30ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಎಂ.ಸ್ಯಾಂಡ್ ಟಿಪ್ಪರ್ ವಾಹನವನ್ನು ನಿದ್ರಾಸ್ಥಿತಿಯಲ್ಲೇ ಚಾಲನೆ ಮಾಡಲು ಡ್ರೈವರ್ ಮುಂದಾಗಿದ್ದಾನೆ. ಈ ವೇಳೆ ಟಿಪ್ಪರ್ನ ಹಿಂಭಾಗವು ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ವೈರ್ಗೆ ಸಿಲುಕಿಕೊಂಡಿದೆ. ಇದನ್ನು ಗಮನಿಸದ ಡ್ರೈವರ್ ಟಿಪ್ಪರ್ ಅನ್ನು ಹಾಗೆಯೇ ಚಾಲನೆ ಮಾಡಿಕೊಂಡು ಮುಂದೆ ಹೊರಟೇ ಬಿಟ್ಟಿದ್ದಾನೆ. ನೋಡ ನೋಡುತ್ತಿದ್ದಂತೆಯೇ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಒಂದಾದ ಮೇಲೊಂದರಂತೆ ಧರೆಗುರುಳಿವೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಟ್ ಆಗಿದೆ. ಇದರ ಬೆನ್ನಲ್ಲೇ ನೂರಾರು ಮನೆಗಳಿಗೆ ಕಗ್ಗತ್ತಲ ಭಾಗ್ಯವನ್ನು ಡ್ರೈವರ್ ಕರುಣಿಸಿದ್ದಾನೆ. ಟಿಪ್ಪರ್ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರಬಹುದು. ಆದರಿಂದಲೇ ಈ ಅವಘಡ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಈ ಘಟನೆಯಿಂದ ಚಿಕ್ಕಬಾಣಾವರದ ಮುಖ್ಯರಸ್ತೆಯಲ್ಲೇ ಈ ಕಂಬಗಳು ನೆಲಕ್ಕುರುಳಿದ್ದು, ಟಿಪ್ಪರ್ನಲ್ಲಿದ್ದ ಎಂ.ಸ್ಯಾಡ್ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಈ ಘಟನೆ ರಾತ್ರಿ ನಡೆದಿರುವ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ಸದ್ಯ ರಸ್ತೆಯಲ್ಲಿ ಬಿದ್ದಿರುವ ಸ್ಯಾಂಡ್ ತೆರವು ಕಾರ್ಯಾಚರಣೆ ಮುಂದುವರಿದಿದೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದ ಲಾರಿ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಂಬಗಳು ಉರುಳಿರುವುದರಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಸಂಜೆಯ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಭಾಗದ ನಿವಾಸಿಗಳಿಗೆ ಇಂದು ಸಂಜೆ ತನಕ ವಿದ್ಯುತ್ ಪೂರೈಕೆ ಅನುಮಾನ. ಮಾಹಿತಿಯ ಪ್ರಕಾರ ಸಂಜೆ 7 ಗಂಟೆಯ ವೇಳೆಗೆ ಈ ಭಾಗದ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಬೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಟಿಪ್ಪರ್ ಚಾಲಕ ಎಡವಟ್ಟಿನಿಂದ ಒಂದು ಏರಿಯಾದ ಜನರೆಲ್ಲ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.












Click it and Unblock the Notifications